ಧರ್ನುಮಾಸವನ್ನು ಭಗವಂತನ ಆರಾಧನೆಯ ಪರ್ವ ಕಾಲ ಎಂದು ಕರೆಯುತ್ತಾರೆ. ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ, ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೈವಾರಾಧನೆಗೆ, ಆದರಲ್ಲೂ ವಿಷ್ಣುವಿನ ಆರಾಧನೆಗೆ ಹೆಚ್ಚು ಮಹತ್ವ ನೀಡಲಾಗಿದೆ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಸಹ ಮಾಸಾನಾಮ್ ಮಾರ್ಗಶೀರ್ಷ ಅಂದರೆ ಮಾನಗಳಲ್ಲಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ. ಅದರಂತೆಯೇ ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿಯ) ‘ಧನುರ್ಮಾಸ’ ಎಂದು ಕರೆಯುತ್ತಾರೆ.
ಸೂರ್ಯನು ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ವೇದ, ಆಗಮಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆಯಾದರೂ, ವಿವಾಹವೇ ಮೊದಲಾದ ಶುಭ ಕಾರ್ಯಗಳನ್ನು ಮಾತ್ರ ಮಾಡುವುದಕ್ಕೆ ಇದು ಶ್ರೇಷ್ಠವಾದ ಮಾಸವಲ್ಲ. ಕೇವಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುವುದಕ್ಕೆ ಈ ಮಾಸವನ್ನು ಮೀಸಲಿರಿಸಲಾಗಿದೆ. ಆದ್ದರಿಂದ ಇದನ್ನು ಶೂನ್ಯ ಮಾಸ ಎಂದೂ ಹೇಳಲಾಗುತ್ತದೆ.
ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ಹಿಂದೂ ಪಂಚಾಂಗವನ್ನು ವಿಭಾಗಿಸಿದ್ದೇವೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿ, ಮಾರ್ಘಶಿರ ಮಾಸ/ ಧನುರ್ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ. ಆದಕಾರಣ ದೇವತೆಗಳಿಗೇ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಇದೆ ಎನ್ನುತ್ತಾರೆ.
ಧನುರ್ಮಾಸದಲ್ಲಿ ಅರುಣೋದಯ ಕಾಲದಲ್ಲಿ ಒಂದು ತಿಂಗಳು ಹುಗ್ಗಿಯನ್ನು ತಯಾರು ಮಾಡಿ ನಾರಾಯಣನಿಗೆ ಸಮರ್ಪಿಸುವುದು ಹಿಂದೂ ಸಂಪ್ರದಾಯ. ಮುದ್ದಾನ್ನ ಎಂದರೆ ಹುಗ್ಗಿ, ಅಕ್ಕಿಯ ಎರಡರಷ್ಟು ಪ್ರಮಾಣ ಹೆಸರುಬೇಳೆ, ಒಣಶುಂಠಿ, ಮೆಣಸು, ಜೀರಿಗೆ, ಪತ್ರೆ, ದಾಲ್ಟಿನ್ನಿ, ಜಾಜಿಕಾಯಿ, ಕೊಬ್ಬರಿ, ಲವಂಗ, ಉಪ್ಪು, ತುಪ್ಪ ಎಲ್ಲವನ್ನು ಕೂಡಿಸಿ ಬೇಯಿಸಿದ ಪದಾರ್ಥವೇ ಮುದ್ದಾನ.
ಧನುರ್ಮಾಸದಲ್ಲಿ ದೇವರ ಪೂಜೆಗೆ, ನೈವೇದ್ಯ ಪ್ರಸಾದಕ್ಕೆ ಮುದ್ದಾನ್ನವೇ ಏಕೆ ಎಂಬುದಕ್ಕೆ ನಾನಾ ಕಾರಣಗಳುಂಟು. ಧನುರ್ಮಾಸದ ಸಮಯದಲ್ಲಿ ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುವುದರಿಂದಲೂ, ಧನುರ್ಮಾಸದಲ್ಲಿ ಹುಗ್ಗಿಯನ್ನು ಸೇವಿಸುವುದರಿಂದ ಕೊಬ್ಬಿನ ಅಂಶವನ್ನು ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
ಹೀಗೆ ಧನುರ್ಮಾಸದಲ್ಲಿ ಹುಗ್ಗಿ ಸೇವನೆಯು ವೈಜ್ಞಾನಿಕವಾಗಿಯೂ ಸಮಂಜಸ, ಧನುರ್ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ ಎಂಬ ನಂಬಿಕೆಯಿದೆ. ಒಮ್ಮೆ ಇಂದ್ರ ದೇವರು ರಾಜ್ಯ ಭ್ರಷ್ಟರಾದಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ಮಹಾಲಕ್ಷ್ಮಿಯನ್ನು ದ್ವಾದಶನಾಮಗಳಿಂದ ಸ್ತುತಿಸಿದಳು, ಅದರ ಫಲವಾಗಿ ಇಂದ್ರ ದೇವರಿಗೆ ಪುನಃ ರಾಜ್ಯವು ದೊರೆಯಿತು ಎಂಬುದು ಪುರಾಣದ ಐತಿಹ್ಯ.
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಅದರಂತೆ ಉತ್ತರಾಯಣವು ಹಗಲಿನ ಸಮಯ, ಆದರೆ ಈ ಧನುರ್ಮಾಸವು ಹಗಲು ರಾತ್ರಿ ಎರಡು ಸೇರಿದ ಸಮಯವೆಂದು ಹೇಳಲಾಗಿ ಬ್ರಾಹ್ಮ ಮುಹೂರ್ತದಲ್ಲಿ ಯಾರು ಎದ್ದು ಸ್ನಾನ ಮಾಡಿ ಭಗವಂತನನ್ನು ಪೂಜಿಸಿ ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವರ ಮನೋಭೀಷ್ಟಗಳು ಅಕ್ಷಯವಾಗಿ ನೆರವೇರುತ್ತದೆ.
ಈ ಮಾಸದಲ್ಲಿ ಅವತಾರ ಪುರುಷರಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳಿವೆ. ಈ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಅಂದರೆ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡಿದ ದಿನವದು. ಅದಕ್ಕೆ ಮೋಕ್ಷದಾ ಏಕಾದಶಿ ಎಂಬ ಹೆಸರಿದೆ. ಮೋಕ್ಷದಾ ಅಂದರೆ ಮೋಕ್ಷವನ್ನು ನೀಡುವ, ಭವಬಂಧನಗಳಿಂದ ಮನಸನ್ನು ಕಳಚುವುದು ಎಂದು ಅರ್ಥ. ಹಾಗಾಗಿಯೇ ಅದಕ್ಕೆ ಗೀತಾಜಯಂತಿಯ ದಿನವನ್ನು ಮೋಕ್ಷದಾ ಏಕಾದಶಿ ಎಂದೂ ಹೇಳುತ್ತಾರೆ. ಇನ್ನು ಸನಾತನ ಧರ್ಮದಲ್ಲಿ ಶ್ರೇಷ್ಠ ಗುರುಗಳೆಂದು ಆರಾಧಿಸಲ್ಪಡುವ ದತ್ತಾತ್ರೇಯ ಜಯಂತಿಯೂ ಸಹ ಮಾರ್ಗಶಿರ ಮಾಸದಲ್ಲಿಯೇ ಬರುತ್ತದೆ.
ಮಾರ್ಗಶಿರ ಮಾಸದ ಹುಣ್ಣಿಮೆಯಂದು ದತ್ತಾತ್ರೆಯ ಜಯಂತಿಯನ್ನು ಭಕ್ತಿ, ಆದರಗಳಿಂದ ಆಚರಿಸಲಾಗುತ್ತದೆ. ಮಾರ್ಗಶಿರ ಕೃಷ್ಣ ಏಕಾದಶಿಯ ದಿನದಂದು ಉಪವಾಸ ವಿರುವ ಆಚರಣೆಯಿದ್ದು, ಇದನ್ನು ವಿಮಲಾ ಏಕಾದಶಿ (ಸಫಲಾ) ಎಂದೂ ಕರೆಯುತ್ತಾರೆ. ಈ ದಿನದಂದು ಉಪವಾಸವಿದ್ದು, ಜ್ಞಾನಕ್ಕಾಗಿ ಪ್ರಯತ್ನಿಸಿದರೆ ನಮ್ಮಲ್ಲಿರುವ ಅಜ್ಞಾನ ನಿವೃತ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣ ಮಾಸಗಳಲ್ಲಿ ಮಾರ್ಗಶಿರ ಮಾಸ ಎಂದು ಹೇಳಿದ್ದು, ಈ ಮಾಸದಲ್ಲಿ ವಿಷ್ಣುವಿಗೆ ವಿಶೇಷ ಪೂಜೆಗಳು ನಡೆಯುತ್ತವೆ.
ಸೂರ್ಯನು ವೃಶ್ಚಿಕ ರಾಶಿಯನ್ನು ಬಿಟ್ಟು ಧನುರಾಶಿಯಲ್ಲಿ ಕಾಣುವ ಸುಮಾರು ಮೂವತ್ತು ದಿನಗಳ ಕಾಲವೇ ಧನುರ್ಮಾಸ. ಮಕರ ಸಂಕ್ರಾತಿಗೆ ಇದು ಕೊನೆಗೊಳ್ಳುತ್ತದೆ, ಈ ಮಾಸದಲ್ಲಿ ಶ್ರೀವಿಷ್ಣು ಪೂಜೆಯೊಡನೆ ಶ್ರೀಲಕ್ಷ್ಮಿಯನ್ನು ದ್ವಾದಶ ನಾಮದೊಂದಿಗೆ ಪ್ರಾರ್ಥಿಸಿದರೆ ಅತಿಶಯ ಸಂಪತ್ತು ಒಲಿಯುತ್ತದೆ ಎಂಬ ನಂಬಿಕೆ ಇದೆ.
-ಮಣಿಕಂಠ ತ್ರಿಶಂಕರ್, ಮೈಸೂರು.