ಹಾಸ್ಯ ಸಾಹಿತ್ಯ ಕ್ಷೇತದಲ್ಲಿ, ಹೆಸರುವಾಸಿಯಾಗಿರುವ ‘ಬೀchi’ ಯವರ ‘ಮೂರು ಹೆಣ್ಣು ಐದು ಜಡೆ’ ಕಾದಂಬರಿಯು, ಹಾಸ್ಯಮಯ ನಿರೂಪಣೆಯ ಜೊತೆಗೆ ಗಂಭೀರ ಕಥಾವಸ್ತುವನ್ನು ಹೊಂದಿದ ಕಾದಂಬರಿ.
ನಮ್ಮ ನಿತ್ಯ ಜೀವನದಲ್ಲಿ ಕಂಡುಬರುತ್ತಿರುವ ಅನೇಕ ದಾರುಣ ಚಿತ್ರಗಳಲ್ಲಿ ಇದೂ ಒಂದು. ಪುಷ್ಪ, ರತ್ನ, ಹಾಗೂ ಲಕ್ಷ್ಮೀ, ಕಾದಂಬರಿಯ ಮೂರು ಸ್ತ್ರೀ ಪಾತ್ರಗಳು. ಇವರಲ್ಲಿ ಇಬ್ಬರು ಜೋಡಿ ಜಡೆ ಹಾಕುತ್ತಾರೆ. ಒಬ್ಬಳದು ಮಾತ್ರ ಒಂಟಿ ಜಡೆ. ಈ ಜಡೆಗಳ ಮೂಲಕವೇ ಧನದಾಹಿತನ, ಅಧಿಕಾರ ಲಾಲಸೆ, ಮನುಷ್ಯರು ಎಸಗುವ ಅನ್ಯಾಯಗಳನ್ನು ಕಟ್ಟಿಕೊಡಲು ಯತ್ನಿಸುವ ಕೃತಿ ಇದು.
ಶಕುನಿಯಂತಹ ಪಾಟೀಲ, ಹೆಸರಿಗೆ ತಕ್ಕಂತೆ ಇರುವ ಹುಚ್ಚಪ್ಪ, ಅಧಿಕಾರ ಮದದಿಂದ ಅವಿವೇಕಿಯಾಗುವ ಹೊನ್ನಯ್ಯ, ಗೀತೆಯ ಮಾತನ್ನು ಆತ್ಮಕ್ಕೆ ಕಲಿಸಿಕೊಟ್ಟ ಋಷಿಯಂತಹ ಕಸ್ತೂರಿರಂಗನ್ ಇದ್ದಾರೆ ನಮ್ಮ ಸುತ್ತಲೂ, ಇನ್ನು ಮುಂದೆಯೂ ಇರುತ್ತಾರೆ, ಒಬ್ಬೊಬ್ಬರು ಒಂದೊಂದು ತೆರನಾಗಿ ಪಾಠ ಕಲಿಸುತ್ತಾರೆ, ಕಲಿಯಬೇಕೆಂಬ ಬಯಕೆ ಇದ್ದವರಿಗೆ ಇಷ್ಟು ಸಾಕು.
ಮರಳುಗಾಡಿನ ಓಯಸಿಸ್ ನಂತೆ ಸಾಧು ಜೀವಗಳು ಕೂಡ ಸುಳಿದಾಡುತ್ತವೆ. ವಿವಿಧ ತಿರುವುಗಳು, ಅನೂಹ್ಯ ಸುಳಿಗಳ ಮೂಲಕ ಸಹೃದಯರನ್ನು ಮತ್ತೆ ಮತ್ತೆ ಓದಿಗೆ ತೊಡಗುವಂತೆ ಮಾಡುತ್ತದೆ ಕಾದಂಬರಿ.
ಹಣ, ಅಧಿಕಾರದಾಸೆಗೆ, ಪ್ರಾಮಾಣಿಕತೆ, ನಿಷ್ಠೆ, ಮಾನವ ಸಂಬಂಧವನ್ನು ಮರೆತು, ಏನನ್ನು ಮಾಡಲು ಸಿದ್ದರಾಗಿ ನೖೆತಿಕ ಅಂಧಪತನಕ್ಕಿಳಿದು ತಾಯಿ-ತಂದೆ, ಹಿತೖೆಷಿಗಳನ್ನು ಕನಿಷ್ಟವಾಗಿ ಕಾಣುವ ಹೊನ್ನಯ್ಯ, ಸಾದ್ವಿ ಸಾತ್ವಿಕ ಸ್ವಭಾವದ ಅವರ ಪತ್ನಿ ಕಮಲಮ್ಮ, ಇದಕ್ಕೆ ತದ್ವಿರುದ್ದ ಸ್ವಭಾವದ ಅಳಿಯನನ್ನು ಬೆಂಬಲಿಸುವ ಕಮಲಮ್ಮನ ತಾಯಿ ನಾಗಮ್ಮ, ಹೆಸರಿನಂತೆ ಸದಾ ವಿಷಕಾರುತ್ತ ಅಳಿಯನ ಅಧಿಕಾರದ ಉತ್ತರಾಧಿಕಾರಿಯಂತೆ ಕಾಣುತ್ತಾಳೆ, ಹೊನ್ನಯ್ಯನ ಮೂರುಜನ ಹೆಣ್ಣು ಮಕ್ಕಳ ಭಿನ್ನ ಸ್ವಭಾವ. ಶಕುನಿಯನ್ನೂ ಮೀರಿಸುವ ಕಪಟಿ ಪಾಟೀಲ, ಅವನ ಕಪಟ ಕಾರ್ಯಗಳಿಗೆ ಸದಾ ಬೆಂಬಲಿಸುವ ಹುಚ್ಚಪ್ಪ, ಪ್ರಾಮಾಣಿಕತೆ, ಸ್ವಾಭಿಮಾನ, ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಪ್ರೀತಿಸುವ ಕಸ್ತೂರಿರಂಗನ್ ಮಿಂಚಿ, ಪ್ರಭಾವ ಬೀರುತ್ತಾರೆ.
ತಂದೆಯ ಕೊನೆ ದಿನಗಳಲ್ಲಿ ಅವರನ್ನು ಹೊನ್ನಯ್ಯ ನಡೆಸಿಕೊಳ್ಳುವ ರೀತಿ, ಸತ್ತ ಮೇಲೆ ಅವರು ಮಲಗುವ ಅರಕು ಗೋಣಿಚೀಲ, ಮಣ್ಣಿನ ಪಾತ್ರೆಗಳನ್ನು ತಿಪ್ಪೆಗೆ ಬಿಸಾಕುವಂತೆ ತಮ್ಮ ಪುಟ್ಟ ಮಗಳಿಗೆ ಹೇಳುತ್ತಾರೆ, ಅಪ್ಪ ಅಜ್ಜನನ್ನು ನಡೆಸಿಕೊಂಡ ರೀತಿಯನ್ನು ನೋಡಿ, ಅದರಿಂದ ಪ್ರಭಾವಕೊಳಗಾದ ಮಗಳು,” ಮುದಕರಾದ ಮೇಲೆ ನಿಮಗೆ ಬೇಡವೆ ಅವು” ಅನ್ನುತ್ತಾಳೆ, ಪ್ರತಿ ಹಸುರೆಲೆ ಹಣ್ಣೆಲೆ ಹಾಗಲೇ ಬೇಕು ಎನ್ನುವ ವಿಷಯವನ್ನು ಮನಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ. ಅವರ ಪುಸ್ತಕಗಳು, ಓದುಗರಿಗೆ ಹಾಸ್ಯದ ಜೊತೆಗೆ ಇಂತಹ ನೖೆತಿಕ ಪಾಠವನ್ನು ಹೇಳುತ್ತವೆ.