News Karnataka Kannada
Friday, May 03 2024
ಸಂಪಾದಕೀಯ

ಮಂಗಳೂರು: ಆಯಕಟ್ಟಿನ ಜಾಗದಲ್ಲಿ ರಾಜಕಾರಣಿಗಳ ಸಂಬಂಧಿಗಳು, ಮತ್ತೆಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾತು

Relatives of politicians at strategic locations, talk of eradicating corruption elsewhere
Photo Credit : Pixabay

ಮಂಗಳೂರು: ಕೈ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮೊದಲಾದವರು ರಾಜ್ಯದ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್‌ ಸರ್ಕಾರ ಎಂದು ಪ್ರತಿದಿನವೆಂಬಂತೆ ಟೀಕೆ ಮಾಡುತ್ತಿದ್ದರು. ಅದಕ್ಕೀಗ ಸಾಕ್ಷಿ ದೊರೆತಂತೆ ಆಗಿದೆ. ಮಾಡಾಳ್‌ ಎಂಬ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್‌ ಮಾಡಾಳ್‌ ಅವರ ಕೆಎಸ್‌ಡಿಎಲ್‌ ಅವರ ಗುತ್ತಿಗೆ ಡೀಲ್‌ ಪ್ರಕರಣವು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬ್ರಹ್ಮಾಂಡ ರೂಪವನ್ನು ಹೊರತಂದಿದೆ. ಇದುವರೆಗೆ ಕೈ ನಾಯಕರು, ಜನಸಾಮಾನ್ಯರು ಭ್ರಷ್ಟಾಚಾರ ಕುರಿತು ಬಾಯಿಬಿಟ್ಟರೆ ಬಿಜೆಪಿ ಮುಖಂಡರು ಎಂದಿನ ಬಾಯಿಬಡುಕ ಶೈಲಿಯಲ್ಲಿ ದಾಖಲೆ ನೀಡಿ, ಕಾನೂನು ಹೋರಾಟ ಮಾಡಿ ಎಂದು ಉಡಾಫೆ ಮಾತುಗಳನ್ನು ಆಡುತ್ತಿದ್ದರು. ಆದರೀಗ ಅವರ ಭ್ರಷ್ಟಕೂಪಕ್ಕೆ ರೆಡ್‌ಹ್ಯಾಂಡ್‌ ದಾಖಲೆಯೊಂದು ದೊರೆತಂತಾಗಿದೆ. ಈ ಹಿನ್ನಲೆಯಲ್ಲಿ ಚುನಾವಣೆ ವೇಳೆ ಬಿಜೆಪಿ ನಾಯಕರು ಏನು ಮಾರುತ್ತರ ನೀಡಿದರೂ ಆರೋಪಕ್ಕೆ ತಿಪ್ಪೆ ಸಾರುವ ಕೆಲಸವಾಗುತ್ತದೆಯೇ ಹೊರತು ಕಳಂಕ ಮುಕ್ತರಾಗುವುದು ಸುತರಾಂ ಸಾಧ್ಯವಿಲ್ಲ.

ಆಯಕಟ್ಟಿನ ಜಾಗಗಳಲ್ಲಿ ರಾಜಕಾರಣಿಗಳ ಸಂಬಂಧಿಗಳ ದುಷ್ಟಕೂಟ: ಇದೀಗ ಭ್ರಷ್ಟಾಚಾರ ಹಗರಣದಲ್ಲಿ ಸಿಕ್ಕಿಬಿದ್ದಿರುವ ಪ್ರಶಾಂತ್‌ ಹೇಳಿಕೇಳಿ ಚೆನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಪುತ್ರ. ತಂದೆ ರಾಜಕಾರಣದಲ್ಲಿದ್ದು, ಕೆಎಸ್‌ಡಿಎಲ್‌ ಅಧ್ಯಕ್ಷರಾಗಿದ್ದರೆ ಪುತ್ರ ತನ್ನ ಕಚೇರಿಯಲ್ಲಿ ಕುಳಿತು ಅಪ್ಪನ ಅವ್ಯವಹಾರಕ್ಕೆ ಡೀಲ್‌ ಕುದಿರಿಸುವ, ಕಮಿಷನ್‌ ಎಣಿಸುವ ಕರಾಮತ್ತು ನಡೆಸುತ್ತಿದ್ದರು. ಅಲ್ಲದೇ ಈತ ಜಲಮಂಡಳಿ ಲೆಕ್ಕಪರಿಶೋಧಕ ನೌಕರ ಎಂಬುದು ವಿಶೇಷ. ಈತ ಸರ್ಕಾರಿ ನೌಕರಿ ಪಡೆದ ಬಗೆ ಹೇಗೆ ಎಂಬುದು ಕೂಡ ನಿಗೂಢ. ಅದು ಕೂಡ ಕೆಎಸ್‌ಡಿಎಲ್‌ ಡೀಲ್‌ನಂತೆ ಹಿಂಬಾಗಿಲ ಪ್ರವೇಶವೇ ಎಂಬುದು ರಾಜ ರಹಸ್ಯ. ಇನ್ನು ಭ್ರಷ್ಟಾಚಾರ ಆರೋಪಿ ಪ್ರಶಾಂತ್‌ ಭ್ರಷ್ಟಾಚಾರವನ್ನು ಸದೆಬಡಿಯುವ ಏಕೈಕ ಆಶಾಕಿರಣವಾಗಿರುವ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಉದ್ಯೋಗ ಪಡೆಯಲು ಪ್ರಯತ್ನಿಸಿದ್ದು ಚೋದ್ಯವೇ ಸರಿ. ಈ ವೇಳೆ ಈತನ ಪೂರ್ವಪರ ವಿಮರ್ಷೆ ಮಾಡಿದ ನಿಷ್ಠಾವಂತ ಅಧಿಕಾರಿಗಳಿಗೆ ಈತನ ಸಾಚಾತನ ತಿಳಿದುಬಂದು ನೇಮಕಾತಿಯಿಂದ ದೂರವಿಟ್ಟಿದ್ದು, ಸುದ್ದಿಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇದರಿಂದ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಮ್ಮವರು, ತಮ್ಮಕುಟುಂಬದವರ ವಿಷವರ್ತುಲವೊಂದನ್ನು ಪ್ರಬಲವಾಗಿ ಸೃಷ್ಟಿಸಿದ್ದು, ಅದನ್ನು ಬೇಧಿಸುವುದು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಿರುವುದು ದಿಟ.

ಭ್ರಷ್ಟಾಚಾರಕ್ಕೆ ವಿವಿಧ ಪಕ್ಷಗಳ ರೇಸ್‌: ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿ ದೇಶ 2ಜಿ ಹಗರಣ, ಆದರ್ಶ ಸೊಸೈಟಿ ಹಗರಣ ಸೇರಿದಂತೆ ಲೆಕ್ಕಹಾಕಲು ಸಾಧ್ಯವಿಲ್ಲದಷ್ಟು ಅಕ್ರಮ, ಅವ್ಯವಹಾರಗಳನ್ನು ದೇಶ ಕಂಡಿದೆ. ಇದೇ ಭ್ರಷ್ಟಾಚಾರ ವಿಷಯವನ್ನು ಮುನ್ನಲೆಗೆ ತಂದು ದೇಶದೆಲ್ಲೆಡೆ ಈ ಸಂಬಂಧ ಹೋರಾಟ, ಪ್ರತಿಭಟನೆ ನಡೆಸಿ ಅಧಿಕಾರಕ್ಕೆ ಬಂದ ಬಿಜೆಪಿಯೂ ಇದೇ ಹಾದಿಯಲ್ಲಿರುವುದು ಸತ್ಯ.

ಇನ್ನು ಅಣ್ಣಾ ಹಜಾರೆಯವರನ್ನು ಮುಂದಿಟ್ಟುಕೊಂಡು ದೇಶದೆಲ್ಲೆಡೆ ರಾಜಕೀಯ ಭ್ರಷ್ಟತೆ ತೊಡೆದು ಸ್ವಚ್ಛತೆ ಕ್ರಾಂತಿ ಮಾಡುತ್ತೇವೆಂದು ಹೊರಟ ಆಪ್‌ ಸರ್ಕಾರದ ಸಚಿವರೂ ಕೂಡ ಈ ಹಿಂದೆ, ಪ್ರಸ್ತುತವೂ ಮದ್ಯ ಹಗರಣದ ಸಂಬಂಧ ಸಿಬಿಐ ವಶದಲ್ಲಿದ್ದಾರೆ. ಇವೆಲ್ಲವೂ ಹೋರಾಟ ಅಧಿಕಾರ ಪಡೆಯಲು ಇರುವ ಮಾರ್ಗ. ಅಧಿಕಾರ ದೊರೆತ ಮೇಲೆ ಅವರ ವರ್ತನೆ, ವ್ಯವಹಾರಗಳೇ ಬೇರೆ ಎಂಬುದಕ್ಕೆ ಸಾಕ್ಷಿ ನೀಡಿವೆ. ಆದರೆ ಅವರೆಲ್ಲರ ಮಾಮೂಲಿ ಆರೋಪವೆಂದರೇ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಸಿದ್ಧ ಸೂತ್ರದ ಹೇಳಿಕೆ ಮಾಮೂಲು.

ನಾಯಕರು ವಿತಂಡ ವಾದ ಬಿಟ್ಟು ಸತ್ಯ ಒಪ್ಪಲಿ: ಭ್ರಷ್ಟಾಚಾರವೆಂಬುದು ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರಿದೆ. ಭ್ರಷ್ಟರು ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ. ಇಂತಹ ದಾಳಿಗಳು ನಡೆದ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಕನಿಷ್ಠ ನೈತಿಕತೆಯಾದರು ರಾಜಕೀಯ ನಾಯಕರಲ್ಲಿ ಬೇಕು. ನಮ್ಮ ಮುಖಂಡರ ಮೇಲೆ ಆದರೇ ರಾಜಕೀಯ ದ್ವೇಷ ಅವರ ಮೇಲೆ ದಾಳಿ ನಡೆದರೇ ರಾಜಕೀಯ ದ್ವೇಷ ಎಂಬ ದ್ವಂದ್ವ ನಡೆ ಬಿಟ್ಟು ಸತ್ಯ ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು