ಬೆಂಗಳೂರು : ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ, ನವೆಂಬರ್ 1ರ ಕರ್ನಾಟಕ ರಾಜೋತ್ಸವ ದಿನ ನಟ ಪುನೀತ್ ರಾಜ್ಕುಮಾರ್ ಸಿದ್ಧಪಡಿಸಿದ್ದ ಡಾಕ್ಯುಮೆಂಟರಿ ಬಿಡುಗಡೆಯಾಗಬೇಕಿತ್ತು. ಆದ್ರೆ, ವಿಧಿಯಾಟದ ಮುಂದೆ ಸೋತ ಅಪ್ಪು ಅಕ್ಟೋಬರ್ 29ಕ್ಕೆ ಇಹಲೋಹ ತ್ಯಜಿಸಿಬಿಟ್ರು.
ಹಾಗಾಗಿ ಅವ್ರು ಕನಸಾದ ಕರುನಾಡ ಕುರಿತಾದ ವಿಶೇಷ ಡಾಕ್ಯುಮೆಂಟರಿ ಬಿಡುಗಡೆಯಾಗಲಿಲ್ಲ. ಇನ್ನೀದು ಕನಸಾಗಿಯೇ ಉಳಿಯಬೋದು ಅನ್ನೋ ನಿರಾಶೆಯಲ್ಲಿದ್ದ ಆಭಿಮಾನಿಗಳಿಗೆ ಸಧ್ಯ ಅಶ್ವಿನಿ ಪುನೀತ್ ರಾಜ್ಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಪಿಆರ್ಕೆ ಪ್ರೊಡಕ್ಷನ್ಸ್ ಮಹತ್ವದ ಘೋಷಣೆಯೊಂದನ್ನ ಮಾಡಿದ್ದು, ”ಅಪ್ಪು ಅವರ ಕನಸೊಂದು ನವೆಂಬರ್ 1, 2021 ರಂದು ಬೆಳಕು ಕಾಣಬೇಕಿತ್ತು. ಆದರೆ, ಆ ಕನಸಿಗಿದು ಅಲ್ಪವಿರಾಮವಷ್ಟೇ. ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ” ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಅಂದ್ಹಾಗೆ, ಅಕ್ಟೋಬರ್ 27 ರಂದು ಫೇಸ್ಬುಕ್ನಲ್ಲಿ ಪುನೀತ್ ರಾಜ್ಕುಮಾರ್ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ”ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ” ಎಂದು ಪೋಸ್ಟ್ ಹಾಕಿದ್ದರು.