ಲಾಕ್ಡೌನ್ಗೆ ಮುಂಚೆ ಬಿಡುಗಡೆಯಾಗಿದ್ದ ನಟ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಮತ್ತೆ ಬಿಡುಗಡೆಗೆ ಸಜ್ಜಾಗಿದೆ.
ಆ.27ರಂದು ಈ ಚಿತ್ರವು ಮತ್ತೆ ರಿಲೀಸ್ ಆಗಲಿದೆ. ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಸಂದರ್ಭದಲ್ಲಿ ಆಗಸ್ಟ್ ಮೊದಲ ವಾರದಲ್ಲೇ ಚಿತ್ರದ ಮರುಬಿಡುಗಡೆಗೆ ಚಿತ್ರತಂಡವು ಸಿದ್ಧತೆ ನಡೆಸಿತ್ತು. ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಪ್ರೇಕ್ಷಕರ ಭರ್ತಿಗೆ ಸರ್ಕಾರ ಅವಕಾಶ ನೀಡಿ ಆದೇಶ ಹೊರಡಿಸಬಹುದು ಎಂದು ಚಿತ್ರತಂಡವು ಕಾಯುತ್ತಿತ್ತು.
ಆದರೆ ಸರ್ಕಾರ ಈ ಕುರಿತು ಯಾವುದೇ ನಿರ್ಧಾರವನ್ನು ಇಲ್ಲಿಯವರೆಗೂ ತೆಗೆದುಕೊಳ್ಳದೇ ಇರುವುದರಿಂದ ಹಾಗೂ ಸೆಪ್ಟೆಂಬರ್ನಲ್ಲಿ ‘ಸಲಗ’, ‘ಭಜರಂಗಿ–2’ ಮುಂತಾದ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬರುವ ಕಾರಣದಿಂದ ಆಗಸ್ಟ್ 27ರಂದೇ ಚಿತ್ರದ ಮರು ಬಿಡುಗಡೆಗೆ ನಿರ್ಧರಿಸಲಾಗಿದೆ.
‘ಕಳೆದ ಏಪ್ರಿಲ್ 16ರಂದು ಬಿಡುಗಡೆಯಾದ ನಮ್ಮ ಕೃಷ್ಣ ಟಾಕೀಸ್ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಪ್ರೇಕ್ಷಕರಿಂದ ಲಭ್ಯವಾಗಿತ್ತು. ಆ.27ರಂದು ಚಿತ್ರದ ರಿ–ರಿಲೀಸ್ ಮಾಡುತ್ತಿದ್ದೇವೆ. ಮರಳಿ ಯತ್ನವ ಮಾಡು ಎನ್ನುವಂತೆ, ಲಾಕ್ಡೌನ್ ಮುಗಿದ ನಂತರದ ಮತ್ತೊಂದು ಪ್ರಯತ್ನ ನಮ್ಮದು’ ಎಂದು ಚಿತ್ರದ ನಿರ್ದೇಶಕ ವಿಜಯಾನಂದ್ ತಿಳಿಸಿದ್ದಾರೆ.