ಕುಂದಾಪುರ: ತಲ್ಲೂರು ಗ್ರಾಮದ ಕೋಟೆಬಾಗಿಲು ರವಿ ಖಾರ್ವಿ ಅವರು ಪಂಚಗಂಗಾವಳಿ ನದಿಯಲ್ಲಿ ಪಂಜರ ಮೀನು ಕೃಷಿ ಮಾಡುವುದರ ಮುಖಾಂತರ ಯಶಸ್ಸು ಕಂಡುಕೊಂಡಿದ್ದಾರೆ. 3ನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಪೂರೈಸಿರುವ ಅವರು ಮೀನು ಸಾಕಾಣಿಕೆ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿ ಕೂಡ ಹೌದು.
ಹೊಟೇಲ್ ಕಾರ್ಮಿಕರಾಗಿರುವ ರವಿ ಖಾರ್ವಿ ಅವರು ಆಕಸ್ಮಿಕವಾಗಿ ಮೀನು ಕೃಷಿ ಕ್ಷೇತ್ರಕ್ಕೆ ಹೆಜ್ಜೆ ಹಾಕುವುದರ ಮೂಲಕ ಪೂರ್ಣಾವಧಿಯಲ್ಲಿ ಪಂಜರ ಮೀನು ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ. 10 ಕ್ಕೂ ಹೆಚ್ಚಿನ ಜಾತಿಯ ಮೀನುಗಳನ್ನು ಪಂಚಾಗಂಗಾವಳಿ ನದಿಯಲ್ಲಿ ಪಂಚರದಲ್ಲಿ ಬೆಳೆಸುತ್ತಿದ್ದು ವರ್ಷಕ್ಕೆ 4 ರಿಂದ 5 ಲಕ್ಷದ ವರೆಗೆ ದುಡಿಮೆ ಮಾಡುತ್ತಿರುವ ರವಿ ಖಾರ್ವಿ ಮೀನು ಸಾಕಾಣಿಕೆಯಲ್ಲಿಯೂ ಜೀವನವನ್ನು ಮಾಡ ಬಹುದೆಂದು ತೋರಿಸಿಕೊಟ್ಟಿದ್ದಾರೆ.
ಹತ್ತು ವರ್ಷಗಳ ಕಾಲ ಅನುಭವವನ್ನು ಹೊಂದಿರುವ ರವಿ ಖಾರ್ವಿ ಮೀನು ಸಾಕಾಣಿಕೆಯಲ್ಲಿ ಕಂಡು ಕೊಂಡ ಅನುಭವವನ್ನು ಇತರರ ಜತೆ ಹಂಚಿಕೊಂಡು ಹಲವಾರು ಜನರಿಗೆ ತರಬೇತಿಯನ್ನು ನೀಡಿರುವ ಅವರು ಮೀನುಗಾರಿಕಾ ಇಲಾಖೆಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡುತ್ತಿದ್ದಾರೆ. ಅವರನ್ನು ಹಲವಾರು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.
ಹೊಸ ಹೊಸ ಆವಿಷ್ಕಾರದ ಮೂಲಕ ಪಂಜರವನ್ನು ನಿರ್ಮಿಸಿಕೊಳ್ಳುವ ರವಿಖಾರ್ವಿ ನದಿಯಲ್ಲಿ ದೊರಕುವ ಕೆಂಬೆರಿ, ಕುರುಡೆ ಮೀನು, ಕೊಕ್ಕರೊ, ಕಳಸಿ ಮೀನಿನ ಮರಿಗಳನ್ನು ಹಿಡಿದು ಪಂಜರ ಮೀನು ಕೃಷಿಯಲ್ಲಿ ಬಳಸಿಕೊಳ್ಳುತ್ತಾರೆ.
20/10 ರ 1 ಗೂಡಿನಲ್ಲಿ 1200 ರಿಂದ 1500 ಮರಿ ಮೀನುಗಳನ್ನು ಬಿಡಲಾಗುತ್ತದೆ ಮೀನು ಬೆಳವಣಿಗೆ ಕಾಣಲು ಒಂದೂವರೆ ವರ್ಷ ತಗಲುತ್ತದೆ, ಹೆಚ್ಚು ಕಮ್ಮಿ ಒಂದು ಮೀನು ಒಂದರಿಂದ ಒಂದುವರೆ ಕೆಜಿ ವರೆಗೆ ತೂಗುತ್ತದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಮೀನಿಗೆ 400 ರೂ ಬೆಲೆ ಇದೆ. ಒಂದು ಗೂಡಿನಲ್ಲಿ 1ಟನ್ ಮೀನು ಸಿಕ್ಕರೆ ಖರ್ಚೆಲ್ಲಾ ಕಳೆದು ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದು ಎಂದು ರವಿ ಖಾರ್ವಿ ಹೇಳುತ್ತಾರೆ.
ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ರವಿಖಾರ್ವಿ ಯುವ ಸಮುದಾಯಕ್ಕೆ ಮಾದರಿ ವ್ಯಕ್ತಿಯಾಗಿ ಗುರುತಿಸಿ ಕೊಂಡಿದ್ದಾರೆ.