ಚಾಮರಾಜನಗರ: ಸಾಮಾನ್ಯವಾಗಿ ಎಲ್ಲ ಕಡೆಯೂ ಆಂಜನೇಯನ ದೇಗುಲವಿರುತ್ತದೆ. ಆದರೆ ವಾನರನಿಗಾಗಿಯೇ ನಿರ್ಮಿಸಿದ ದೇಗುಲವೊಂದು ಜಿಲ್ಲೆಯಲ್ಲಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.
ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದಲ್ಲಿ ವಾನರನ ದೇಗುಲವಿದ್ದು, ಈ ದೇಗುಲದಲ್ಲಿ ಪ್ರತಿನಿತ್ಯವೂ ವಾನರನಿಗೆ ಪೂಜಾಕೈಂಕರ್ಯಗಳು ನಡೆಯುತ್ತಿವೆ. ಇಷ್ಟಕ್ಕೂ ಈ ವಾನರ ದೇಗುಲ ನಿರ್ಮಾಣವಾಗಿದ್ದು, ಹೇಗೆ ಎಂಬುದನ್ನು ನೋಡುವುದಾದರೆ ಶಿವಪುರ ಗ್ರಾಮದಲ್ಲಿ 2017ರಲ್ಲಿ ಕೋತಿ ಮರಿಯೊಂದು ಆಕಸ್ಮಿಕವಾಗಿ ಮೃತಪಟ್ಟಿತ್ತು.
ಹೀಗೆ ಮೃತಪಟ್ಟ ಕೋತಿ ಮರಿಯನ್ನು ಗ್ರಾಮಸ್ಥರು ಎಸೆಯದೆ ಅದನ್ನು ಶಾಸ್ತ್ರೋಕ್ತವಾಗಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಿ ಸಮಾಧಿ ಮಾಡಿದರು. ಅದಾದ ನಂತರ ಸ್ಥಳೀಯ ಪುರೋಹಿತರ ಸಲಹೆ ಪಡೆದು ಪುಟ್ಟದಾದ ಗುಡಿಯೊಂದನ್ನು ನಿರ್ಮಿಸಿ ಅದರ ಉದ್ಘಾಟನೆ ಮಾಡಿ ಪೂಜೆ ಸಲ್ಲಿಸಿದರು. ಆ ವರ್ಷ (2017) ಶ್ರಾವಣ ಮಾಸದ ಶನಿವಾರ ಪೂಜಾ ಕಾರ್ಯವನ್ನು ನಡೆಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಜನ ಈ ದೇಗುಲಕ್ಕೆ ಕೈ ಮುಗಿಯುತ್ತಾ ಬರುತ್ತಿದ್ದಾರೆ.
ಒಟ್ಟಾರೆ ಶಿವಪುರ ಗ್ರಾಮದಲ್ಲಿರುವ ಪುಟ್ಟದಾದ ವಾನರನ ದೇಗುಲ ಗಮನಸೆಳೆಯುತ್ತಿದ್ದು, ಎಲ್ಲರೂ ಈ ದೇಗುಲಕ್ಕೆ ನಮಿಸಿ ಮುಂದೆ ಸಾಗುವುದು ಮಾಮೂಲಿಯಾಗಿದೆ.