ಮಂಗಳೂರು: ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಮಂಗಳೂರು ಧರ್ಮ ಪ್ರಾಂತ್ಯ ಘಟಕದ ಅಮೃತ ಮಹೋತ್ಸವಕ್ಕೆ ವಾಮಂಜೂರು ಚರ್ಚಿನಲ್ಲಿ ಭಾನುವಾರ ಮಧ್ಯಾಹ್ನ ದಿವ್ಯ ಪೂಜೆ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಸಂಘ ಸಂಸ್ಥೆಗಳು ಹಾಗೂ ವಿವಿಧ ವಲಯದ ಯುವ ಸದಸ್ಯರು ನಡೆಸಿಕೊಟ್ಟ ನೃತ್ಯ, ಹಾಡು, ಪ್ರಹಸನ ಮೊದಲಾದ ವಿವಿಧ ಕಾರ್ಯಕ್ರಮಗಳು ಸಂಘಟನೆಯ 75ನೇ ವರ್ಷಾಚರಣೆಯ ಸಂಭ್ರಮಕ್ಕೆ ಸಾಂಸ್ಕೃತಿಕ ಮೆರಗು ನೀಡಿತು.
ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ, ಭಾರತೀಯ ಕಥೋಲಿಕ್ ಯುವ ಸಂಚಾಲನದ ಮಂಗಳೂರು ಧರ್ಮ ಪ್ರಾಂತ್ಯದ ಘಟಕವು ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉನ್ನತಿ ಹೊಂದಲಿ ಎಂದು ಶುಭ ಹಾರೈಸಿದರು. ‘ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳಿತಾಗುವಂತಹ ಇನ್ನಷ್ಟು ಕಾರ್ಯಕ್ರಮವನ್ನು ಮಾಡುವ ಮೂಲಕ ಸಂಸ್ಥೆಯು ಇನ್ನಷ್ಟು ಸಕ್ರಿಯ ಆಗಬೇಕು’ ಎಂದರು.
ಐ.ಸಿ.ವೈ.ಎಂ ಮಂಗಳೂರು ಧರ್ಮಪ್ರಾಂತ್ಯ ಘಟಕದಲ್ಲಿ ಈ ಹಿಂದೆ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಬಳ್ಳಾರಿ ಧರ್ಮ ಪ್ರಾಂತ್ಯದ ಬಿಷಪ್, ಡಾ. ಹೆನ್ರಿ ಡಿಸೋಜ, ಪ್ರಾಂತೀಯ ನಿರ್ದೇಶಕರಾದ ಫಾ.ಲೂರ್ದ್ ರಾಜ್, ನಗರ ವಲಯದ ಪ್ರಧಾನ ಧರ್ಮಗುರು ಫಾ. ಜೇಮ್ಸ್ ಡಿಸೋಜ, ಸಂಸ್ಥೆಯ ಮಂಗಳೂರು ಧರ್ಮ ಪ್ರಾಂತ್ಯ ಘಟಕದ ಮಾಜಿ ನಿರ್ದೇಕರಾದ ಫಾ. ವಿನ್ಸೆಂಟ್ ಮೊಂತೆರೊ, ಮಾಜಿ ಅಧ್ಯಕ್ಷರಾದ ರಿಚರ್ಡ್ ಡಿಸೋಜ, ಐ.ಸಿ.ವೈ.ಎಂ ರಾಷ್ಟ್ರೀಯ ಅಧ್ಯಕ್ಷ ಆಯಂಟನಿ ಜ್ಯೂಡಿ , ಐ.ಸಿ.ವೈ.ಎಂ ಕರ್ನಾಟಕ ಪ್ರಾಂತೀಯ ಅಧ್ಯಕ್ಷ ನೆವಿನ್ ಆಯಂಟನಿ, ನಿರ್ದೇಶಕ ಫಾ. ಆಶ್ವಿನ್ ಕಾರ್ಡೋಜ, ಅಧ್ಯಕ್ಷ ಜೇಸನ್ ಕ್ರಾಸ್ತಾ, ಪ್ರಧಾನ ಕಾರ್ಯದರ್ಶಿ ವೀಷ್ಮಾ ಡಿಕುನ್ಹಾ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.