ಅಪ್ಪು ಪಿಆರ್ ಕೆ ಪ್ರೊಡಕ್ಷನ್ ಮೂಲಕ ಹಲವು ವಿಭಿನ್ನ ಸಿನಿಮಾಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಇದರೊಂದಿಗೆ ಕರ್ನಾಟಕದ ಬಗ್ಗೆ ಅವರು ಒಂದು ಡಾಕ್ಯುಮೆಂಟರಿ ಮಾಡಿದ್ದರು. ಇದರ ಟೈಟಲ್ ಟೀಸರ್ ಡಿ.6 ಕ್ಕೆ ಬಿಡುಗಡೆಯಾಗಲಿದೆ. ಈ ವಿಚಾರ ಕೇಳುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡುತ್ತಿದ್ದಾರೆ.
ಈ ಕುರಿತು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕಮಾರ್ ಘೋಷಣೆ ಮಾಡಿದ್ದಾರೆ. ಇದನ್ನು ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ವಿನಯ್ ರಾಜ್ ಕುಮಾರ್ ಕೂಡ ಶೇರ್ ಮಾಡಿದ್ದಾರೆ.
ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ಮಾಡಿದ್ದ ಅಮೋಘ ವರ್ಷ ಜೊತೆ ಸೇರಿಕೊಂಡು ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕದ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದರು. ರಾಜ್ಯದ ನಾನಾ ಪ್ರದೇಶಗಳಿಗೆ ಭೇಟಿ ನೀಡಿ, ಚಿತ್ರೀಕರಿಸಲಾಗಿತ್ತು.
ಸದ್ಯದ ಮಾಹಿತಿಯಂತೆ ಇದಕ್ಕೆ ʼಗಂಧದ ಗುಡಿʼ ಎಂದು ಹೆಸರಿಡಬಹುದು ಎನ್ನಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಕೂಡ ಇದರಲ್ಲಿ ಕಾಣಿಸಲಿದ್ದಾರೆ. ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಕಾರಣಕ್ಕೆ ಅಂದೇ ಆ ಟೀಸರ್ ರಿಲೀಸ್ ಮಾಡಬೇಕು ಎಂಬುವುದು ಪುನೀತ್ ಅವರ ಕನಸಾಗಿತ್ತು. ಆದರೆ, ಅದು ನನಸಾಗುವ ಮೊದಲೇ ಪುನೀತ್ ಇಹಲೋಕ ತ್ಯಜಿಸಿದ್ದರು. ಈ ಕಾರಣಕ್ಕೆ ಆ ಟೀಸರ್ ರಿಲೀಸ್ ಆಗಿಲ್ಲ. ಈಗ ಅದನ್ನು ಡಿಸೆಂಬರ್ 6ಕ್ಕೆ ರಿಲೀಸ್ ಮಾಡಲಾಗುತ್ತಿದೆ. ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚಕ ಅನುಭವ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್, ದಿನಾಂಕ ಘೋಷಿಸುವುದರ ಮೂಲಕ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಈ ಕುರಿತು ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್, ಅಪ್ಪು ಅವರ ಕನಸೊಂದು 01.11.2021 ರಂದು ಬೆಳಕು ಕಾಣಬೇಕಿತ್ತು. ಅ ಕನಸಿಗಿದು ಅಲ್ಪವಿರಾಮವಷ್ಟೇ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ ಎಂದು ಬರೆದುಕೊಂಡಿದ್ದಾರೆ.