ಬೆಳ್ತಂಗಡಿ: ವಿಕಲಾಂಗತೆ ಇದ್ದರೇನು ನಾವೂ ಇತರರಿಗೆ ಸರಿಸಮಾನವಾಗಿರಲು ಪ್ರಯತ್ನ ಮಾಡಬಲ್ಲೆವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉಜಿರೆಯಲ್ಲಿನ ಸಾನಿಧ್ಯದ ಮಕ್ಕಳು.
ಸಾನಿಧ್ಯ ಇದು ಉಜಿರೆಯಲ್ಲಿ 2019 ರಿಂದ ಎಂಡೋಸಲ್ಫಾನ್ ಬಾಧಿತರಿಗಾಗಿ ಪ್ರಾರಂಭವಾಗಿರುವ ಸುಸಜ್ಜಿತ ಕೌಶಲ್ಯ ತರಬೇತಿ ಕೇಂದ್ರ. ಇಲ್ಲಿ 40 ವಿಕಲಾಂಗ ಮಕ್ಕಳು ವಿವಿಧ ರೀತಿಯ ತರಬೇತಿಯನ್ನು ಹೊಂದುತ್ತಿದ್ದಾರೆ. 14 ಶಿಕ್ಷಕಿಯರು ವಿವಿಧ ಕೌಶಲ್ಯಗಳನ್ನು ತಾಳ್ಮೆ, ಸಹನೆಯಿಂದ ಕಲಿಸುತ್ತಿದ್ದಾರೆ.
ಇವರ ತರಬೇತಿಯ ಪರಿಣಾಮವಾಗಿ ಮಕ್ಕಳ ಕೈಯಿಂದ ವಯರ್ ಬ್ಯಾಗ್, ಬಟ್ಟೆಯ ಮ್ಯಾಟ್, ಕಾಗದ, ಪ್ಲಾಸ್ಟಿಕ್ ನಿಂದ ಬಣ್ಣದ ಹೂಗಳು ಇತ್ಯಾದಿ ಕರಕುಶಲ ವಸ್ತುಗಳು ಅರಳಿವೆ.
ಮಂಗಳವಾರ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರ ಸಮ್ಮುಖದಲ್ಲಿ ಮಕ್ಕಳು ಅತ್ಯಂತ ಉತ್ಸಾಹದಿಂದ, ಆತ್ಮವಿಶ್ವಾಸದಿಂದ ಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು. ವಿಕಲತೆಯನ್ನು ಮರೆತು ವೇಷ ಹಾಕಿ, ಬಣ್ಣ ಹಚ್ಚಿ ಯಕ್ಷಗಾನದ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಿನಿಮಾದ ಅಂಕು ಡೊಂಕು….. ಹಾಡಿಗೆ ಸ್ಟೆಪ್ ಹಾಕಿದರು, ಬಣ್ಣ ಬಣ್ಣದ ಉಡುಗೆ ತೊಟ್ಟು ಗ್ರೂಪ್ ಡ್ಯಾನ್ಸ್ ನಲ್ಲಿ ಕುಣಿದು ಕುಪ್ಪಳಿಸಿ ತಾವೇನೂ ಕಡಿಮೆಯೇನೂ ಇಲ್ಲಾ ಎಂದು ತೊರಿಸಿಕೊಟ್ಟರು. ಇವರ ಉಮೇದಿಗೆ ಪತ್ರಕರ್ತರೂ ಚಪ್ಪಾಳೆಯ ಮೂಲಕ ಸಾಥ್ ನೀಡಿದರು.
ಗಾಲಿ ಕುರ್ಚಿಯಲ್ಲಿರುವ ಬಾಲಕಿಯರು ಹಾಡಿದ ಅರಳುವ ಹೂಗಳೇ ಆಲಿಸಿರಿ ಹಾಡಿಗೆ ಭರಪೂರ ಚಪ್ಪಾಳೆಗಿಟ್ಟಿಸಿಕೊಂಡರು.
ಮಕ್ಕಳ ದೈಹಿಕ ನ್ಯೂನತೆಗಳನ್ನು ಸಹಿಸಿ ಶಿಕ್ಷಕಿಯರು ಪರಿಶ್ರಮ, ಛಲದಿಂದ ಮಕ್ಕಳಿಂದ ಚಟುವಟಿಕೆಗಳನ್ನು ಮಾಡಿಸಿದ್ದು ಮೆಚ್ಚುವಂತಹದ್ದೇ. ಯಾಕೆಂದರೆ ಇಂತಹ ವಿಶೇಷ ಮಕ್ಕಳನ್ನು ತರಬೇತುಗೊಳಿಸಬೇಕಾದರೆ ಹಗಲು ರಾತ್ರಿ ಒಂದು ಮಾಡಬೇಕಾಗುತ್ತದೆ. ಶಿಕ್ಷಕಿಯರ ಪರಿಶ್ರಮ ಮಂಗಳವಾರ ಸಾರ್ಥಕವಾಯಿತು. ಮಕ್ಕಳ ಸಹಿತ ಎಲ್ಲರ ಮೊಗದಲ್ಲೂ ಮಂದಹಾಸ. ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ ಎಂಬ ಮಾತನ್ನು ಸಾಕಾರಗೊಳಿಸಲು ಸಾನಿಧ್ಯದ ಎಲ್ಲಾ ಸಿಬ್ಬಂದಿ ವರ್ಗದವರು ತಮ್ಮ ತಾಕತ್ತನ್ನು ವ್ಯಯಿಸುತ್ತಿರುವುದು ಅಕ್ಷರಶಃ ಸತ್ಯವಾಗಿದೆ.
“ವಿಶೇಷ ಚೇತನ ಮಕ್ಕಳಿಗೆ ಆಶ್ರಯ ನೀಡುತ್ತಿರುವ ಸಂಸ್ಥೆಗಳ ಬಗ್ಗೆ ಸರಕಾರ ಹೆಚ್ಚಿನ ಗಮನಹರಿಸಬೇಕು. 2003ರಲ್ಲಿ ಎರಡು ಮಕ್ಕಳ ಜೊತೆ ಆರಂಭವಾದ ಸಾನಿಧ್ಯ ಕೇಂದ್ರದಲ್ಲಿ ಇಂದು 5 ವಯೋಮಾನದಿಂದ ವಯಸ್ಕರ ತನಕ 168 ಮಂದಿ ವಿಶೇಷಚೇತನರಿಗೆ ಶಿಕ್ಷಣದ ಜತೆ ಕೌಶಲ್ಯ ತರಬೇತಿ ನೀಡುವ ಕೆಲಸ ನಡೆಯುತ್ತಿದೆ.“ -ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ