ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮುಷ್ಕರದಿಂದ ಕೆಲ ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್ ಆದ ಕಾರಣ ಬಡರೋಗಿಗಳು ಪರದಾಟ ಅನುಭವಿಸುವಂತಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳು ತುರ್ತು ಚಿಕಿತ್ಸೆ ಹೊರತುಪಡಿಸಿ ಬೇರೆ ಯಾವುದೇ ಸೇವೆಗಳು ದೊರೆಯುತ್ತಿಲ್ಲ.
ಮುಷ್ಕರದ ವಿಚಾರ ತಿಳಿಯದ ಬಡರೋಗಿಗಳು ಸೇವೆ ಬಯಸಿ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಫೆ.22ರಂದೇ ಸಂಘಟನೆಗಳು ಮುಷ್ಕರ ನಡೆಸುವುದಾಗಿ ತಿಳಿಸಿದ್ದರೂ ಸುಮ್ಮನಿದ್ದ ಸರ್ಕಾರ ಮುಷ್ಕರ ನಡೆಯುವ ಹಿಂದಿನ ದಿನವಷ್ಟೆ ಮಾತುಕತೆಗೆ ಮುಂದಾಯಿತು. ಇದರಿಂದ ಮುಷ್ಕರದಿಂದ ಮುಖ್ಯವಾಗಿ ಬಡರೋಗಿಗಳು ದಿಕ್ಕೆಡುವಂತಾಗಿದೆ. ಸಾರ್ವಜಿನಿಕರಿಗೆ ಆದ ತೊಂದರೆಗೆ ಸರ್ಕಾರವೇ ಹೊಣೆ ಎಂದು ಸರ್ಕಾರಿ ನೌಕರರ ಸಂಘಟನೆ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ. ಮಂಗಳವಾರ ರಾತ್ರಿಯೇ ಸಂಘಟನೇ ಮುಖಂಡರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದರೂ ಫಲ ದೊರೆತಿಲ್ಲ.
ಶಾಲೆಗಳಲ್ಲಿ ಅಧ್ಯಾಪಕರಿಲ್ಲ: ಸರ್ಕಾರಿ ನೌಕರರ ಮುಷ್ಕರಕ್ಕೆ ಶಾಲಾ ಶಿಕ್ಷಕರು ಬೆಂಬಲ ನೀಡಿರುವುದರಿಂದ ರಾಜ್ಯದ ಶಾಲೆಗಳು ಬಂದ್ ಆಗಿವೆ. ಇದರಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ವಂಚಿತಾಗುವಂತಾಗಿದೆ. ಬೆಂಗಳೂರಿನ ಗಾಂಧಿನಗರದ ಬಹುತೇಕ ಶಾಲೆ ಕಾಲೇಜುಗಳು ಬಂದ್ ಆಗಿದೆ. ಅಲ್ಲದೆ ಪ್ರಥಮ ಪಿಯು ಪರೀಕ್ಷೆ ಮುಂದೂಡಿಕೆಯಾಗಿದೆ.