ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಿಬಿಸಿಎಸ್ ಈ ಯೋಜನೆಯ ಅಂತಿಮ ತಂಡದ ವಿದ್ಯಾರ್ಥಿ ನಾನು. ತನ್ನ ಜೀವನದಲ್ಲಿ ಎಂದೆಂದೂ ಮರೆಯಲಾಗದ ಶಿಕ್ಷಕರಲ್ಲಿ ಈ ಪ್ರಾಧ್ಯಾಪಕಿ ಒಬ್ಬರು. ನಮ್ಮ ಕಾಲೇಜಿನ ಬಿಎ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ ಎನ್ ವೆಂಕಟಲಕ್ಷ್ಮಿ ಮೇಡಂ.
ಇವರು ಜಿಲ್ಲೆಯ ಹಲವಾರು ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯದ ಕುರಿತು ವಿಶೇಷ ಬೋಧನೆಗಳನ್ನು, ಸೌಹಾರ್ದ ಸಹಕಾರಿ ನಿಯಮಿತ ಎಂಬ ಕಾಲೇಜಿನ ಸಮಿತಿಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಲ್ಲದೆ ಕರ್ನಾಟಕ ಅರ್ಥಶಾಸ್ತ್ರ ಸಂಘ, ಕರ್ನಾಟಕ ರಾಜ್ಯ ಆರ್ಥಿಕ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಶಿಕ್ಷಕರ ಸಂಘಗಳಿಗೆ ಸದಸ್ಯತ್ವವನ್ನು ಹೊಂದಿದ್ದಾರೆ.
ಎಲ್ಲ ಪ್ರಾಧ್ಯಾಪಕರು ಪುಸ್ತಕವನ್ನು ನೋಡಿ ಪಾಠ ಮಾಡುತ್ತಾರೆ. ಆದರೆ ವೆಂಕಟಲಕ್ಷ್ಮೀ ಮೇಡಂ ಅವರು ಯಾವುದೇ ರೀತಿಯ ಪುಸ್ತಕ ಅಥವಾ ಚೀಟಿಯನ್ನು ನೋಡಿಕೊಂಡು ಪಾಠ ಮಾಡಿದ್ದು ಅವರ ಇತಿಹಾಸದಲ್ಲಿಲ್ಲ. ಅದರ ಜೊತೆ ಜೊತೆಗೆ ಉದಾಹರಣೆಯ ಸಮೇತ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದೇ ಇವರ ಬೋಧನಾ ಶೈಲಿಯ ವಿಶೇಷ ಗುಣ. ಇವರ ಬೋಧನಾ ಶೈಲಿಗೆ ಮನಸೋತು ಕೆಲ ವಿದ್ಯಾರ್ಥಿಗಳು ಇವರಂತೆಯೇ ಶಿಕ್ಷಕರಾಗಿದ್ದಾರೆ, ಇನ್ನೂ ಕೆಲವರು ಅರ್ಥಶಾಸ್ತ್ರಜ್ಞರಾಗಿದ್ದಾರೆ ಉದಾಹರಣೆಗೆ ಅಂತಾರಾಷ್ಟ್ರೀಯ ಮಾನಿಟರಿ ಫಂಡ್ ಮುಖ್ಯಸ್ಥೆ ಗೀತಾ ಗೋಪಿನಾಥನ್ ಅವರೇ ನಮ್ಮೆದುರಿಗಿರುವ ಸಾಕ್ಷಿ.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಅಷ್ಟೇ ಪ್ರೋತ್ಸಾಹ ನೀಡುವರು. ಸದಾ ವಿದ್ಯಾರ್ಥಿಗಳ ಏಳಿಗೆಯನ್ನು ಬಯಸುವ, ವಿದ್ಯಾರ್ಥಿಗಳ ನೋವು ನಲಿವಿಗೆ ಸ್ಪಂದಿಸುವ, ಬೆನ್ನೆಲುಬಾಗಿ ನಿಲ್ಲುವ ಪ್ರಾಧ್ಯಾಪಕರಲ್ಲಿ ಒಬ್ಬರು. ವಿದ್ಯಾರ್ಥಿಗಳಿಗೋಸ್ಕರ ಅವರ ಸಮಯ, ಕೊಠಡಿಯ ಬಾಗಿಲು ಸದಾ ತೆರೆದಿರುತ್ತದೆ. ಮಧ್ಯಾಹ್ನದ ವೇಳೆ ಊಟದ ಸಮಯದಲ್ಲಿ ಪ್ರಾಧ್ಯಾಪಕರ ಕೊಠಡಿಯ ಬಾಗಿಲು ಹಾಕುವುದು ನಮ್ಮ ಕಾಲೇಜಿನ ವಾಡಿಕೆ. ಆದರೆ ಅರ್ಥಶಾಸ್ತ್ರ ವಿಭಾಗದ ಕೊಠಡಿ ತೆರೆದಿರುತ್ತದೆ. ಕೆಲ ಪ್ರಾಧ್ಯಾಪಕರನ್ನು ಊಟದ ಸಮಯದಲ್ಲಿ ಅವರ ಕೊಠಡಿಗೆ ಹೋದರೆ ರೇಗಿ ಹೊರಗೆ ಕಳುಹಿಸಿರುವ, ಆಮೇಲೆ ಬಾ ಎಂದು ಹೇಳಿರುವ ಸಂಗತಿಗಳು ಇವೆ.
ಈ ಪ್ರಾಧ್ಯಾಪಕಿಯ ಬಳಿ ಈ ಸಂಸ್ಕೃತಿ ಇಲ್ಲ. ವಿದ್ಯಾರ್ಥಿಗಳ ಸಮಸ್ಯೆ ಮೊದಲು ತದನಂತರ ಉಳಿದ ಕೆಲಸ ಕಾರ್ಯ ಎಂಬ ನಿಯಮ ಅವರದ್ದು. ಅತಿಯಾದ ತೀಕ್ಷ್ಣ ಸಮಯದಲ್ಲಿ ಮಾತ್ರ ಅವರು ವಿದ್ಯಾರ್ಥಿಗಳನ್ನು ಕೆಲ ಸಮಯ ಬಿಟ್ಟು ಬನ್ನಿ ಎಂದು ಹೇಳಿರುವುದುಂಟು, ಇನ್ನೂ ಉಳಿದ ಸಮಯದಲ್ಲಿ ವಿದ್ಯಾರ್ಥಿಗಳಿಗೋಸ್ಕರ ಸಮಯವನ್ನು ಮುಡಿಪಾಗಿಟ್ಟಿದ್ದಾರೆ. ಇಂತಹ ಪ್ರಾಧ್ಯಾಪಕಿಗೆ ವಿದ್ಯಾರ್ಥಿಗಳ ಪರವಾಗಿ ಒಂದು ಸಲಾಂ.
-ಮಣಿಕಂಠ ತ್ರಿಶಂಕರ್, ಮೈಸೂರು