News Karnataka Kannada
Thursday, May 16 2024
ವಿಶೇಷ

ಬಂಟ್ವಾಳ: ತುಳುನಾಡಿನ ಶ್ರೇಷ್ಠ ಆಚರಣೆ ಆಟಿ ಕಳೆಂಜ

Aati Kalenja is the greatest celebration of Tulunadu
Photo Credit : News Kannada

ಬಂಟ್ವಾಳ: ಆಟಿ ಕಳೆಂಜ ತುಳುನಾಡಿನ ಒಂದು ಶ್ರೇಷ್ಠ ಆಚರಣೆಯಾಗಿದೆ. ತುಳುನಾಡಿನಲ್ಲಿ ವಿಪರೀತ ಮಳೆಯ ಸಮಯವಾದ ಆಟಿ ತಿಂಗಳಿನಲ್ಲಿ ಊರಿಗೆ ಅಂಟಿರುವ ಮಾರಿಯನ್ನು ಹೋಗಲಾಡಿಸಲು ಮನೆಮನೆಗೆ ಆಟಿ ಕಳೆಂಜ ಬರುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ.

ತುಳುವಿನ ಆಟಿ (ಆಷಾಢ: ಚಾಂದ್ರಮಾನದಲ್ಲಿ ನಾಲ್ಕನೆಯ ತಿಂಗಳು) ತಿಂಗಳಲ್ಲಿ ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳೆಂಜ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ, ಸಣ್ಣ ಬಾಲಕನಿಗೆ ತಾಳೆಗರಿಯ ತತ್ರ (ಛತ್ರಿ) ಕೊಟ್ಟು ಕುಣಿಯಲು ಹಿಮ್ಮೇಳದಲ್ಲಿ ‘ತೆಂಬರೆ’-ಯನ್ನು (ಚರ್ಮ ವಾದ್ಯ)ಪುರುಷ ವ್ಯಕ್ತಿ ನುಡಿಸುತಿರುತ್ತಾನೆ. ಕಳೆಂಜನ ವೇಷ ಭೂಷಣದಲ್ಲಿ ಮುಖ್ಯವಾಗಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಗೆ ಇವುಗಳು ಆಟಿಕಳೆಂಜನ ವೇಷಗಳು.

ಆಟಿಕಳೆಂಜ ಕುಣಿತದ ಉದ್ದೇಶ

ಮನುಷ್ಯನಿಗಾಗಲಿ, ಪ್ರಾಣಿ ಪಶುಗಳಿಗಾಗಲಿ ಬಂದ ಮಾರಿಯನ್ನು ಅಥವಾ ರೋಗವನ್ನು ಓಡಿಸುವುದು ಆಟಿಕಳೆಂಜನ ಕಾರ್ಯ ಎಂಬುದಾಗಿ ತುಳು ಪಾಡ್ದನದಿಂದ ತಿಳಿದು ಬರುವುದು. ತುಳುವಿನಲ್ಲಿ ಆಷಾಡ ಆರಂಭವಾಗುವುದು ಎಂದರೆ ಮಳೆಗಾಲದ ಆರಂಭವೆಂದರ್ಥ, ಕೆಲವೊಮ್ಮೆ ಮಳೆ ಬೀಳದಿದ್ದರೆ ಬಿಸಿ ಹೆಚ್ಚಾಗಿ ಕೆರೆ-ಕುಂಟೆಗಳು ಬತ್ತಲಾರಂಭಿಸಿ ಜನ ನೀರಿಗಾಗಿ ಪರಿತಪಿಸುವರು, ಸಹಜವಾಗಿ ರೋಗ ರುಜಿನ ಹುಟ್ಟಿಕೊಳ್ಳುವುದು. ಮಳೆಗಾಲ ಆರಂಭ ಹಾಗೂ ಬೇಸಿಗೆಯ ಕೊನೆಯ ಈ ಕಾಲವು ಸಂಕ್ರಮಣದ ಸ್ಥಿತಿಯನ್ನು ತಂದೊಡ್ಡುತ್ತವೆ. ಆಟಿ ಅಥವಾ ಆಷಾಡ ತಿಂಗಳಲ್ಲಿ ಬಿಸಿಲು ಕಾದರೆ ಆನೆಯ ಬೆನ್ನೂ ಬಿರಿಯುವುದೆಂಬುದಾಗಿ ತುಳುವಿನಲ್ಲಿ ಗಾದೆಯಿದೆ (ಆಟಿದ ದೊಂಬು ಆನೆತ ಬೆರಿ ಪುಡಪು) ಹೀಗಾಗಿ ಆಟಿಕಳೆಂಜ ಬಂದರೆ ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ಜನರಲ್ಲಿ ಇದೆ. ಹೀಗಾಗಿ ಆಟಿಕಳಂಜನಿಗೆ ತುಳುನಾಡಿನಲ್ಲಿ ಮಹತ್ವದ ಸ್ಥಾನವಿದೆ.

ಪದ್ದತಿಯನ್ನು ಉಳಿಸುವುದೇ ಮೂಲ ಉದ್ದೇಶ
ವಿಟ್ಲ ಸಮೀಪದ ಮಂಗಲಪದವು ಸುರುಳಿಮೂಲೆ ನಿವಾಸಿ ಸೋಮಪ್ಪ ಸುರುಳಿಮೂಲೆ ಅವರ ಈ ಆಟಿ ಕಳೆಂಜದ ಪದ್ದತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲಿಂಜ , ಒಕ್ಕೆತ್ತೂರು ಹಾಗೂ ವೀರಕಂಭ ಈ ಮೂರುಗ್ರಾಮಗಳ ಪ್ರತಿ ಹಿಂದು ಧರ್ಮದ ಮನೆಗಳಿಗೆ ಬೇಟಿ ನೀಡುತ್ತೇವೆ ಎಂದು ಅವರು ತಿಳಿಸಿದರು.

ಆಟಿ ಕಳೆಂಜ ಮನೆಗೆ ಬಂದಾಗ ಪ್ರತಿಯೊಬ್ಬರು ಸಂತೋಷದಿಂದ ಹಳೆಯ ಪದ್ದತಿಯಂತೆ ಆಚರಣೆ ಮಾಡುತ್ತಾರೆ ಎನ್ನುವ ಮಾತನ್ನು ಅವರು ಹೇಳುತ್ತಾರೆ.

ಇವರ ಮಗ ತಿಲಕ್ ರಾಜ್ ಆಟಿ ಕಳೆಂಜ ವೇಷವನ್ನು ಹಾಕಿರುವುದಾಗಿ ತಿಳಿಸಿದ ಅವರು, ಈತ ಡಿಪ್ಲೊಮಾ ವನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ್ದಾನೆ , ಮುಂದೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸುತ್ತಾನೆ. ಜೊತೆಗೆ ನಮ್ಮ ಹಳೇಯ ಪದ್ದತಿ, ಸಂಪ್ರದಾಯ, ಆಚರಣೆಯನ್ನು ಉಳಿಸಿಕೊಂಡು ಬರುತ್ತೇವೆ ಎಂದು ಅತ್ಯಂತ ಖುಷಿಯಿಂದ ಹೇಳಿದರು. ನನಗೆ ನನ್ನ ತಂದೆ ಕಲಿಸಿದ್ದಾರೆ ಹಾಗೆ ಮುಂದಿನ ದಿನಗಳಲ್ಲಿ ಮಕ್ಕಳು ಉಳಿಸಿಕೊಂಡು ಹೋಗಬೇಕು ಎಂಬುದೇ ನನ್ನ ಆಸೆ.

ಆಟಿ ಕಳೆಂಜ ಸಂಪ್ರದಾಯ ಮತ್ತು ಅಚರಣೆ ಮುಂದಿನ ಪೀಳಿಗೆಗೆ ತಿಳಿಸುವ ಮತ್ತು ಉಳಿಸುವ ಕಾರ್ಯವನ್ನು ಇವರು ಮಾಡುತ್ತಿರುವುದು ಹೆಮ್ಮೆಯ ವಿಷಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು