ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಪುಷ್ಕರಣಿ ಮಧ್ಯಭಾಗದಲ್ಲಿರುವ ಕಟ್ಟೆಯ ಕೆಳಭಾಗದಲ್ಲಿ ವರುಣ ದೇವರ ಶಿಲಾಮಯ ಪೀಠವೊಂದು ಬೆಳಕಿಗೆ ಬಂದು ಭಕ್ತವಲಯದಲ್ಲಿ ಸಂಚಲನ ಮೂಡಿಸಿದೆ.
ಈಗಾಗಲೇ ಪುಷ್ಕರಣಿಯ ಮಧ್ಯಭಾಗದಲ್ಲಿರುವ ಕಟ್ಟೆಯನ್ನು ತೆರವುಗೊಳಿಸಲಾಗಿದ್ದು, ನೂತನ ಶಿಲಾಮಯ ಕಟ್ಟೆಗೆ ಚಾಲನೆಯನ್ನೂ ನೀಡಲಾಗಿದೆ. ಇದೀಗ ಶಿಲಾಮಯ ಕಂಬಗಳನ್ನು ಕಟ್ಟೆಯ ನಾಲ್ಕು ಬದಿಗಳಲ್ಲಿ ಇಡಲು ಆಳವಾಡ ಗುಂಡಿಗಳನ್ನು ತೋಡುವ ಸಂದರ್ಭ ದೊಡ್ಡದಾದ ಪಾಣಿಪೀಠ ಹಾಗೂ ಒಂದು ತಾಮ್ರದ ಸಣ್ಣ ಕರಡಿಗೆ ಪತ್ತೆಯಾಗಿದೆ.
ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಶಿಲಾಶಾಸನ, ಕೆತ್ತನೆ ಶಿಲ್ಪಗಳು, ರಾಜರ ಕಾಲದ ನಾಣ್ಯಗಳು, ಗರ್ಭಗುಡಿಯಲ್ಲಿ ಪ್ರಭಾವಳಿ ಪತ್ತೆಯಾಗಿದ್ದವು. ಇದೀಗ ಪುಷ್ಕರಣಿ ಅಭಿವೃದ್ಧಿ ಸಂದರ್ಭದಲ್ಲೂ ಹೊಸ ವಿಸ್ಮಯಗಳು ಬೆಳಕಿಗೆ ಬರುತ್ತಿವೆ. ಈ ಮೂಲಕ ದೇವಸ್ಥಾನದ ಮಹಿಮೆ ಗೋಚರವಾಗುತ್ತಿದೆ.
ಕೆರೆಯಲ್ಲಿದ್ದ ವರುಣ ದೇವರ ಮೂರ್ತಿ ಸುತ್ತಲು ಕಟ್ಟಿದ ಮುರ ಕಲ್ಲನ್ನು ತೆರವುವುಗೊಳಿಸಿದ ಸಂದರ್ಭ ಶಿಲಾಮಯವಾದ ಮತ್ತೊಂದು ಪಾಣಿಪೀಠ ಪತ್ತೆಯಾಗಿದೆ.
ಪ್ರತಿ ದಿನವೂ ಕುತೂಹಲಕಾರಿ ಸಂಗತಿ ಇಲ್ಲಿ ಬೆಳಕಿಗೆ ಬಂದಿದೆ. ಇಲ್ಲಿರುವ ವರುಣ ದೇವರು ಕಾಲ ಕಾಲಕ್ಕೆ ಮಳೆ ಬರುವಲ್ಲಿ ಅನುಗ್ರಹ ನೀಡುತ್ತಿದ್ದಾನೆ. ನೂತನ ಶಿಲಾಮಯ ಕಟ್ಟೆ ಅತೀ ಶೀಘ್ರ ಆಗಬೇಕಾಗಿದ್ದು, ಇಂಜಿನಿಯರ್ ಹಾಗೂ ಶಿಲ್ಪಿಗಳ ನೇತೃತ್ವದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಹೇಳುತ್ತಾರೆ.