ಕೊಡಗಿನಲ್ಲಿ ಹೋಂಸ್ಟೇ, ರೆಸಾರ್ಟ್ಗಳು ಆರಂಭವಾದ ಬಳಿಕ ಕೊಡಗಿನ ನಿಸರ್ಗದ ನಡುವೆ ಕಾಲ ಕಳೆಯಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಾರಪೂರ್ತಿ ಪಟ್ಟಣದ ಗೌಜು ಗದ್ದಲದಲ್ಲಿ ಕಾಲ ಕಳೆದವರು ಒಂದಷ್ಟು ಸಮಯವನ್ನು ಪ್ರಶಾಂತ ವಾತಾವರಣಲ್ಲಿ ಕಳೆಯಬೇಕೆಂಬ ಹಂಬಲದಿಂದ ಬರುತ್ತಿದ್ದು, ಹೀಗೆ ಬಂದವರು ಬೆಟ್ಟಗುಡ್ಡಗಳ ನಡುವಿನ ನಿಸರ್ಗ ಸುಂದರ ಪ್ರದೇಶದಲ್ಲಿರುವ ಹೋಂಸ್ಟೇ, ರೆಸಾರ್ಟ್ಗಳಲ್ಲಿ ಬೀಡು ಬಿಡುತ್ತಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ.
ದೂರದಿಂದ ಬರುವ ಪ್ರವಾಸಿಗರನ್ನು ತಮ್ಮೆಡೆಗೆ ಆಕರ್ಷಿಸುವುದು ಕೂಡ ಹೋಂಸ್ಟೇಗಳಿಗೆ ಸುಲಭವಾಗಿ ಉಳಿದಿಲ್ಲ. ಅವರು ಇಷ್ಟಪಡುವ ಆಹಾರಗಳು ಮಾತ್ರವಲ್ಲದೆ, ಅವರ ಮೈಮನಕ್ಕೂ ಖುಷಿಕೊಡುವ ಚಟುವಟಿಕೆಗಳಿಗೂ ಆದ್ಯತೆ ನೀಡ ಬೇಕಾಗಿದೆ. ಜತೆಗೆ ತಮ್ಮಲ್ಲಿಗೆ ಆಗಮಿಸುವ ಪ್ರವಾಸಿಗರನ್ನು ಕರೆದೊಯ್ದು ದೇಗುಲ, ಫಾಲ್ಸ್, ಬೆಟ್ಟಗುಡ್ಡಗಳನ್ನು ತೋರಿಸಿಕೊಂಡು ಬರಬೇಕಾಗುತ್ತದೆ. ಹೀಗೆ ತಮ್ಮ ಹೋಂಸ್ಟೇಗೆ ಬರುವ ಪ್ರವಾಸಿಗರಿಗಾಗಿ ಮಡಿಕೇರಿಗೆ 10 ಕಿ.ಮೀ. ದೂರದ ಭಾಗಮಂಡಲ ರಸ್ತೆಯಲ್ಲಿರುವ ಉಡೋತ್ ಮೊಟ್ಟೆ ಎಂಬ ಗ್ರಾಮದ ಕಾಫಿ ಬೆಳೆಗಾರ ವಸಂತ್ ಎಂಬುವರು ಗುಡ್ಡದ ಮೇಲಿಂದ ನಿಂತು ಸುತ್ತಲಿನ ಪ್ರಕೃತಿಯ ವಿಹಂಗಮ ನೋಟವನ್ನು ವೀಕ್ಷಿಸಲು ಅನುಕೂಲವಾಗುವಂತೆ ಗಾಜಿನ ಸೇತುವೆಯನ್ನು ನಿರ್ಮಿಸಿದ್ದು ಇದು ಕೊಡಗಿನ ಆಕರ್ಷಣೆಯಾಗಿದೆ.
ಈ ಗಾಜಿನ ಸೇತುವೆ ಮೇಲೆ ನಿಂತು ಕಣ್ಣು ಹಾಯಿಸಿದರೆ, ಈ ಬೆಟ್ಟಗಳ ನಡುವೆ ಕಾಫಿ ತೋಟಗಳು, ಗದ್ದೆಗಳು ಅದರಾಚೆಗೆ ಬೆಟ್ಟಗಳ ಸಾಲು ಮತ್ತು ಮಡಿಕೇರಿಯನ್ನಾವರಿಸಿದ ಬೆಟ್ಟಗಳು ಕಾಣಿಸುತ್ತವೆ. ಇನ್ನು ಈ ಗಾಜಿನ ಸೇತುವೆಯನ್ನು ಕಾಫಿ ತೋಟದ ನಡುವೆ ಸುಮಾರು ಎಪ್ಪತ್ತೆಂಟು ಅಡಿ ಕಂದಕದ ಕೆಳಗಿನಿಂದ ಕಬ್ಬಿಣದ ಫಿಲ್ಲರ್ ನಿರ್ಮಿಸಿ ಅದ ಮೇಲೆ 33 ಎಂಎಂ ದಪ್ಪದ ಗಾಜನ್ನು ಬಳಸಿ ನಿರ್ಮಿಸಲಾಗಿದೆ. ಈ ಸೇತುವೆ ನಿರ್ಮಾಣದ ಹಿಂದೆ ಕೇರಳದ ತಂತ್ರಜ್ಞರ ಕೈಚಳಕ ಮತ್ತು ಶ್ರಮವಿದೆ. ಸುಮಾರು 33 ಮೀಟರ್ ಉದ್ದದ ಈ ಸೇತುವೆಯ ಅಂಚಿನಲ್ಲಿ ಪ್ರವಾಸಿಗರು ನಿಂತು ಪ್ರಕೃತಿ ಚೆಲುವನ್ನು ಕಣ್ತುಂಬಿಸಿಕೊಳ್ಳಲು ವೃತ್ತಾಕಾರದ ಜಾಗವಿದೆ. ಇಲ್ಲಿ ತಡೆಗೋಡೆಯಿದ್ದು ಇಲ್ಲಿಂದ ನಿಂತು ಸುಂದರ ದೃಶ್ಯಗಳನ್ನು ಸವಿಯಲು ಸಾಧ್ಯವಾಗುತ್ತದೆ. ಈ ಸೇತುವೆಯಲ್ಲಿ 40 ಮಂದಿ ನಿಂತು ವೀಕ್ಷಣೆ ಮಾಡಬಹುದಾದರೂ ಮುಂಜಾಗ್ರತಾ ಕ್ರಮವಾಗಿ ಒಮ್ಮೆಗೆ ಕೇವಲ ಆರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.