ಮೈಸೂರು: ಇತಿಹಾಸ ಪ್ರಸಿದ್ಧ ಸುತ್ತೂರು ಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಫೆ.6ರಿಂದ 11ರವರೆಗೆ ಆರು ದಿನಗಳ ಕಾಲ ನಡೆಯಲಿದ್ದು ಇಡೀ ಕ್ಷೇತ್ರದಲ್ಲಿ ಜಾತ್ರಾ ರಂಗು ಚೆಲ್ಲಿದೆ. ಈಗಾಗಲೇ ಜಾತ್ರೆಗೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವೈಭವದಿಂದ ನಡೆಯುವ ಜಾತ್ರೆಯಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಜಾತ್ರೆಗೆ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಫೆ 6ರಂದು ಜಾತ್ರೆಗೆ ಚಾಲನೆ ಸಿಗಲಿದ್ದು, ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಜಾತ್ರೆಯಲ್ಲಿ. ಫೆ.7ರಂದು ಸಾಮೂಹಿಕ ವಿವಾಹ, ಹಾಲ್ಹರವಿ ಉತ್ಸವ, 8ರಂದು ರಥೋತ್ಸವ, 9ರಂದು ಮಹದೇಶ್ವರ ಕೊಂಡೋತ್ಸವ ಹಾಗೂ ಲಕ್ಷದೀಪೋತ್ಸವ, 10ರಂದು ತೆಪ್ಪೋತ್ಸವ, 11ರಂದು ಅನ್ನ ಬ್ರಹ್ಮೋತ್ಸವದ ಜತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು, ವೈವಿಧ್ಯಮಯ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾಚಟುವಟಿಕೆಗಳು ನಡೆಯಲಿವೆ.
ಪ್ರಸಾದ ಸಮಿತಿಯ ಸಂಚಾಲಕ ಡಾ.ಸುಬ್ಬಪ್ಪ ಮಾಹಿತಿ ನೀಡಿ ಈ ವರ್ಷದ ಜಾತ್ರಾ ಮಹೋತ್ಸವಕ್ಕೆ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದ್ದು, 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ಸಾಧ್ಯತೆ ಇದೆ. ಇದಕ್ಕಾಗಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಪ್ರತಿನಿತ್ಯ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 6 ದಿನಗಳ ಪ್ರಸಾದ ತಯಾರಿಕೆಗೆ 1000 ಕ್ವಿಂಟಾಲ್ ಅಕ್ಕಿ, 180ಕ್ವಿಂಟಾಲ್ ತೊಗರಿಬೇಳೆ, 1500 ಕ್ಯಾನ್ ರಿಫೈನ್ಸ್ ಅಡುಗೆ ಎಣ್ಣೆ, 12 ಟನ್ ಬೆಲ್ಲ, 4ಸಾವಿರ ಕೆ.ಜಿ. ಖಾರದಪುಡಿ, 250 ಕ್ವಿಂಟಾಲ್ ಸಕ್ಕರೆ, 500 ಕೆ.ಜಿ. ನಂದಿನಿ ತುಪ್ಪ, 800 ಕೆ.ಜಿ. ದ್ರಾಕ್ಷಿ, ಗೋಡಂಬಿ, 8000 ಲೀ ಹಾಲು, 28000 ಲೀ ಮೊಸರು, 25,000 ತೆಂಗಿನಕಾಯಿ, 5000 ಕೆಜಿ ಉಪ್ಪಿನಕಾಯಿ ಬಳಸಲಾಗುತ್ತದೆ.
ಬೆಳಗಿನ ಪ್ರಸಾದಕ್ಕೆ ವಿವಿಧ ದಿನಗಳಂದು ಬೆಲ್ಲದ ಅನ್ನ, ಅಕ್ಕಿನುಚ್ಚಿನ ಉಪ್ಪಿಟ್ಟು, ಕೇಸರಿಬಾತ್, ಖಾರಾಬಾತ್, ಸಿಹಿ ಪೊಂಗಲ್, ಖಾರಾ ಪೊಂಗಲ್, ಹುಳಿಗೊಜ್ಜು, ಚಿತ್ರಾನ್ನ, ಬೆಲ್ಲದ ಸಜ್ಜಿಗೆ ನೀಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಪಾಯಸ, ಸಿಹಿ ಬೂಂದಿ, ತರಕಾರಿ ಹುಳಿ, ಅನ್ನ, ಸಾಂಬಾರ್, ಮಜ್ಜಿಗೆ ವಿತರಿಸಲಾಗುತ್ತದೆ. ವಿಶೇಷ ದಿನದಂದು ಗೋಧಿ ಪಾಯಸ, ಮೈಸೂರು ಪಾಕ್ ಮತ್ತು ಬಿಸಿಬೇಳೆ ಬಾತ್ ನೀಡಲಾಗುತ್ತದೆ. ಜತೆಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.