ಅಂಜೂರದಂತೆ ಮೇಲ್ಮೋಟಕ್ಕೆ ಕಂಡು ಬಂದರೂ ಅದರಂತೆ ಮಾರಾಟದ ಯಾವುದೇ ಜನಪ್ರಿಯತೆ ಇದಕ್ಕಿಲ್ಲ. ಕಣ್ಣು ಮುಂದೆಯೇ ಇದ್ದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿಯೇ ಇದು ಪ್ರಾಣಿ ಪಕ್ಷಿಗಳಿಗಷ್ಟೆ ಸೀಮಿತವಾಗಿರುವ ಈ ಹಣ್ಣು ಅತ್ತಿಹಣ್ಣು.
ಸಮ್ಮ ಸುತ್ತ ಮುತ್ತ ಎಲ್ಲೆಂದರಲ್ಲಿ ಬೆಳೆದರೂ ಇದಕ್ಕೆ ಯಾವುದೇ ಜನಪ್ರಿಯತೆಯಿಲ್ಲ. ಹಾಗೆಂದು ಇದನ್ನು ನಿರ್ಲಕ್ಷಿಸುವಂತಿಲ್ಲ. ಇದರಲ್ಲಿರುವ ಔಷಧೀಯ ಗುಣನೋಡಿದರೆ ನಾವೇ ಬೆಚ್ಚಿ ಬೀಳುತ್ತೇವೆ. ಏಕೆಂದರೆ ಬರೀ ಅತ್ತಿ ಹಣ್ಣು ಮಾತ್ರವಲ್ಲ ಇಡೀ ಮರವೇ ಔಷಧದ ಗಣಿ ಎಂಬುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಹಣ್ಣು, ಬೇರು, ತೊಗಟೆ ಎಲ್ಲವೂ ಒಂದೊಂದು ರೀತಿಯ ಔಷಧೀಯ ಗುಣವನ್ನು ಹೊಂದಿದ್ದು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎಂಬುದು ಖುಷಿಪಡುವ ವಿಚಾರವಾಗಿದೆ.
ಇನ್ನು ಆಯುರ್ವೇದಲ್ಲಿ ಪ್ರಖ್ಯಾತರಾಗಿದ್ದ ಚರಕರರೇ ಅತ್ತಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಬಣ್ಣಿಸಿರುವುದು ಗಮನಾರ್ಹ. ಹತ್ತಿ ಹಣ್ಣಿನ ಸತ್ವವನ್ನು ಚಮಚೆಯಷ್ಟು ದಿನ ಸೇವಿಸುತ್ತಾ ಬಂದರೆ ಸಿಹಿಮೂತ್ರ ರೋಗವನ್ನು ನಿಯಂತ್ರಿಸಬಹುದಂತೆ.
ಅಪಕ್ವವಾದ ಹಣ್ಣನ್ನು ಜೇನುತುಪ್ಪದೊಂದಿಗೆ ಅಥವಾ ಹಣ್ಣಿನ ರಸಕ್ಕೆ ಸಕ್ಕರೆಯನ್ನು ಬೆರೆಸಿ ಸುಮಾರು ಹದಿನೈದು ದಿನಗಳ ಕಾಲ ನಿತ್ಯ ಸೇವಿಸಿದರೆ ಶೀಘ್ರ ವೀರ್ಯಸ್ಪಲನ ಕಡಿಮೆಯಾಗಿ ಮೂತ್ರ ವಿಸರ್ಜನೆ, ಶ್ವೇತಪದರ, ಗೆನೋರಿಯಾ, ಮೂಗಿನಲ್ಲಿ ರಕ್ತಸ್ರಾವ ಇತ್ಯಾದಿ ವ್ಯಾದಿಗಳು ಗುಣಮುಖವಾಗುತ್ತವೆ.
ಅತ್ತಿ ಹಣ್ಣನ್ನು ಜೇನುತುಪ್ಪ ಮತ್ತು ಸ್ವಲ್ಪ ಉಪ್ಪಿನೊಂದಿಗೆ ಸೇವಿಸುವುದರಿಂದ ಕಾಮಾಲೆ, ಪಿತ್ತಪ್ರಕೋಪ, ಬಾಯಿಹುಣ್ಣು, ಮನೋರೋಗ, ಗರ್ಭಪಾತ ಮೊದಲಾದವುಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಹಣ್ಣನ್ನು ಸೇವಿಸುವುದರಿಂದ ಗೂರಲು, ನರಗಳ ದೌರ್ಬಲ್ಯ ಕಡಿಮೆಯಾಗಿ ಉತ್ತೇಜನ ತುಂಬುತ್ತದೆ. ಅತ್ತಿಯ ಎಳಸಾದ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಜಗಿಯುವುದರಿಂದ ಬಾಯಿಯೊಳಗಿನ ಹುಣ್ಣುಗಳು ಮಾಯವಾಗುತ್ತವೆ. ಅಷ್ಟೇ ಅಲ್ಲದೆ ಬಾಯಿಯ ದುರ್ಗಂಧ ತಡೆಗೂ ಸಾಧ್ಯವಾಗುತ್ತದೆ.
ಎಲೆಯ ರಸವನ್ನು ಗೋಧಿ ಹಿಟ್ಟಿನೊಂದಿಗೆ ಕಲೆಸಿ ಕುರದ ಜಾಗಕ್ಕೆ ಲೇಪಿಸುವುದರಿಂದ ಕುರ ಹಣ್ಣಾಗಿ ಒಡೆಯುತ್ತದೆ. ಆಗತಾನೆ ಕಿತ್ತ ಎಲೆಗಳನ್ನು ಅರೆದು ರಸವನ್ನು ಲೇಪಿಸುವುದರಿಂದ ವೃಣಗಳು ವಾಸಿಯಾಗುತ್ತವೆ. ಎಲೆಗಳ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಪಿತ್ತವಿಕಾರವನ್ನು ತಡೆಗಟ್ಟಬಹುದು. ಎಲೆಗಳ ಮೇಲೆ ಕಂಡು ಬರುವ ಗಂಟುಗಳನ್ನು ತೆಗೆದು ಅವುಗಳನ್ನು ಹಾಲಿನಲ್ಲಿ ಹಾಕಿ ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಸಿಡುಬು ಕಲೆಗಳಿಂದಾದ ಗುಳಿ ಮಾಯವಾಗುತ್ತದೆ
ಅತ್ತಿ ಮರದ ತೊಗಟೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನುಣುಪಾಗಿ ಪುಡಿಮಾಡಿ ಸುಮಾರು ಐದರಿಂದ ಹತ್ತು ಗ್ರಾಂ ನಷ್ಟು ಪುಡಿಯನ್ನು ಆಗತಾನೆ ಕಡೆದ ಸಿಹಿ ಮಜ್ಜಿಗೆಯೊಂದಿಗೆ ಒಂದು ಲೋಟದಷ್ಟು ಬೆರೆಸಿ ಎರಡು ತಿಂಗಳ ಕಾಲ ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸುವುದರಿಂದ ಅಮಶಂಕೆ, ಅತಿಸಾರ, ಮೂಲವ್ಯಾಧಿ ರೋಗಗಳು ಗುಣಮುಖವಾಗುತ್ತವೆ.
ಹತ್ತುಗ್ರಾಂ ಅತ್ತಿ ತೊಗಟೆಯ ಪುಡಿಗೆ ಅರ್ಧ ಔನ್ಸ್ನಷ್ಟು ಹಾಗಲಕಾಯಿ ರಸವನ್ನು ಸೇರಿಸಿ ಕುಡಿಯುವುದರಿಂದ ಸಿಹಿ ಮೂತ್ರ ರೋಗವನ್ನು ತಡೆಯಲು ಸಾಧ್ಯವಿದೆ. ಬೇರನ್ನು ಚೆನ್ನಾಗಿ ಕುಟ್ಟಿ ರಸ ತೆಗೆದು ಅದಕ್ಕೆ ಜೀರಿಗೆ ಬೆರೆಸಿ ಎಳನೀರಿನೊಂದಿಗೆ ಮುಂಜಾನೆ ಗೆನೋರಿಯಾ ಕಾಯಿಲೆಯನ್ನು ತಡೆಗಟ್ಟಬಹುದಂತೆ. ಬೇರಿನ ರಸವನ್ನು ತೆಗೆದು ದಿನಕ್ಕೆ ಒಂದೆರಡು ಚಮಚದಷ್ಟು ಸೇವಿಸುತ್ತಾ ಬಂದರೆ ಆರೋಗ್ಯ ವೃದ್ಧಿಯಾಗುತ್ತದೆ.