ಇಂದು ಪ್ಲಾಸ್ಟಿಕ್ ತ್ಯಾಜ್ಯ ಭಾರತ ಎದುರಿಸುತ್ತಿರುವ ದೊಡ್ಡ ಪರಿಸರ ಸವಾಲುಗಳಲ್ಲಿ ಒಂದಾಗಿದೆ. ಪ್ರಸ್ತುತ ಪರಿಸ್ಥಿತಿ ಏನೆಂದರೆ, ಪ್ರತಿ ವರ್ಷ 56 ಲಕ್ಷ ಟನ್ಗಳಷ್ಟು ಕಸ ಸಂಗ್ರಹವಾಗುತ್ತದೆ, ಅಂದರೆ ಪ್ರತಿದಿನ 9205 ಟನ್ಗಳಷ್ಟು ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ಸಮುದ್ರಗಳಾಗಲಿ, ನದಿಗಳಾಗಲಿ, ಪರ್ವತಗಳಾಗಲಿ, ಖಾಲಿ ಬಯಲುಗಳಾಗಲಿ, ಪ್ಲಾಸ್ಟಿಕ್ ತ್ಯಾಜ್ಯವು ನಮ್ಮ ಪರಿಸರವನ್ನು ಎಲ್ಲೆಡೆ ಹಾಳು ಮಾಡುತ್ತಿದೆ.
ಜನರು ಅನುಕೂಲಕ್ಕಾಗಿ ದಶಕಗಳ ಹಿಂದೆ ಕಂಡುಹಿಡಿದ ಪ್ಲಾಸ್ಟಿಕ್ ಇಂದು ನಿಧಾನವಾಗಿ ಪರಿಸರದ ಪಿಡುಗಾಗಿ ಮಾರ್ಪಟ್ಟಿದೆ ಎಂದರೆ ನಂಬಲು ಸಾಧ್ಯವಿಲ್ಲ. ಆದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಗಮನದಲ್ಲಿ ಇಟ್ಟುಕೊಂಡು ಅದರ ಬಳಕೆಯನ್ನು ಕಡಿಮೆ ಮಾಡಲು ತ್ಯಾಜ್ಯ ವಿಲೇಯಲ್ಲಿ ತಲೆನೋವಾಗಿರುವ ಏಕಬಳಕ ಪ್ಲಾಸ್ಟಿಕ್ ತೊಲಗಿಸಲು ಸಂಧ್ಯಾ ನಿಸರ್ಗ ಮನೆ, ಮೂಡುಬಿದಿರೆಯ ಉಪನ್ಯಾಸಕಿಯೊಬ್ಬರು ತನ್ನದೇ ಆದ ಪ್ರಯತ್ನ ಮಾಡುತ್ತಿದ್ದಾರೆ.
ಕಾರ್ಯಕ್ರಮಗಳಿಗೆ ಲೋಟಗಳ ಪ್ಲಾಸ್ಟಿಕ್ ಬದಲು ಸ್ಟೀಲ್ ಲೋಟ ಬಳಸಲು ಲೋಟಗಳನ್ನು ಉಚಿತವಾಗಿ ಪೂರೈಸುತ್ತಿದ್ದಾರೆ. ತಾನು ವೃತ್ತಿ ಮಾಡುತ್ತಿರುವ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜನ್ನು ಶೂನ್ಯ ತ್ಯಾಜ್ಯ ಕ್ಯಾಂಪಸ್ ಆಗಿ ಪರಿವರ್ತಿಸುವ ಮೂಲಕ ಪರಿಸರಸ್ನೇಹಿಯಾಗಿ ತೊಡಗಿಸಿಕೊಂಡಿದ್ದಾರೆ.
ಇವರು ಸುಮಾರು 12 ವರ್ಷಗಳಿಂದ ಮೂಡಬಿದ್ರೆಯ ವಾರ್ಡ್ 5 ರ ನಿವಾಸಿ. ಹಾಗೆಯೇ ಜೈನ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು ಹತ್ತು ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಷಯದ ಬೋಧನೆಯನ್ನು ಮಾಡುತ್ತಿದ್ದಾರೆ.
ನ್ಯೂಸ್ ಕನ್ನಡದೊಂದಿಗೆ ಉಪನ್ಯಾಸಕಿ, ಸಂಧ್ಯಾ ನಿಸರ್ಗ ಮನೆ ಮೂಡುಬಿದಿರೆ ಮಾತನಾಡಿ,ಇಷ್ಟು ವರ್ಷಗಳ ಕಾಲ ಸಂಪೂರ್ಣವಾಗಿ ವೃತ್ತಿ ಹಾಗೂ ಸಂಸಾರದ ಜವಾಬ್ದಾರಿಗಳನ್ನು ಪರಿಪೂರ್ಣವಾಗಿ ನಿಭಾಯಿಸುತ್ತಾ ಬಂದ ನನಗೆ ಇತ್ತೀಚೆಗೆ ನಮ್ಮ ಸುಂದರ ಪ್ರಕೃತಿಯ ಸುತ್ತಮುತ್ತಲು ಪ್ಲಾಸ್ಟಿಕ್ಕಿನ ರಾಶಿಯನ್ನು ನೋಡುತ್ತಿರುವಾಗ ನನ್ನ ಬದುಕಿನ ಸಾರ್ಥಕತೆಯನ್ನು ಕಾಣುವ ಪ್ರಯತ್ನ ಕೋಸ್ಕರ ಪರಿಸರ ಸಂರಕ್ಷಣೆಯ ಹಂಬಲ ಹೆಚ್ಚಾಗತೊಡಗಿತು.
ಹೇಗೆ ಹನಿಗೂಡಿ ಹಳ್ಳ ವಾಗುತ್ತೆ ಹಳ್ಳ ಸೇರಿ ಸಾಗರ ವಾಗುತ್ತೆ ಅದೇ ರೀತಿ ಬೆಟ್ಟದಷ್ಟು ಎತ್ತರಕ್ಕೆ ರಾಶಿ ಹಾಕಲಾದ ಕರಗದ ಪ್ಲಾಸ್ಟಿಕ್ಕಿನ ಭಾರವನ್ನು ಭೂಮಿಯಿಂದ ಸ್ವಲ್ಪಮಟ್ಟಿಗಾದರೂ ಇಳಿಸುವ ಪ್ರಯತ್ನ ಮಾಡಬಹುದೇ ಎಂಬ ಯೋಚನೆಯಲ್ಲಿದ್ದಾಗ ಮೂಡಬಿದ್ರೆ ಪುರಸಭೆ ಸ್ವಚ್ಛ ಭಾರತ ಮಿಷನ್ 2022 ಇದರ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಮೂಡಬಿದ್ರೆ ಜನತೆಗೆ ಪ್ಲಾಸ್ಟಿಕ್ಕಿನ ಉಪಯೋಗವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುತ್ತಾ ಬಂದಿರುವುದು ಮೂಡಬಿದ್ರೆ ಯ ಜನತೆಗೆ ದೊರಕಿದ ಭಾಗ್ಯ ಅಂತನೇ ಹೇಳಬಹುದು.
ನಾನು ಇದರ ಕಾರ್ಯಾಗಾರದಲ್ಲಿ ಪಾಲ್ಗೊಂಡು ಹಲವರ ವಿಷಯಗಳಾದ ವೆಟ್ ವೆಸ್ಟ್ ಕಂಪೋಸ್ಟ್ ಅದೇ ರೀತಿ ಸಮರ್ಪಕವಾದ ತ್ಯಾಜ್ಯ ವಿಂಗಡಣೆ ಇದರ ಬಗ್ಗೆ ಅರಿತು ಇಂದಿನ ಯುವ ಪೀಳಿಗೆ ಪರಿಸರವನ್ನು ಉಳಿಸಿ ಬೆಳೆಸುವಂತೆ ಮಾಡಲು ನನ್ನಿಂದಾಗುವ ಕಾರ್ಯವನ್ನು ಮಾಡುವ ದೃಢ ನಿಲುವನ್ನು ಮಾಡಿರುತ್ತೇನೆ. ಜನರಿಗೆ ಪ್ಲಾಸ್ಟಿಕ್ ನ ಬಳಕೆಯನ್ನು ಕಡಿಮೆ ಮಾಡುವಂತೆ ಮಾಡುವ ಜಾಗೃತಿಯನ್ನು ಮೂಡಿಸಲು No Plastic Mission ಎನ್ನುವ ಯುಟ್ಯೂಬ್ ಚಾನೆಲ್ ಹಾಗೂ Zero Waste Life Style ವಾಟ್ಸಪ್ ಗ್ರೂಪ್ ನ ಮೂಲಕ ಹಲವಾರು ಪರಿಸರ ಸಂರಕ್ಷಣೆಯ ಕುರಿತಾದ ವಿಡಿಯೋಗಳು ಹಾಗೂ ನನ್ನ ಜೀವನದಲ್ಲಿ ಪರಿಸರ ಸಂರಕ್ಷಣೆಗೆ ಕೈಗೊಂಡ ಕಾರ್ಯಗಳನ್ನು ಪೋಸ್ಟ್ ಮಾಡಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ.
ನಮ್ಮ ಮನೆಯ ಹಸಿ ಕಸವನ್ನು ಪುರಸಭೆ ಅವರಿಗೆ ನೀಡದೆ ನಮ್ಮ ಮನೆಯಲ್ಲಿ ವೆಸ್ಟ್ ಕಂಪೋಸ್ಟ್ ಯೂನಿಟ್ ತಯಾರಿಸಿ ನಮ್ಮ ಮನೆಯ ಹಾಗೂ ಹತ್ತಿರದ ಎರಡು ಮನೆಗಳು ಕಸ ಮತ್ತು ಒಣಗಿದ ಎಲೆಗಳಿಂದ ಗೊಬ್ಬರವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಹಾಗೆ ನಮ್ಮ ಜೈನ ಪದವಿಪೂರ್ವ ಕಾಲೇಜನ್ನು ಕೂಡ ಜೀರೋ ವೆಸ್ಟ್ ಕ್ಯಾಂಪಸ್ ಹಾಗಿ ಪರಿವರ್ತಿಸುವಲ್ಲಿ ಸಕ್ರಿಯವಾಗಿ ಭಾಗಿಯಾಗಿರುತ್ತೇನೆ. ನಮ್ಮ ಮನೆಯ ಪರಿಸರದ ಕಾಳಜಿಯೊಂದಿಗೆ ನಮ್ಮ ಮನೆಯೆದುರಿನ ದೈವಸ್ಥಾನದ ನೇಮೋತ್ಸವ ದ ಶೂನ್ಯ ತ್ಯಾಜ್ಯ ನಿರ್ವಹಣೆಯ ಮೂಲಕ ಯಶಸ್ವಿಯಾಗಿ ನಿಭಾಯಿಸುವಂತೆ ಮಾಡಲು ಬೇಕಾದಂತಹ ಸಲಹೆಗಳನ್ನು ಕೊಟ್ಟು ಕಲ್ಲುರ್ಟಿ ಕಾಳಮ್ಮ ದೇವಸ್ಥಾನದ ಸೇವಾ ಸಮಿತಿಯ ಸದಸ್ಯರಿಗೆ ಪರಿಸರ ಸಂರಕ್ಷಣೆ ಅರಿವನ್ನು ಮೂಡಿಸುತ್ತಾ ಅವರ ಮನೆಗಳಲ್ಲಿ ಕೂಡ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತಿದ್ದೇನೆ.
ಅದೇ ರೀತಿ ಅವರ ಮನೆಗಳಲ್ಲಿ ಕೂಡ ಸಮಾರಂಭಗಳನ್ನು ಮಾಡುವ ಸಂದರ್ಭದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಬಗ್ಗೆ ಆದ್ಯತೆಯನ್ನು ಕೊಟ್ಟು ಸಮಾರಂಭಗಳನ್ನು ನಡೆಸಲು ವಿನಂತಿ ಮಾಡಿರುತ್ತೇನೆ. ಇದಕ್ಕೆ ಪ್ರೇರಣೆಯಾಗಿ ನನ್ನ ಪೂಜ್ಯ ತಂದೆಯವರ ನೆನಪಿನಲ್ಲಿ 200 ಸ್ಟೀಲ್ ಲೋಟಗಳನ್ನು ಖರೀದಿಸಿ ಯಾರಿಗಾದರೂ ತಮ್ಮ ಮನೆಗಳಲ್ಲಿ ಫಂಕ್ಷನ್ ಮಾಡುವ ಸಮಯದಲ್ಲಿ ಯಾವುದೇ ಬಾಡಿಗೆ ಇಲ್ಲದೆ ಮುಕ್ತವಾಗಿ ಒದಗಿಸುವ ಕೆಲಸವನ್ನು ಪ್ರಾರಂಭಿಸಿದ್ದೇನೆ . ಹೀಗೆ ಸ್ವಲ್ಪಮಟ್ಟಿಗಾದರೂ ಪರಿಸರದಲ್ಲಿ ಬಿಟ್ಟರೆ ಕರಗದೆ ಇರುವ ಉರಿದರೆ ವಿಷಮಯ ಹೊಗೆಯನ್ನು ಕಾರುವ ಪ್ಲಾಸ್ಟಿಕ್ಕಿನ ಬಳಕೆಯನ್ನು ಕಡಿಮೆ ಮಾಡುವ ಸಣ್ಣ ಪ್ರಯತ್ನ ನನ್ನದು ಎಂದರು.
ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಲೋಟ, ಬಾಟಲಿಯ ಬದಲಿಗೆ ಸ್ಟೀಲ್ ಲೋಟಗಳನ್ನು ಪೂರೈಸುತ್ತಿರುವ ನಮ್ಮ ಪ್ರಯತ್ನ ಸಾರ್ಥಕ. ಸಭೆ ಸಮಾರಂಭಗಳಿಗೆ ಲೋಟದ ಅವಶ್ಯಕತೆ ಇದ್ದವರು ಎರಡು ದಿನಗಳಿಗೆ ಮುಂಚಿತವಾಗಿ ಮಾಹಿತಿ ನೀಡಿದರೆ ಯಾವುದೇ ಬಾಡಿಗೆ ಇಲ್ಲದೆ ಒದಗಿಸುತ್ತಿದ್ದಾರೆ.
ವಿಳಾಸ:
ಸಂಧ್ಯಾ
ನಿಸರ್ಗ ಮನೆ
ವೀರ ಸಾರ್ವರ್ಕರ್ ನಗರ,
ಸ್ವರಾಜ್ ಮೈದಾನದ ಹಿಂದೆ
ಮೂಡಬಿದ್ರೆ
9663431093