ಬೀದರ್: ಇಲ್ಲಿಗೆ ಗಡಿ ಸಮೀಪದ ತೆಲಂಗಾಣದ ರೇಜಂತಲ್ನಲ್ಲಿ ಸಿದ್ಧಿ ವಿನಾಯಕ ದೇವರ 224ನೇ ಜಯಂತಿ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಆರಂಭಗೊಂಡವು.
ಜಯಂತಿ ಅಂಗವಾಗಿ ಮೊದಲ ದಿನ ಗಣಪತಿ, ಶತಚಂಡಿ, ಪೂರ್ಣಾಹುತಿ ಹವನ ಕಾರ್ಯಕ್ರಮ ಜರುಗಿದವು. 250ಕ್ಕೂ ಅಧಿಕ ಭಕ್ತರು ದಂಪತಿ ಸಮೇತ ಪೂರ್ಣಾಹುತಿಯಲ್ಲಿ ಪಾಲ್ಗೊಂಡಿದ್ದರು.
ಜ.15ರವರೆಗೆ ಕಾರ್ಯಕ್ರಮಗಳು ಜರುಗಲಿವೆ.
ಸಿದ್ದಿ ವಿನಾಯಕ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಶೋಕ ರೇಜಂತಲ್ ಮಾತನಾಡಿ, ಪ್ರತಿನಿತ್ಯ 250 ದಂಪತಿ ಪೂರ್ಣಾಹುತಿಯಲ್ಲಿ ಭಾಗವಹಿಸುತ್ತಾರೆ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಪಾಲ್ಗೊಳ್ಳುತ್ತಾರೆ. ನಿತ್ಯವೂ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.
‘ಜ.15ರಂದು ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ಜರುಗಲಿದೆ. 25 ಕ್ವಿಂಟಲ್ ಹೂಗಳಿಂದ ದೇವಸ್ಥಾನ ಅಲಂಕರಿಸಲಾಗಿದೆ. ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.