ಮಾನವನ ಕಲಿಕೆಯು ಹುಟ್ಟಿನಿಂದಲೇ ಪ್ರಾರಂಭವಾಗುತ್ತದೆ. ಜನರು ತಮ್ಮ ಸುತ್ತಮುತ್ತಲಿನ ಪರಿಸರದ ನಡುವೆ ನಡೆಯುವ ಬದಲಾವಣೆಯಿಂದಲು ಜೀವನದ ಕೊನೆಗಳಿಗೆಯವರೆಗೆ ಒಂದು ಉತ್ತಮವಾದ ಪಾಠ ಕಲಿಯುತ್ತಿರುತ್ತಾನೆ. ಕೆಲವೊಮ್ಮೆ ಅಕ್ಕ-ಪಕ್ಕದವರಿಂದ, ತಮ್ಮವರಿಂದ, ಸಹೊದ್ಯೋಗಿಗಳಿಂದ ಜೀವನದ ಅಮೂಲ್ಯವಾದ ಪಾಠ ಕಲಿಯಲು ಸಿಗುತ್ತದೆ.
ಅವರಿಬ್ಬರು ಕಾಲೇಜು ಜೀವನದ ಆಪ್ತ ಮಿತ್ರರು. ಒಬ್ಬ ಪುಸ್ತಕದ ಹುಳು, ಯಾವಗಲೂ ಲೈಬ್ರೆರಿಯಲ್ಲಿ ಅಧ್ಯಯನಕ್ಕೆ ಒತ್ತು ಕೊಡುತ್ತಿರುತ್ತಾನೆ. ಅದರೆ ಇನ್ನೊಬ್ಬ ಬಾಹ್ಯ ಜಗತ್ತಿಗೆ ತೆರೆದುಕೊಂಡಿರುವ ಮಲ್ಟಿಟ್ಯಾಲೆಂಟ್ಡ್. ನಾಟಕ, ಸಂಗೀತ, ನೃತ್ಯ, ಭಾಷಣ ಹೀಗೆ ಬೇರೆ ಬೇರೆ ರೀತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾನೆ. ಈ ಮಧ್ಯೆ ಇವನಿಗೆ ತರಗತಿ ಕಡೆ ಹೆಚ್ಚಿನ ಗಮನ ಹರಿಸಲು ಅಸಾಧ್ಯವಾಗುತ್ತದೆ, ಇವರಿಬ್ಬರದ್ದು ಒಂದೇ ಕಾಂಬಿನೇಶನ್.
ಪರೀಕ್ಷೆ ಬರೆಯೊದಿಕ್ಕೆ ಪ್ರ್ಯಾಕ್ಟಿಕಲ್ ತರಗತಿಯ ರೆರ್ಕಾಡ್ಸ್ ನೀಡಿದ ಮೇಲೆ ಹಾಲ್ ಟಿಕೆಟ್ ಸಿಗುವ ಪದ್ದತಿ. ಕಡೆಗೂ ಆ ಶುಭಗಳಿಗೆ ಬಂತು. ಇನ್ನೇನು ಎಲ್ಲರೂ ತಮ್ಮ ತಮ್ಮ ರೆರ್ಕಾಡ್ಸ್ ನೀಡಬೇಕಾಗಿತ್ತು. ಆದರೆ ಇಡೀ ಶೈಕ್ಷಣಿಕ ವರ್ಷ ಪೂರ್ತಿ ತರಗತಿಯಿಂದ ಹೊರಗಿರುತ್ತಿದ್ದ ಸಕಲಕಲಾವಲ್ಲಭನ ಸಪ್ಪೆ ಮುಖವನ್ನು ನೀರಿಕ್ಷೆ ಮಾಡಿದ್ದ ಎಲ್ಲರಿಗೆ ತುಸು ನಿರಾಶೆಯಾಯಿತ್ತು. ಏಕೆಂದರೆ ಈತನ ಪುಸ್ತಕದ ಹುಳು ಆಗಿದ್ದ ಸ್ನೇಹಿತ ರೆರ್ಕಾಡ್ಸ್ ಎಲ್ಲವನ್ನು ರೆಡಿಮಾಡಿಕೊಂಡಿದ್ದ.
ಎರಡು ವರ್ಷಗಳ ನಂತರ ಪುಸ್ತಕದ ಹುಳು ಆಗಿದ್ದವನು ಸ್ನಾತಕೋತ್ತರ ಪದವಿ ಮುಗಿಸಿಕೊಂಡು ಮಲ್ಟಿಟ್ಯಾಲೆಂಟ್ ಗೆಳೆಯ ಆತ ಕೆಲಸ ಮಾಡುತ್ತಿದಂತಹ ಆಫೀಸ್ನಲ್ಲಿ ಭೇಟಿ ಮಾಡುತ್ತಾನೆ. ಕೆಲಸ ಇದ್ದರೆ ಹೇಳು ಮಾರಾಯ ಎಂದು ಕೇಳಿದಾಗ, ಖಂಡಿತವಾಗಿಯು ಹೇಳುತ್ತೇನೆ ಎಂದಾಗ ಎಲ್ಲಿಲ್ಲದ ಖುಷಿ. ಆದರೆ ಆ ಖುಷಿ ಜಾಸ್ತಿ ದಿನ ಇರಲಿಲ್ಲ ಏಕೆಂದರೆ ಅದೇ ಆಫೀಸ್ನಲ್ಲಿ ಕೆಲಸಮಾಡುತ್ತಿದಂತಹ ಇನ್ನೊಬ್ಬ ಸ್ನೇಹಿತ ಬಂದು ಕೆಲಸದ ವಿಷಯ ಎನಾಯಿತ್ತು ? ನಮ್ಮಲ್ಲಿಯೇ ಮೂರು ವೆಕೆನ್ಸಿ ಖಾಲಿ ಇದೆಯಲ್ಲ ಎಂದಾಗ ಮೊದಲ ಸಲ ಭೂಮಿ ಕಾಲಕೆಳಗಿನಿಂದ ಜಾರಿದಂತಾಯಿತ್ತು. ಆಕಾಶ ಕಳಚಿ ತಲೆ ಮೇಲೆ ಬಿದ್ದಂತಾಯಿತ್ತು.
ನಮ್ಮಲ್ಲಿಯೇ ಕೆಲಸ ಇದೆ ಅಪ್ಲಿಕೇಶನ್ ಹಾಕಬಹುದು ಎಂಬ ಒಂದು ಮಾತು ಬಹುಷ ಗೆಳೆಯನ ಬದುಕಿಗೆ ಸಂಜೀವಿನಿ ಆಗುತ್ತಿತ್ತು. ಯಾಕೆಂದರೆ ಆ ಸಮಯದಲ್ಲಿ ಅವನಿಗೆ ಕೆಲಸದ ತೀರ ಅವಶ್ಯಕತೆ ಇತ್ತು. ಸಮಯ ಸಂದರ್ಭಕ್ಕೆ ಜನ ಹೇಗೆ ಬದಲಾಗುತ್ತಾರೆ ಎನ್ನುವುದಕ್ಕೆ ಅದ್ಭುತ ಸಾಕ್ಷಿ.
ಪರರನ್ನು ನಂಬಿ ಕೆಟ್ಟವರರಿಲ್ಲವೋ ಪರಾಮಾತ್ಮ. ಆದರೆ ಇಲ್ಲಿ ಪರವ್ಯಕ್ತಿ ಯಾರು ಅಲ್ಲಾ ಸ್ನೇಹಿತ. ಸ್ನೇಹದ ಮೇಲೆ ನಂಬಿಕೆ ಕಳಚಿದ ನಂತರ ತನ್ನ ಮೇಲೆ ತಾನೇ ನಂಬಿಕೆ ಇಟ್ಟು ಹಾಕಿದ ದಿಟ್ಟ ಹೆಜ್ಜೆ ಉನ್ನತಿಯತ್ತ ಸಾಗಿಸುತ್ತದೆ.
ನಮ್ಮ ನಂಬಿಕೆ ವಿಶ್ವಾಸಕ್ಕೆ ದಕ್ಕೆ ಬಂದಾಗ ಈ ಜಗತ್ತು ತುಂಬಾ ಕೆಟ್ಟದು ಅನಿಸಿಬಿಡುತ್ತದೆ. ಕೆಟ್ಟದಾಗಿರುವುದು ಜಗತ್ತು ಅಲ್ಲ ನಾವು ಯೋಚನೆ ಮಾಡುವ ರೀತಿ ಹಾಗಿದೆ. ಕುರುಡು ನಂಬಿಕೆ ಯಾವತ್ತು ಒಳ್ಳೆಯದಲ್ಲ. ಸಾಮಾನ್ಯವಾಗಿ ನಾವು ನಮಗಿಂತಲೂ ಪರರ ಮೇಲೆ ಅತಿಯಾದ ನಂಬಿಕೆ ಇಟ್ಟು ಕೊಂಡಿರುತ್ತೇವೆ. ಇದು ನಮ್ಮನ್ನು ಕೊಂಚ ಬಲಹೀನವನ್ನಾಗಿ ಮಾಡುತ್ತದೆ.
ಇಂದು ಯಾರ ಸಹಾಯವಿಲ್ಲದೆ ಸ್ವತ: ಪರಿಶ್ರಮದಿಂದ ಆತ ತನ್ನ ಗುರಿ ತಲುಪಿದ್ದಾನೆ. ಪ್ರತಿಷ್ಟಿತ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ .ಇಲ್ಲಿ ಗಮನಿಸ ಬೇಕಾದಂತಹ ಅಂಶವೆಂದರೆ ಆತನ ಆತ್ಮವಿಶ್ವಾಸ. ಧೈರ್ಯ, ಸಾಧಿಸುವ ಛಲ ಇದ್ದರೆ ಎಲ್ಲಾವೂ ಸಾಧ್ಯ. ಉತ್ತಮ ನಾಳಿನ ಕನಸ್ಸು ನಮ್ಮೊಂದಿಗೆ ಇರುವಾಗ ಧೈರ್ಯದಿಂದಲೇ ಮುನ್ನುಗ್ಗ ಬೇಕು. ನಂಬಿಕೆ ವಿಶ್ವಾಸ ಇನೋಬ್ಬರ ಮೇಲೆ ಅಲ್ಲ ನಮ್ಮ ಮೇಲೆ ಇರಬೇಕು. ಒಂದು ಹೊಸ ಶಕ್ತಿಯಾಗಿ ಚಿಮ್ಮಬೇಕು.