ಸ್ಯಾಂಡಲ್ ವುಡ್: ಕಡಲ ತೀರದ ಭಾರ್ಗವ. ಸೆಟ್ಟೇರಿದ ದಿನದಿಂದ ಸುದ್ದಿಯಲ್ಲಿರುವ ಸಿನಿಮಾ. ಸಿನಿಮಾ ಟೈಟಲ್ಲೇ ಸಖತ್ ಕ್ಯೂರಿಯಾಸಿಟಿ ಅಲೆಯನ್ನು ಸೃಷ್ಟಿಸಿತ್ತು. ಸಿನಿಮಾ ಟೀಸರ್, ಪೋಸ್ಟರ್ ಕೂಡ ಅದಕ್ಕಿಂತ ಹೆಚ್ಚಿನ ಕುತೂಹಲವನ್ನು ಹುಟ್ಟಿಸಿತ್ತು. ಇದೀಗ ಆ ಭರವಸೆಯನ್ನು ದುಪ್ಪಟ್ಟು ಮಾಡುವಂತ ಚಿತ್ರದ ಬಹು ನಿರೀಕ್ಷಿತ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಟೀಸರ್ ಬಿಡುಗಡೆ ಮಾಡಿ ಏನೋ ಹೊಸತನವಿದೆ ಎಂಬ ಫೀಲ್ ಕೊಟ್ಟಿದ್ದ ಕಡಲ ತೀರದ ಭಾರ್ಗವ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ‘ಸಮಯವೇ’ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಎಲ್ಲರನ್ನು ಭಾವನೆಗಳ ಲೋಕದಲ್ಲಿ ಆವರಸಿಕೊಳ್ಳುವಂತೆ ಮಾಡಿದೆ. ಸಾಗಿ ಬಂದ ದಾರಿಯ ನೆನಪಿಸುವ ಈ ಹಾಡು ಎಲ್ಲರ ಮನಸ್ಸಿಗೂ ಅತ್ಯಾಪ್ತವಾಗಿದೆ. ಹಾಡು ಕೇಳಿದ ಪ್ರತಿಯೊಬ್ಬರ ಮನದಲ್ಲೂ ಭಾವನೆಗಳು ಕಾಡಲು ಶುರುವಿಟ್ಟಿದೆ. ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ, ಸಂಗೀತ ಒಳಗೊಂಡ ಈ ಹಾಡಿಗೆ ಮನಸೋಲದವರಿಲ್ಲ. ಕಾಡುವ ಈ ಹಾಡಿಗೆ ವಿ ನಾಗೆಂದ್ರ ಪ್ರಸಾದ್ ಪದ ಪೋಣಿಸಿದ್ದು, ಭಾವನೆಗಳ ಆಳಕ್ಕೆ ಇಳಿಯುವಂತೆ, ಮಂತ್ರ ಮುಗ್ಧವಾಗಿಸುವಂತೆ ದನಿಯಾಗಿದ್ದಾರೆ ಖ್ಯಾತ ಗಾಯಕ ವಿಜಯ್ ಪ್ರಕಾಶ್. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಎಲ್ಲರ ಹುಬ್ಬೇರಿಸುವಂತಿದ್ದು, ಹೊಸಬರ ಸಿನಿಮಾ ಎನ್ನಲಾರದಷ್ಟು ಪ್ರಾಮಿಸಿಂಗ್ ಆಗಿ ಮೂಡಿ ಬಂದಿತ್ತು. ಇದೀಗ ಚಿತ್ರದ ಹಾಡು ಅದನ್ನೂ ಮೀರಿಸಿದೆ.
ಇಬ್ಬರು ಸ್ನೇಹಿತರು ಹಾಗೂ ನಾಯಕಿ ಸುತ್ತ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ‘ಕಡಲ ತೀರದ ಭಾರ್ಗವ’. ಪನ್ನಗ ಸೋಮಶೇಖರ್ ಚಿತ್ರದ ಸೂತ್ರಧಾರ. ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಇವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನವ ಪ್ರತಿಭೆಗಳಾದ ಭರತ್ ಗೌಡ, ವರುಣ್ ರಾಜು ಪಟೇಲ್ ನಾಯಕ ನಟರಾಗಿ ಚಂದನವನಕ್ಕೆ ಈ ಸಿನಿಮಾ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಕೇವಲ ನಾಯಕ ನಟರಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಈ ಇಬ್ಬರು ಮೊದಲ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಚಿತ್ರದ ನಾಯಕ ನಟಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇವಕಲ ಸ್ಟುಡಿಯೋ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಚಿತ್ರದಲ್ಲಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಒಳಗೊಂಡ ಹಲವು ಕಲಾವಿದರ ತಾರಾಬಳಗವಿದೆ. ಬೆಂಗಳೂರು, ಕೊಡಗು, ಉಡುಪಿ, ಭಟ್ಕಳ, ಮುರುಡೇಶ್ವರದ ಕಡಲ ತೀರದಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಅನಿಲ್ ಸಿ.ಜೆ ಸಂಗೀತ ಸಂಯೋಜನೆ, ಕೀರ್ತನ್ ಪೂಜಾರ್ ಚೆಂದದ ಸಿನಿಮ್ಯಾಟೋಗ್ರಫಿ, ಆಶಿಕ್ ಕುಸುಗೊಳ್ಳಿ, ಉಮೇಶ್ ಬೋಸಗಿ ಸಂಕಲನ ಚಿತ್ರಕ್ಕಿದೆ. ಬಿಡುಗಡೆಯ ಆಸುಪಾಸಿನಲ್ಲಿರುವ ಸಿನಿಮಾ ಸದ್ಯದಲ್ಲೇ ಹೆಚ್ಚಿನ ಮಾಹಿತಿಯೊಂದಿಗೆ ಎದುರುಗೊಳ್ಳಲಿದೆ.