ಅನೇಕ ಮಹಾನ್ ಪುರುಷರಂತೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶವನ್ನು ವಿಮೋಚನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವತಂತ್ರ ಭಾರತದ 2ನೇ ಪ್ರಧಾನಿಯಾಗಿ ಭಾರತೀಯ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಮಹಾನ್ ಪುರುಷರಲ್ಲಿ ಅವರು ಕೂಡ ಒಬ್ಬರಾಗಿದ್ದಾರೆ. ಇಂದು (ಅ.02) ವಿಶ್ವದಾದ್ಯಂತ ಪ್ರಾಮಾಣಿಕತೆ ಮತ್ತು ಸರಳತೆಗೆ ಉದಾಹರಣೆಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಸರಳ ಜೀವನ, ಸರಳ ಸ್ವಭಾವ, ಪ್ರಾಮಾಣಿಕತೆ ಮತ್ತು ಅವರ ದೃಢಸಂಕಲ್ಪಕ್ಕೆ ಹೆಸರುವಾಸಿಯಾಗಿದ್ದರು. ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಅಲ್ಲದೆ ಭಾರತದ ಮೊದಲ ಆರ್ಥಿಕ ಸುಧಾರಕರಾಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪರಮಾಣು ಬಾಂಬ್ ಯೋಜನೆಯನ್ನು ಪ್ರಾರಂಭಿಸಿದರು. ಹಸಿರು ಮತ್ತು ಶ್ವೇತ ಕ್ರಾಂತಿಯನ್ನು ಸಹ ಪ್ರಾರಂಭಿಸಿದರು.ಹಾಲು ವ್ಯಾಪಾರದ ಮೂಲಕ ದೇಶವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸಿದರು. ಸೈನಿಕರು ಮತ್ತು ರೈತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಶಾಸ್ತ್ರಿಯವರು ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯನ್ನು ನೀಡಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಪ್ರಧಾನಿ ಆಗುವ ಮೊದಲು ಅವರು ರೈಲ್ವೆ ಮಂತ್ರಿ ಮತ್ತು ಗೃಹ ಸಚಿವರಂತಹ ಹುದ್ದೆಗಳನ್ನು ಅಲಂಕರಿಸಿದರು. ಆದರೆ ಅವರ ಜೀವನವು ಸಾಮಾನ್ಯ ವ್ಯಕ್ತಿಯಂತೆಯೇ ಇತ್ತು. ಪ್ರಧಾನಿ ನಿವಾಸದಲ್ಲಿ ಕೃಷಿ ಮಾಡುತ್ತಿದ್ದರು. ಕಛೇರಿಯಲ್ಲಿ ಸಿಗುವ ಭತ್ಯೆ ಮತ್ತು ಸಂಬಳದಿಂದಲೇ ಸಂಸಾರ ನಡೆಸುತ್ತಿದ್ದರು. ಒಮ್ಮೆ ಶಾಸ್ತ್ರಿ ಅವರ ಮಗ ಪ್ರಧಾನ ಮಂತ್ರಿ ಕಚೇರಿಯ ಕಾರನ್ನು ಬಳಸಿದ್ದರು. ಅದಕ್ಕೆ ಶಾಸ್ತ್ರಿ ಅವರು ಕಾರಿನ ವೈಯಕ್ತಿಕ ಬಳಕೆಗಾಗಿ ಪೂರ್ಣ ಮೊತ್ತವನ್ನು ಸರ್ಕಾರಿ ಖಾತೆಗೆ ಪಾವತಿಸಿದ್ದರು. ಪ್ರಧಾನಿ ಹುದ್ದೆಯಲ್ಲಿದ್ದರೂ ಅವರಿಗೆ ಸ್ವಂತ ಮನೆಯಾಗಲಿ ಆಸ್ತಿಯಾಗಲಿ ಇರಲಿಲ್ಲ.
ಇನ್ನ ಭಾರತವು 1965 ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಇಳಿಯಿತು. ಈ ಯುದ್ಧದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವಾರು ಮಾತುಕತೆಗಳು ನಡೆದವು. ಸೋವಿಯತ್ ಒಕ್ಕೂಟದ ಅಂದಿನ ಪ್ರಧಾನಿ ಅಲೆಕ್ಸಿ ಕೊಜಿಗಿನ್ ಅವರೊಂದಿಗಿನ ಈ ಒಪ್ಪಂದದ ದಿನಾಂಕವನ್ನು ಜನವರಿ 10, 1966 ರಂದು ನಿಗದಿಪಡಿಸಲಾಯಿತು. ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು 11 ಜನವರಿ 1966 ರ ರಾತ್ರಿ ನಿಗೂಢವಾಗಿ ನಿಧನರಾದರು.