ಯುವಜನರು ಇತ್ತೀಚಿನ ದಿನಗಳಲ್ಲಿ ಟ್ರೆಕಿಂಗ್ ಹೋಗೋದು ಕಾಮನ್. ನಗರ ಜೀವನದ ಜಂಜಾಟಗಳಿಂದ ಬೇಸೆತ್ತಿರುವವರು ಆಗಾಗ್ಗೆ ಟ್ರೆಕಿಂಗ್ ಹೋಗಿ ಚಿಲ್ ಆಗುತ್ತಾರೆ. ಇಂತಹವರಿಗೆ ಹೇಳಿ ಮಾಡಿಸಿದ ತಾಣ ಕುದುರೆಮುಖ.
ಉದ್ಯಾನವನವು 600 ಚದರ ಕಿ.ಮೀ ವಿಸ್ತೀರ್ಣವಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉದ್ಯಾನ ವ್ಯಾಪಿಸಿದೆ. 1892 ಮೀಟರ್ ಎತ್ತರವಿರುವ ಕುದುರೆಮುಖ ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ. ಬೆಂಗಳೂರಿನಿಂದ 350 ಕಿಲೋಮೀಟರ್, ಮಂಗಳೂರಿನಿಂದ 118 ಕಿಲೋಮೀಟರ್ ದೂರದಲ್ಲಿದೆ. ಕುದುರೆಮುಖದ ತುತ್ತತುದಿ ದೂರದಿಂದ ನೋಡಿದಾಗ ಕುದುರೆಯ ಮುಖ ಹೋಲುತ್ತದೆ ಹಾಗಾಗಿ ಈ ಹೆಸರು ಬಂದಿದೆ. ಉದ್ಯಾನದಲ್ಲಿ 200 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಆವಾಸ್ಥಾನ. ಚಿರತೆ, ಸಿಂಹ, ಕೆಂಜಳಿಲು, ನರಿ, ವಿವಿಧ ರೀತಿಯ ಕಪ್ಪೆಗಳು ಸೇರಿದಂತೆ ಸಹಸ್ರಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ತುಂಗೆ, ಭದ್ರೆ ಸೇರಿದಂತೆ ಹಲವಾರು ನದಿಗಳಉಗಮ ಸ್ಥಾನ.
ದಟ್ಟ ಹಸಿರಿನ ಶೋಲಾ ಅರಣ್ಯ, ಗಿರಿಕಂದರಗಳಿಂದ ತುಂಬಿದ್ದು, ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಮುಗಿಲೆತ್ತರಕ್ಕೇರಿದ ಬೆಟ್ಟಗಳು ಪ್ರಕೃತಿಯ ಮುಂದೆ ಮನುಷ್ಯ ಜೀವಿ ಎಷ್ಟು ಶೂನ್ಯ ಎಂಬುದಕ್ಕೆ ಉದಾಹರಣೆಯಾಗಿ ನಿಂತದೆ. ದಿನನಿತ್ಯದ ಗಡಿಬಿಡಿ, ಗದ್ದಲದಿಂದ ದೂರವದ್ದು ಒಂದು ದಿನವಾದರೂ ರಿಲ್ಯಾಕ್ಸ್ ಆಗಬೇಕು ಎಂದು ಬಯಸುವವರಿಗೆ ಹೇಳಿ ಮಾಡಿಸಿದ ಸ್ಥಳ. ನೀರು ಪ್ರತಿ ಜೀವಿಗೆ ಅಗತ್ಯ, ಶೋಲಾ ಅರಣ್ಯದ ಮಧ್ಯಭಾಗದಿಂದ ಒಸರುವ ನೀರಿನ ಚಿಲುಮೆಗಳು ನಿಸರ್ಗ ವಿಜ್ಞಾನ ಬೋಧಕರಂತೆ ಭಾಸವಾಗುತ್ತವೆ.
ಚಾರಣದ ಹಾದಿ ಹೀಗಿದೆ: ಚಾರಣಿಗರು ಭಗವತಿ ಪ್ರದೇಶದಲ್ಲಿರುವ ಅರಣ್ಯ ಇಲಾಖೆಯ ಅಧೀನದಲ್ಲಿರುವ ವಸತಿಗೃಹಗಳಲ್ಲಿಆಶ್ರಯ ಪಡೆದು ತರಬೇತಿ ಪಡೆದ ಗೈಡ್ಗಳ ಮೂಲಕ ಚಾರಣ ಕೈಗೊಳ್ಳಬಹುದು. ಅಲ್ಲದೆ ಕಳಸ ಸುತ್ತಮುತ್ತಲಿನಲ್ಲಿಯೂ ಹಲವಾರು ಹೋಂಸ್ಟೇ, ವಸತಿಗೃಹಗಳಿವೆ.
ಶಿಖರಕ್ಕೆ ಟ್ರೆಕಿಂಗ್ ಮಾಡಬಯಸುವವರು ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ. ಸಂಸೆಯಲ್ಲಿರುವ ಅರಣ್ಯ ಇಲಾಖೆ ಚೆಕ್ಪೋಸ್ಟ್ನಲ್ಲಿ ನಿಗದಿತ ಶುಲ್ಕ ಪಾವತಿಸಿ ಚಾರಣ ಹೋಗಬಹುದು. ಚಾರಣಿಗರಿಗೆ ಮಾರ್ಗದರ್ಶನ ನೀಡಲು ಅನುಭವಿ ಗೈಡ್ಗಳು ಜೊತೆಯಲ್ಲಿರುತ್ತಾರೆ. ಈ ಪ್ರದೇಶ ಅರಣ್ಯವಾದ ಕಾರಣ ಮೋಜು, ಮಸ್ತಿ, ಪ್ಲಾಸ್ಟಿಕ್ ಬಳಕೆ, ಕ್ಯಾಂಪಿಂಗ್ಗೆ ಅವಕಾಶ ಇಲ್ಲ. ಕುದುರೆಮುಖ ಶಿಖರವನ್ನು ತಲುಪಲು 18 ಕಿಲೋಮೀಟರ್ ನಡಿಗೆ ಮಾಡುವುದು ಅಗತ್ಯ. ಪ್ರಕೃತಿಯ ಸೊಬಗು, ಅರಣ್ಯದ ಮೌನ, ನೀರ ಝರಿಗಳ ಝಳು, ಝುಳು ನಾದ ಪರಿಸರಾಸಕ್ತರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಪ್ರಾರಂಭದ ಹಂತದಲ್ಲಿ ತೊರಗಳ ಬದಿಯಲ್ಲಿ ಸಾಗುವ ಚಾರಣ ಹಾದಿ ನಂತರ ಕುರುಚಲು ಅರಣ್ಯ ಹೊಂದಿದ ಅಂದರೆ ಈ ಮೊದಲು ಜನರು ವಾಸವಾಗಿದ್ದ (ಪ್ರಸ್ತುತ ಒಕ್ಕಲೆಬ್ಬಿಸಿ ಬೇರೆಡೆ ಭೂಮಿ, ಪರಿಹಾರ ನೀಡಲಾಗಿದೆ) ಗದ್ದೆ ಬಯಲುಗಳಲ್ಲಿ ಸಾಗುತ್ತದೆ.
ನಂತರ ಕಡಿದಾದ ಬೆಟ್ಟಸಾಲುಗಳ ನಡುವೆ ಪ್ರಯಾಣಿಸಬೇಕು. ಇಲ್ಲಿ ಬೆಟ್ಟಗಳು ಒಂದಕ್ಕೊಂದು ಸ್ಪರ್ಧೆಗೆ ಬಿದ್ದಂತೆ ಕಾಣುತ್ತವೆ. ಆ ಪ್ರಕೃತಿ ಸೌಂದರ್ಯವನ್ನು ಪದಗಳಲ್ಲಿ ತಿಳಿಸಿಲು ಸಾಧ್ಯವೇ ಇಲ್ಲ. ಕುದುರೆಮುಖ ಶಿಖರ ತುತ್ತತುದಿ ತಲುಪಲು ಕೆಲಮೀಟರ್ಗಳ ಹಿಂದೆ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿಸಿದ್ದ ಬಂಗಲೆ ಪಳಯುಳಿಕೆಗಳನ್ನು ಕಾಣಬಹುದು. ನಂತರ ಕೆಲವೇ ನಿಮಿಷ ಮುಂದೆ ಸಾಗಿದಲ್ಲಿ ಬೆಟ್ಟದ ತುತ್ತತುದಿ ತಲುಪಬಹುದು. ಶಿಖರದ ಬಲಭಾಗದಲ್ಲಿ ಅಂಚಿನಲ್ಲಿ ನೀರನ ಒರತೆಯೊಂದಿದ್ದು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ರಾತ್ರಿ ಶಿಖರದಲ್ಲಿ ತಂಗಲು ಅವಕಾಶವಿಲ್ಲ. ಸಂಜೆಯೊಳಗೆ ಮರಳಿ ಸಂಸೆ ಚೆಕ್ಪೋಸ್ಟ್ ತಲುಪುವುದು ಅಗತ್ಯ. ಮಳೆಗಾಲದ ಸಮಯದಲ್ಲಿ ರಕ್ತ ಹೀರುವ ಜಿಗಣೆಗಳು ವಿಪರೀತ ಕಾಟ ಕೊಡುತ್ತವೆ. ಈ ಕಾರಣದಿಂದ ನವೆಂಬರ್ನಿಂದ ಫೆಬ್ರವರಿ ಮಾರ್ಚ್ ಚಾರಣಕ್ಕೆ ಸೂಕ್ತ ಸಮಯ.
ಕುದುರೆಮುಖ ಆಸುಪಾಸಿನ ಇತರ ಚಾರಣ ತಾಣಗಳು:
ಕುರಿಂಜಲ್ ಗುಡ್ಡ, ಗಂಗಡಿಕಲ್ಲು ಗುಡ್ಡ, ಸೀತಾಭೂಮಿ ಶಿಖರ ಮತ್ತು ನರಸಿಂಹ ಪರ್ವತ.