ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ನಿರ್ಮಾಪಕ ಎಂಎನ್ ಕುಮಾರ್ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ ನಡೆಸಿದ್ದು ಹಳೇ ವಿಚಾರ. ಬಲಿಕ ಹಿರಿಯ ಕಲಾವಿದರಾದ ರವಿಚಂದ್ರನ್ ಮತ್ತು ಶಿವಕುಮಾರ್ ಅಂಗಳಕ್ಕೆ ತಲುಪಿ ಮಾತುಕತೆ ಮೂಲಕ ಬಗೆಹರಿಸಲು ಇಬ್ಬರೂ ಪ್ರಯತ್ನಿಸಿದರು.
ಅದರಂತೆ ನಿನ್ನೆ ಅಪರಾಹ್ನ ನಟ ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಅಪರಾಹ್ನ ಆರಂಭವಾದ ಮಾತುಕತೆ ತಡರಾತ್ರಿಯವರೆಗೆ ಮುಂದುವರೆದರೂ ಏಕಮತದ ನಿರ್ಣಯಕ್ಕೆ ಬರಲಾಗದೆ ಇಂದು ಅಥವಾ ನಾಳೆ ಕೂಡ ಮಾತುಕತೆ ಮುಂದುವರಿಯುವ ಸಾಧ್ಯತೆಯಿದೆ. ಇಂದು ಬಹುತೇಕ ಸಂಧಾನ ಮಾತುಕತೆ ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಸತತ ಏಳು ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಸುದೀಪ್, ಎಂಎನ್ ಕುಮಾರ್ ಅವರುಗಳು ತಮ್ಮ-ತಮ್ಮ ಪರವಾದ ವಾದಗಳನ್ನು ಮಂಡಿಸಿದ್ದಾರೆ. ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸುದೀಪ್ ಹಾಗೂ ಎಂಎನ್ ಕುಮಾರ್ ಅವರೂ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆಯಾದರೂ ಕೆಲವು ನಿರ್ಣಯಗಳನ್ನು ಸಭೆಯ ಮುಖಂಡರು ಮಾಡಬೇಕಾಗಿದೆ. ಹಾಗಾಗಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂದು ಅಂತಿಮ ತೀರ್ಮಾನವನ್ನು ಸುದೀಪ್ ಹಾಗೂ ಎಂಎನ್ ಕುಮಾರ್ ಅವರ ಮುಂದಿಡಲಾಗುತ್ತದೆ ಎನ್ನಲಾಗಿದೆ. ಸಭೆಯ ಪ್ರಮುಖರ ತೀರ್ಪಿನ ಅನ್ವಯ ಇಬ್ಬರೂ ಸಹ ನಡೆದುಕೊಳ್ಳಬೇಕಾದ ಷರತ್ತು ಸಹ ವಿಧಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ.