ಕೂದಲು ಅಂದವಾಗಿರಬೇಕು ಎಂದು ಎಲ್ಲರು ಇಚ್ಛೆ ಪಡುತ್ತಾರೆ. ಆದರೆ ಇಂದಿನ ನಮ್ಮ ಬದಲಾದ ಜೀವನಶೈಲಿ, ನೀರು, ಧೂಳು, ದೇಹದಲ್ಲಿ ಉಷ್ಣತೆ ಎಲ್ಲವು ನಮ್ಮ ಕೂದಲಿನ ಮೇಲೆ ಅಗಾದವಾದ ಪರಿಣಾಮ ಬೀರುತ್ತಿದೆ. ಕೂದಲು ಉದುವುದು, ತಲೆಹೊಟ್ಟು ಹೀಗೆ ಒಂದೊಂದೆ ಸಮಸ್ಯೆ ಆರಂಭ ಆಗುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಶಾಂಪೂಗಳನ್ನು ತಂದು ಉಪಯೋಗಿಸಿದರೂ ಕೂದಲು ಉದುರುವ ಸಮಸ್ಯೆ ಸರಿಯಾಗುವುದಿಲ್ಲ.
ಇಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡುವಲ್ಲಿ ದಾಸವಾಳ ಹೂವು ಕೂಡ ಒಂದು. ದಾಸವಾಳದ ಹೂವು ಕೂದಲನ್ನು ಬುಡದಿಂದಲೇ ಗಟ್ಟಿಗೊಳಿಸಿ ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೆ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಇದರಿಂದ ಸುಂದರವಾದ ಕೂದಲನ್ನು ಪಡೆಯಬಹುದಾಗಿದೆ.
ಇನ್ನು ದಾಸವಾಳದ ಹೂವಿನ ರಸವನ್ನು ತೆಗೆದು ನೆತ್ತಿಗೆ ಹಾಕಿಕೊಂಡರೆ ನೆತ್ತಿಗೆ ತಂಪಿನ ಅನುಭವವಾಗುತ್ತದೆ. ಅಲ್ಲದೆ ಇದು ಸೂರ್ಯನ ಬಿಸಿಲಿನ ಕಿರಣಗಳಿಂದ ನೆತ್ತಿ ಸುಡುವುದನ್ನು ತಪ್ಪಿಸುತ್ತದೆ. ಹೀಗಾಗಿ ತಲೆಬಿಸಿಯಾಗುವುದನ್ನು ತಡೆದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದರ ಜೊತೆಗೆ ಕೂದಲು ಜಿಡ್ಡಾಗುವುದನ್ನು ಹಾಗೂ ನೆತ್ತಿ ಒಣಗಿ ಡ್ಯಾಂಡ್ರಫ್ ಆಗುವುದನ್ನು ತಡೆಯುತ್ತದೆ. ಇದು ದೇಹದ ಉಷ್ಣತೆಯನ್ನೂ ನಿಯಂತ್ರಿಸುತ್ತದೆ.
ದಾಸವಾಳದ ಹೂವುಗಳು ಮತ್ತು ಎಲೆಗಳಲ್ಲಿ ಇರುವ ಪ್ಲೇವನಾಯ್ಡ್ಗಳು ಮತ್ತು ಅಮೈನೋ ಆಮ್ಲಗಳು, ತಲೆಯ ಮೇಲೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ, ಅಲ್ಲದೆ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಮೈನೋ ಆಮ್ಲಗಳು ಕೂದಲಿನ ಬುಡದಲ್ಲಿ ಜೀವಕೋಶಗಳಲ್ಲಿ ಕೆರಾಟಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ, ಆರೋಗ್ಯಕರ ಕೂದಲು ಬೆಳವಣಿಗೆಯಾಗುವಂತೆ ಮಾಡುತ್ತದೆ. ಕೂದಲು ಸಣ್ಣ ವಯಸ್ಸಿನಲ್ಲಿಯೇ ಬಿಳಿಯಾಗುವುದನ್ನು ದಾಸವಾಳದ ಹೂವು ತಡೆಯುತ್ತದೆ.
ಡಾಂಡ್ರಫ್ ನಿವಾರಣೆಗೂ ದಾಸವಾಳ ಪರಿಣಾಮಕಾರಿ. ದಾಸವಾಳದ ಸೊಪ್ಪು ಮತ್ತು ಹೂವಿನ ನೀರು ಎರಡೂ ಕೂಡ ನೆತ್ತಿಯನ್ನು ತಂಪುಗೊಳಿಸಿ ಅಂದವಾದ ಕಪ್ಪನೆಯ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.