ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ ಚೊಕ್ಕಾಡಿಯವರು ಹೇಳಿರುವಂತೆ ಇದು ಪಾತ್ರದ ಆಂತರ್ಯದಲ್ಲಿ ಅಥವಾ ಒಳ ತುಮುಲಗಳನ್ನು ಚಿತ್ರಿಸುವ ಕತೆ.
ಈ ಕಾದಂಬರಿ ಆರಂಭದಲ್ಲಿ ಜೋಗಿಯವರು, ನಿರೂಪಕನಾಗಿ ಪಾತ್ರ ಪ್ರವೇಶ ಮಾಡುತ್ತಾರೆ. ಖ್ಯಾತ ಬಹುಭಾಷಾ ಪೋಷಕ ನಟನಾದ ಅಶ್ವತ್ಥಾಮನ್ ತನ್ನ ಆತ್ಮಕಥನ ಬರೆಸಲು ನಿರೂಪಕನನ್ನು ಕರೆಸಿಕೊಳ್ಳುತ್ತಾನೆ.
ಜನಪ್ರಿಯತೆ ಎಂಬ ಹುಲಿ ಸವಾರಿಯಲ್ಲಿರುವ ಆತ ಆಕಸ್ಮಿಕವಾಗಿ ಅನಾರೋಗ್ಯ ಪೀಡಿತನಾಗುತ್ತಾನೆ. ಖಾಲಿ ಕುಳಿತಾಗ ಆತ್ಮಕತೆಯ ಪ್ರಕರಣ ಶುರುವಾಗುತ್ತದೆ. ಇದಕ್ಕೆ ಅವನ ಮೂರನೇ ಹೆಂಡತಿ ಸಂಯುಕ್ತಾಳ ಚಿತಾವಣೆ ಸಹ ಇರಬಹುದು ಎಂಬ ಅನುಮಾನ ನಿರೂಪಕನದು.
ಅಶ್ವತ್ಥಾಮ ಒಬ್ಬ ಸಕಲ ಕಲಾವಲ್ಲಭ. ಆತನಿಗೆ ಅಮುದನ್ ಮಸಾಜ್ ಮಾಡುವಾಗ, ಹದಿಹರೆಯದಲ್ಲಿ ದೀಪಾವಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದ ಸುಲೋಚನಾ ಕಾಡುತ್ತಾಳೆ. ಮಸಾಜ್ ಆದಮೇಲೆ ಒಂದು ದುರ್ಘಟನೆ ಸಂಭವಿಸಿತ್ತದೆ. ಕೆಟ್ಟ ಬಾಲ್ಯದ, ತಂದೆಯನ್ನು ದ್ವೇಷಿಸುವ ಅಶ್ವತ್ಥಾಮ ವಿಕ್ಷಿಪ್ತ ಮನಸ್ಸಿನವನು. ತಮಿಳು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಾನೆ. ಇದಕ್ಕೆ ಅವಕಾಶ ಮಾಡಿಕೊಡುವ ಸಹಾಯಕ ನೃತ್ಯ ನಿರ್ದೇಶಕಿ ಶರಣ್ಯಳ ಮಗಳು ಶುಭಾಂಗಿನಿಯನ್ನು ಆತ ಮದುವೆಯಾಗುತ್ತಾನೆ. ಆದರೆ ಅದು ಬಹುಕಾಲ ಬಾಳಿಕೆ ಬರುವುದಿಲ್ಲ. ನಂತರ ಸರೋಜಿನಿಯನ್ನು ಮದುವೆಯಾಗುವ ಅಶ್ವತ್ಥಾಮ ಅವಳ ಕಟ್ಟುಪಾಡುಗಳಿಗೆ ರೋಸಿಹೋಗಿ ಬೇರೆಯಾಗುತ್ತಾನೆ. ಅಧಿಕೃತವಾಗಿ ಮೂರು ಮದುವೆಯಾದರೂ ಅವನ ಬಾಳಿನಲ್ಲಿ ಹಲವು ಹೆಣ್ಣುಗಳು ಬಂದುಹೋಗುತ್ತಾರೆ.
ಅಹಂಕಾರ, ಅತಿಕಾಮ, ಭ್ರಮೆ ಇವುಗಳನ್ನೆಲ್ಲ ತನ್ನ ಶಕ್ತಿಯೆಂದೇ ಆತ ಭಾವಿಸುತ್ತಾನೆ. ಪಾತ್ರವಾಗಿ ಬದುಕುವುದು, ಬದುಕಿನುದ್ದಕ್ಕೂ ನಟಿಸುವುದು ಆತನಿಗೆ ಇಷ್ಟದ ಕಾಯಕ. ಆತ ಬಹಳ ಓದಿಕೊಂಡವನು, ವಾದಕ್ಕೆ ನಿಂತರೆ ಸೋಲಿಸುವುದು ಸಾಧ್ಯವಿಲ್ಲ! ಅದೆಷ್ಟೋ ಕೃತಿಗಳನ್ನು ರಚಿಸಿದ ನಿರೂಪಕನೂ ಅಶ್ವತ್ಥಾಮನ ಪ್ರಭಾವಕ್ಕೆ ಒಳಗಾಗುತ್ತಾನೆ.