News Karnataka Kannada
Tuesday, April 30 2024
ಸಂಪಾದಕೀಯ

ಬಿಜೆಪಿ ನಾಯಕರ ಒಳಜಗಳಕ್ಕೆ ಕಡಿವಾಣ ಇಲ್ಲವೇ

ಕಾಂಗ್ರೆಸ್  ಸರ್ಕಾರದ ವಿರುದ್ಧ ಎಕ್ಸ್ ಖಾತೆಯಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ರಾಜ್ಯದಲ್ಲಿ ಪಾ‘ಕೈ’ಸ್ತಾನ್ ಸರ್ಕಾರದಿಂದ‌ ತಾಲಿಬಾನ್‌ ಮಾಡೆಲ್‌ ಜಾರಿಯಾಗಿದೆ ಎಂದು ವ್ಯಂಗ್ಯವಾಡಿದೆ.
Photo Credit : News Kannada

ರಾಜ್ಯ ಬಿಜೆಪಿ ವಿಧಾನ ಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕ ಅನಾಥವಾಗಿತ್ತು. ಪಕ್ಷದ ವರಿಷ್ಠರು ಬಿಜೆಪಿ ಪಕ್ಷದ ರಾಜ್ಯ ಮುಖಂಡರ ವಿರುದ್ಧ ಆಕ್ರೋಶಗೊಂಡು ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸೇರಿದಂತೆ ಯಾವುದೇ ಉನ್ನತ ಮಟ್ಟದ ಸ್ಥಾನಮಾನಗಳ ಬಗ್ಗೆ ನಿರ್ಧರಿಸದೇ ಉದ್ದೇಶಪೂರ್ವಕವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ಸದಾನಂದ ಗೌಡ ಸೇರಿದಂತೆ ಬಹಿರಂಗವಾಗಿಯೇ ಹೇಳಿಕೊಂಡು ಹೈಕಮಾಂಡ್‌ ರಾಜ್ಯ ಘಟಕದ ಬಗ್ಗೆ ಅವಕೃಪೆ ತೋರಬಾರದು ಎಂದು ಮನವಿ ಮಾಡಿದ್ದರೂ ಹೈಕಮಾಂಡ್‌ ಸೊಪ್ಪು ಹಾಕಿರಲಿಲ್ಲ.

ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅನಿವಾರ್ಯವಾಗಿ ಅಳೆದು ತೂಗಿ ಮಾಜಿಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಿದ್ದಾರೆ. ರಾಜ್ಯ ಬಿಜೆಪಿಯ ಪಾಲಿಗೆ ಇದೇನು ಸರ್ವಸಮ್ಮತ ಅಭಿಪ್ರಾಯ ಎಂದು ಹೇಳಲು ಸಾಧ್ಯವಿಲ್ಲ. ಹಲವರು ವಿಜಯೇಂದ್ರ ಆಯ್ಕೆ ಬಗ್ಗೆ, ಬಹಿರಂಗವಾಗಿ, ವ್ಯಂಗ್ಯವಾಗಿ ತಮ್ಮ ಆಕ್ರೋಶ, ಅಸಹನೆ, ಸಿಟ್ಟು ಹೊರಹಾಕಿದ್ದಾರೆ.

ಸಿಟಿ ರವಿ ಅವರಂತಹ ನಾಯಕರಂತೂ ‘ಇನ್ನೇನಿದ್ರೂ ವಿಜಯೇಂದ್ರ ಅವರು ಪಕ್ಷ ಕಟ್ಟಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಲೋಕಸಭೆ ಎಲೆಕ್ಷನ್‌ ಟಾರ್ಗೆಟ್‌ ನೀಡಿದ್ದಲ್ಲದೆ. ಈಗ ಏನಾದರೂ ಮಾತನಾಡಿದರೆ ನಮ್ಮ ಮಾತೇ ನಮಗೆ ತಿರುಗುಬಾಣವಾಗುತ್ತದೆ’ ಎನ್ನುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ರವಿ ನಾನು ಬಿಜೆಪಿಗೆ ಸೇರಿ ಮನೆಯ ಮುಂದಿನ ಮರಕ್ಕೆ ಬಿಜೆಪಿ ಬಾವುಟ ಕಟ್ಟಿದ್ದೆ ಬಾವುಟ ನೋಡಿ ನಮ್ಮಪ್ಪ ಇದು ಯಾವ ಪಾರ್ಟಿ? ಯಾವನಿದ್ದಾನೆ ಎಂದು ಕೇಳಿದ್ದರು. ನಾನು ಅಡ್ವಾಣಿ, ವಾಜಪೇಯಿ ಎಂದು ಅಂತ ಅಪ್ಪನಿಗೆ ಹೇಳಿದ್ದೆ. ಅಲ್ಲದೇ ರಾಜ್ಯದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಹೇಳಿದ್ದೆ. ನಿಮ್ದು ಯಾವ ಸೀಮೆ ಪಾರ್ಟಿ ಯಾವ ಕಾಲಕ್ಕೆ ಅಧಿಕಾರ ಬರುತ್ತೆ ದೇವೇಗೌಡರ ಪಾರ್ಟಿ ಸೇರಿಕೋ ಎಂದಿದ್ದರು. ಅವತ್ತು ದೇವೇಗೌಡರು ನೀರಾವರಿ ಸಚಿವರಾಗಿದ್ದರು. ದೇವೇಗೌಡರು ಆಗ ತಾನೆ ಸಮಾಜವಾದಿ ಪಾರ್ಟಿ ಕಟ್ಟಿದ್ದರು. ಆದ್ರೆ ನಾವು ದೇವೇಗೌಡರ ಪಾರ್ಟಿಯನ್ನು ಬಿಟ್ಟು ಬಿಜೆಪಿಯನ್ನು ಆರಿಸಿಕೊಂಡಿದ್ದು ಸಿದ್ಧಾಂತದ ಕಾರಣಕ್ಕಾಗಿ ಎಂದು ಹೇಳಿದ್ದರು.

ಹೋರಾಟ ಮಾಡಿದ್ದೇವೆ. ಪಕ್ಷ ಕಟ್ಟಿದ್ದೇವೆ. ಕಷ್ಟಪಟ್ಟಿದ್ದೇವೆ. ಇವತ್ತು ನಿಮ್ಮ ಕಣ್ಣಿಗೆ ಗುರುತಿಸಿಕೊಳ್ಳುವ ನಾಯಕ. ಅವತ್ತು ಜಾಮೀನು ಕೊಡುವುದಕ್ಕೂ ಯಾರು ಇರಲಿಲ್ಲ. ಆ ಕಾಲದಲ್ಲಿ ಹೋರಾಟ ಮಾಡಿದ್ದೇವೆ. ಅದಕ್ಕೆ ಸಿದ್ಧಾಂತ ಕಾರಣವಾಗಿತ್ತು. ಅಧಿಕಾರ ಸಿಗುತ್ತೆ ಎಂಬ ಕನಸು ನಮಗೆ ಬಿದ್ದಿರಲಿಲ್ಲ. ಸಿದ್ಧಾಂತಕಾಗಿನೇ ಹೋರಾಟ ಮಾಡಿದ್ವಿ . ಸಿದ್ಧಾಂತದ ನಂಬಿಕೆ ಕಾರಣಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ . ಆ ನಂಬಿಕೆ ಕುಸಿದ ದಿನ ಸಾರ್ವಜನಿಕ ಕ್ಷೇತ್ರದಿಂದ ದೂರ ಹೋಗುತ್ತೇನೆ ಎಂದು ಹೇಳಿದ್ದರು.

ಬಿಜೆಪಿಯಿಂದ ಮಾತ್ರ ನ್ಯಾಯ ಕೊಡಲು ಸಾಧ್ಯ. ಅದಕ್ಕೆ ಬಿಜೆಪಿಗೆ ನಾವು ಬಂದಿದ್ದು, ಅದಕ್ಕಾಗಿ ಬಿಜೆಪಿಯಲ್ಲಿ ಇರೋದು. ನನ್ನಂತಹ ಲಕ್ಷ ಜನ ಬಿಜೆಪಿಯಲ್ಲಿ ಯಾಕಿರಬೇಕೆಂದು ಯೋಚಿಸುತ್ತಾರೆ. ವೈಯಕ್ತಿಕ ಅಧಿಕಾರದ ಆಸೆಪಟ್ಟವರು ಬರುತ್ತಾರೆ ಹೋಗುತ್ತಾರೆ . ನಾವು ವೈಚಾರಿಕ ಕಾರಣಕ್ಕಾಗಿ ಬಿಜೆಪಿಯಲ್ಲಿ ಇರುವುದು. ನಮ್ಮ ವೈಚಾರಿಕ ನಿಲುವಿಗೆ ಯಾವಾಗ ಧಕ್ಕೆ ಆಗುತ್ತೋ ಅವತ್ತು ಮಾತ್ರ ಬಿಜೆಪಿಯ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಇದೆಲ್ಲ ಯಾರನ್ನು ಗಮನದಲ್ಲಿರಿಸಿ ಹೇಳಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಪರೋಕ್ಷವಾಗಿ ಸಿಟಿ ರವಿ ಅವರು ನಾವು ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರ ನಾಯಕರು ಇದೀಗ ಪಕ್ಷ ವಂಶಪರಾಂಪರ್ಯದತ್ತ ಸಾಗುತ್ತಿದೆ ಎಂಬುದನ್ನು ಹೇಳಿದ್ದರು.

ಅಡ್ಡ ಕಸುಬಿ ನಾನಲ್ಲ: ಎಡ್ಜೆಸ್ಟ್‌ಮೆಂಟ್‌ ರಾಜಕಾರಣ ಗೊತ್ತಿಲ್ಲ ಎಂದ ಯತ್ನಾಳ್‌: ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನಗೊಂಡಿದ್ದು, ಇದೀಗ ವಿಪಕ್ಷ ನಾಯಕನ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಸಿದ್ದಾರೆ. ಈ ಬಗ್ಗೆ ಚರ್ಚೆಸಲು ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರದಿಂದ ಆಗಮಿಸಿರುವ ವೀಕ್ಷರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ಮಾಡಿದ್ದಾರೆ. ಅಲ್ಲದೇ ಅವರಿಗೆ ಕೆಲ ವಿಚಾರಣಗಳನ್ನು ದೂರು ನೀಡಿದ್ದು, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗವಾಗಿದೆ.

ಇವರ ಹಾಗೆ ಅಡ್ಡ ಕಸಬಿ ಜನ ನಾನಲ್ಲ. ಅಧ್ಯಕ್ಷ ಆಗಬೇಕು. ವಿರೋಧ ಪಕ್ಷದ ನಾಯಕ ನಾನಾಗಬೇಕು. ನನ್ನನ್ನು ಅಧ್ಯಕ್ಷ ಮಾಡದೇ ಇದ್ದಲ್ಲಿ ಹಾಗೆ ಮಾಡುತ್ತೀನಿ ಹೀಗೆ ಮಾಡುತ್ತೇನೆ ಎಂದು ನೀಚ ಕೆಲಸ ನಾನು ಮಾಡುವುದಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ಒಂದು ಮಾತು ಹೇಳಿದ್ದರು. ಯಾರು ಕೂಡ ನಿನ್ನೊಂದಿಗೆ ಇಲ್ಲದಿದ್ದರೂ ಸತ್ಯ ನ್ಯಾಯದ ಪರವಾಗಿ ನೀನೊಬ್ಬನೇ ಹೋರಾಟ ಮಾಡು ಎಂದು ಹೇಳಿದ್ದರು. ಅದೇ ರೀತಿ ನಾನು ನಡೆಯುತ್ತಿದ್ದೇನೆ. ಅದೇ ಕಾರಣಕ್ಕೆ ಉತ್ತರಕರ್ನಾಟಕದಲ್ಲಿ ನನಗೆ, ಹಿಂದು ಧರ್ಮಕ್ಕೆ ಗೌರವ ಸಿಗುತ್ತಿದೆ. ನಾವು ಅಡ್ಜಸ್ಟ್‌ಮೆಂಟ್‌ ರಾಜಕೀಯ ಮಾಡಿಕೊಂಡಿದ್ದರೆ, ನಾನು ಸ್ಲಂ ಏರಿಯಾದಲ್ಲಿ ಇರುತ್ತಿರಲಿಲ್ಲ.

ಕರ್ನಾಟಕದ ರಾಜಕಾರಣಿಗಳು ಬೆಂಗಳೂರಿನಲ್ಲಿ ಎಂತೆಂತ ಮನೆ ಕಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನದು ಸ್ಲಂನಲ್ಲಿ ಮನೆ ಇದೆ. ದಯವಿಟ್ಟು ನನ್ನ ಮನೆಗೆ ಬನ್ನಿ ಎಂದು ನಿರ್ಮಲಾಸೀತಾರಾಮನ್‌ ಗೆ ಹೇಳಿದ್ದೇನೆ. ನಿಮ್ಮನ್ನು ಕರೆಸುವಷ್ಟು ದೊಡ್ಡ ಮನೆ ನನ್ನದಲ್ಲ ಎಂದು ಹೇಳಿದ್ದೇನೆ . ಅದಕ್ಕೆ ಅವರು ನನ್ನದೂ ಮನೆ ಸಣ್ಣದಿದೆ. ಮುಂದಿನ ಬಾರಿ ಬಂದಾಗ ನಮ್ಮ ಮನೆಗೆ ಬನ್ನಿ ಎಂದು ಹೇಳಿದ್ದಾರೆ. ಹಾಗಿದ್ದರೆ ಬನ್ನಿ ಎಂದು ಹೇಳಿದ್ದೇನೆ. ನನಗೆ ಬಹಳ ಸಂತೋಷವಾದ ವಿಷಯೇನೆಂದರೆ ಇಡಿ ರಾಜ್ಯದ ಎಡ್ಜೆಸ್ಟ್‌ಮೆಂಟ್‌ ರಾಜಕಾರಣ ಏನಿದೆ. ಅದನ್ನು ಬಣ್ಣ ಬಯಲು ಮಾಡುವ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿ ಈಗಾಗಲೇ ಒಡೆದ ಮನೆಯಂತಾಗಿದೆ. ಮನೆಯೊಂದು ಮೂರು ಬಾಗಿಲಿನಂತಾಗಿದೆ. ಹಲವು ಶಕ್ತಿಕೇಂದ್ರಗಳು ಬಿಜೆಪಿಯಲ್ಲಿ ರೂಪುಗೊಂಡಿವೆ. ಇದು ಖಂಡಿತವಾಗಿಯೂ ಕೇಸರಿ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಗಟ್ಟಿ ಏಟು ಕೊಡುವುದಂತೂ ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು