ಆದಿ ಕವಿ ಮಹರ್ಷಿ ವಾಲ್ಮೀಕಿ ನಿರಪರಾಧಿ ಹಾದಿಹೋಕರನ್ನು ಹೆದರಿಸಿ ಹೊಡೆದು ಬಡಿದು ಅವರಲ್ಲದ್ದುದನ್ನು ಕಸಿದುಕೊಂಡು ಜೀವನ ಸಾಗಿಸುತ್ತಿದ್ದ ಒಬ್ಬ ವ್ಯಾಧ, ವಾಲ್ಮೀಕಿಯಾಗಿ ಅದ್ಭುತ ಕಾವ್ಯ ರಾಮಾಯಣವನ್ನು ಬರೆದು ತನ್ನ ಹೆಸರನ್ನು ಸೂರ್ಯ-ಚಂದ್ರ ಇರುವವರೆಗೂ ಅಜರಾಮರ ಎನಿಸಿಕೊಂಡ ಅದ್ಭುತ ವ್ಯಕ್ತಿ!
ದುರ್ಗಮವಾದ ಕಾಡು, ಕಾಡಿನ ಮಧ್ಯ ಹಾದು ಹೋಗುವ ದಾರಿ, ಆ ದಾರಿಯ ಅನತಿ ದೂರದಲ್ಲೊಂದು ಪುಟ್ಟ ಮನೆ. ಆ ಮನೆಯ ಯಜಮಾನನೇ ರತ್ನಾಕರ, ದಾರಿಹೋಕರನ್ನು ಹೆದರಿಸಿ, ಹೊಡೆದು-ಬಡಿದು ಅವರ ಬಳಿ ಇದ್ದುದನ್ನು ಕಸಿದುಕೊಂಡು ಹೆಂಡರು-ಮಕ್ಕಳಿಗೆ ಕೊಟ್ಟು ಖುಷಿ ಪಡುತ್ತಿದ್ದ. ದಾರಿಹೋಕರನ್ನು ದೋಚುವುದೇ ಅವನ ನಿತ್ಯದ ಕಾಯಕ. ನಿಜ ಹೇಳಬೇಕೆಂದರೆ ರತ್ನಾಕರ ಮೊದಲು ಈ ಕೆಲಸ ಮಾಡುತ್ತಿರಲಿಲ್ಲ. ಬೇಡರ ಕಾಯಕವಾದ ಬೇಟೆಯನ್ನಾಡುತ್ತ ಜೀವಿಸುತ್ತಿದ್ದ. ಆದರೆ ಮನೆಯ ಸದಸ್ಯರು ಹೆಚ್ಚಿದಂತೆ ಬೇಟೆಯಿಂದ ಹೊಟ್ಟೆ ಹೊರೆಯುವುದು ಕಷ್ಟವಾದಾಗ ಅನಿವಾರ್ಯವಾಗಿ ಈ ಕಾರ್ಯಕ್ಕಿಳಿಯಬೇಕಾಯಿತು.
ಒಂದು ಶುಭದಿನ, ಮಹರ್ಷಿ ನಾರದರು ಆಕಾಶ ಮಾರ್ಗದಿಂದ ಹೋಗುತ್ತಿರುವಾಗ, ರತ್ನಾಕರ ಇಬ್ಬರು ದಾರಿಹೋಕರನ್ನು ದೋಚುತ್ತಿರುವುದನ್ನು ಕಂಡರು. ರತ್ನಾಕರನ ಪೂರ್ವ ಜನ್ಮದ ಪುಣ್ಯವೋ ಏನೋ ನಾರದರು ಭೂಮಿಗಿಳಿದು ಅದೇ ನಡೆಯುತ್ತ ಬಂದರು. ಬೇಡ ರತ್ನಾಕರ ನಾರದರನ್ನು ಅಡ್ಡಗಟ್ಟಿದ. ಕೈಯಲ್ಲಿದ್ದ ಕೊಡಲಿಯನ್ನು ತೋರಿಸಿ ‘ನಿನ್ನ ಹತ್ತಿರ ಇರುವುದನ್ನೆಲ್ಲ ಕೊಡಿ’ ಎಂದು ಅಬ್ಬರಿಸಿದ. ನಾರದರು ಇತರ ದಾರಿಹೋಕರಂತೆ ಗಾಬರಿಯಾಗದೇ ಶಾಂತಚಿತ್ತದಿಂದ ಹೇಳಿದರು-‘ಇದು ಪಾಪದ ಕೆಲಸ, ಮಾನವನಾಗಿ ಮಾನವರನ್ನು ಹಿಂಸಿಸುವುದೇ?’ ಆಗ ರತ್ನಾಕರ ಅಟ್ಟಹಾಸಗೈಯ್ಯುತ್ತ ಹೇಳಿದ “ನನ್ನ ಮುಂದೆ ಮಾತಾಡುವಷ್ಟು ಧೈರ್ಯವೇ? ಕೊಡುತ್ತಿಯೋ ಇಲ್ಲಾ?” ಎಂದು ಕೊಡಲಿಯನ್ನು ಎತ್ತಿದ. ಆಗ ನಾರದರು “ತಡೆ ತಡೆ” ಎನ್ನುತ್ತ ಕೈತೋರಿದಾಗ ರತ್ನಾಕರನ ಕೈ ಹಾಗೇ ತಡೆಯಿತು. ನಾರದರ ಮುಖ ನೋಡುತ್ತ ಹಾಗೇ ನಿಂತು ಬಿಟ್ಟ. ಆಗ ನಾರದರು ಶಾಂತವಾಗಿ ಕೇಳಿದರು “ಈ ಪಾಪ ಯಾರಿಗಾಗಿ? ನೀನು ಯಾರಿಗಾಗಿ ಅಮಾಯಕರನ್ನು ದೋಚುತ್ತಿರುವೆಯೋ ಅವರೆಲ್ಲರೂ ನೀನು ಮಾಡುತ್ತಿರುವ ಪಾಪದಲ್ಲಿ ಭಾಗಿಗಳಾಗುತ್ತಾರೇನು? ನಾನು ಸತ್ತವಾಗಿಯೂ ನೀನು ಬರುವವರೆಗೂ ಇಲ್ಲಿಯೇ ಕುಳಿತಿರುತ್ತೇನೆ. ನೀನು ಹೋಗಿ ಕೇಳಿ ಬಾ” ಎಂದು ನಾರದರ ಮಾತು ಅವನಿಗೆ ಸರಿ ಅನಿಸಿತು. ಓಡುತ್ತ ಮನೆಗೆ ಹೋದ ಕೇಳಿದ, ಅವರು ಹೇಳಿದರು ನಿನ್ನ ಪಾಪ ನಿಗೆ ಅದರಲ್ಲಿ ನಾವೇಕೆ ಭಾಗಿಗಳಾಗಬೇಕು?’ ರತ್ನಾಕರ ಅಲ್ಲಿಯೇ ಕುಸಿದು ಕುಳಿತ, ನಾರದರ ಮಾತು ಅವನನ್ನು ಮೋಹ ಗೊಳಿಸುತಿತ್ತು. “ಯಾರಿಗಾಗಿ ಈ ಪಾಪ ತಕ್ಷಣ ಎದ್ದು ಓಡತೊಡಗಿದ, ಹೋದವ ನಾರದರ ಕಾಲಿಗೆ ಬಿದ್ದ, ತನ್ನವರು ತನ್ನ ಪಾಪದಲ್ಲಿ ಪಾಲುದಾರರಾಗಲು ಒಪ್ಪಲಿಲ್ಲವೆಂದ ದುಃಖಿಸುತ್ತ ಹೇಳಿದ. ಕೈಮುಗಿದು “ದಾರಿ ತೋರಿಸಬೇಕು” ಎಂದು ಪರಿಪರಿಯಾಗಿ ಬೇಡಿಕೊಂಡ. ನಾರದರು ಅವನ ಮೈದಡವುತ್ತ “ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಬಂದು ಹೋಗುವ ಈ ನಡುವೆ ಕತ್ತಲೆ! ಈ ಕತ್ತಲೆಯಲ್ಲಿ ಸರ್ವರಿಗೂ ದಾರಿ ತೋರುವ ಜ್ಯೋತಿಯೊಂದನ್ನು ನಾವು ಬೆಳಗಿಸಬೇಕು. ಅದೇ ಮಾನವ ಜನ್ಮದ ಸಾರ್ಥಕತೆ, ಆ ಸಾರ್ಥಕತೆಯ ಮಹಾಯೋತಿಯೇ ರಾಮನಾಮ” ಎಂದು ಬೋಧಿಸಿ ನಾನು ಮತ್ತೆ ಮರಳಿ ಬರುವವರೆಗೂ ಏಕಾಗ್ರ ಚಿತ್ರದಿಂದ ರಾಮನಾರು ಜಪಿಸು” ಎಂದು ಹೇಳಿ ಹೊರಟು ಹೋದರು.
ರತ್ನಾಕರ ದಾರಿಯ ಅನತಿ ದೂರದಲ್ಲಿ ರಾಮನಾಮ ಜಪಿಸುತ್ತ ಕುಳಿತು ಬಿಟ್ಟ, ದಿನ-ತಿಂಗಳು-ವರ್ಷಗಳುರುಳಿದವು. ಆರಂಭದಲ್ಲಿ ಮನದ ಮೂಲೆಯಲ್ಲಿ ನಾರದರ ಆಗಮನದ ಆಸೆಯಿತ್ತು. ವರ್ಷಗಳುರುಳಿದಂತೆ ಆ ಆಸೆಯೂ ಅಳಿಯಿತು. ಸಮಯ ಸರಿಯುತ್ತಲೆ ಇತ್ತು. ಕಾಲಚಕ್ರ ತಿರುಗುತ್ತಲೇ ಇತ್ತು. ರತ್ನಾಕರ ರಾಮಧ್ಯಾನದಲ್ಲಿ ಎಷ್ಟೊಂದು ತಲ್ಲಿನನಾಗಿದ್ದನೆಂದರೆ ಅವನ ಮೈತುಂಬ ಹುತ್ತ ಬೆಳೆಯಿತು. ಅವನು ಕಾಣದೇ ‘ರಾಮ ರಾಮ ರಾಮ’ಎಂಬ ಧ್ವನಿ ಮಾತ್ರ ಕೇಳುತ್ತಿತ್ತು. ರತ್ನಾಕರನ ಪಾಪವೆಲ್ಲ ತೊಳೆದು ಹೋಯಿತು. ನಾರದರ ಆಗಮನವಾಯಿತು. ಹುತ್ತವನ್ನೆಲ್ಲ ಸರಿಸಿ ನಾರದರು ಹೇಳಿದರು-‘ನೀನೀಗ ಪರಿಶುದ್ಧ ಪರಮ ಶ್ರೇಷ್ಟ ಮಾನವ, ನಿನ್ನ ಹೆಸರೀಗ ವಾಲ್ಮೀಕಿ.(ಮೈಮೇಲೆ ಹುತ್ತ ಬೆಳೆದದ್ದಕ್ಕಾಗಿ ಈ ಹೆಸರು) ನೀನೀಗ ಒಬ್ಬ ಶ್ರೇಷ್ಟ ಸಂತ-ಸಾಧು-ಜ್ಞಾನಿ. ನಿನ್ನಿಂದ ಭೂಮಿಯ ಮೇಲೆ ಮಹಾವಿಷ್ಣುವಿನ ಅವತಾರವಾದ ರಾಮಾಯಣ ಬರೆಯಲ್ಪಡಲಿ’ ಎಂದು ಆಶೀರ್ವದಿಸಿದರು. ವಾಲ್ಮೀಕಿ ರಚಿತ ‘ವಾಲ್ಮೀಕಿ ರಾಮಾಯಣ’ ಇಂದು ಸರ್ವ ಹಿಂದೂಗಳ ಪವಿತ್ರ ಗ್ರಂಥ-ಮಹಾಕಾವ್ಯ.
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಇಂದು ನಮ್ಮ ಮಹಾಕಾವ್ಯಗಳಲ್ಲಿ ಒಂದು! ರಾಮಾಯಣವು ಸರ್ವ ಹಿಂದೂಗಳ ಪೂಜನೀಯ ಗ್ರಂಥ, ಇದು ನಮ್ಮ ಪಾಲಿಗೆ ಪುರಾಣವೂ ಹೌದು; ಇತಿಹಾಸವೂ ಹೌದು, ಇಲ್ಲಿ ಲೌಕಿಕ-ಅಲೌಕಿಕ ಬದುಕಿನ ಸಂಗಮವಿದೆ. ಅದರೊಂದಿಗೆ ಇದು ನಮ್ಮ ಸಂಸ್ಕೃತಿ-ಪರಂಪರೆಯ ಕಣಜ. ರಾಮಾಯಣ ತ್ರೇತಾಯುಗದ ಕಥಾನಕವಾಗಿದ್ದರೂ ಇಂದಿಗೂ ನಮ್ಮ ಬದುಕಿಗೆ ತೀರ ಹತ್ತಿರವಾಗಿ ನಿಲ್ಲುತ್ತದೆ. ಭೂಲೋಕವನ್ನು ಉದ್ಧರಿಸಲು ಸಾಕ್ಷಾತ್ ಮಹಾವಿಷ್ಣುನೇ ಶ್ರೀರಾಮನಾಗಿ ಅಯೋದ್ಯೆಯಲ್ಲಿ ದಶರಥ-ಕೌಶಲ್ಯ ರಾಜದಂಪತಿಗಳಿಗೆ ಮಗನಾಗಿ ಜನಿಸುತ್ತಾನೆ. ಆದರ್ಶಮಗನಾಗಿ, ಆದರ್ಶ ರಾಜನಾಗಿ, ಆದರ್ಶ ಪತಿಯಾಗಿ ಧರ್ಮವನ್ನೇ ಬದುಕಿನ ವ್ರತವನ್ನಾಸಿಕೊಳ್ಳುತ್ತಾನೆ. ಮಾನವೀಯ ಮೌಲ್ಯಗಳ ಆರಾಧಕನಾಗಿ, ನುಡಿದಂತೆ ನಡೆಯುವ ಪುರುಷೋತ್ತಮನಾಗಿ ಅಂದು-ಇಂದಿಗೂ ಸರ್ವರಿಗೂ ಮಾದರಿಯೇ ಆಗುತ್ತಾನೆ.