ತುಮಕೂರು: ಸಮಾಜದ ಧ್ವನಿಯಾಗಿ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಪತ್ರಕರ್ತರು ತಾವು ನಿರ್ವಹಿಸುವುದು ಕೇವಲ ಕೆಲಸವಲ್ಲ, ಅದೊಂದು ಶ್ರೇಷ್ಠ ಜವಾಬ್ದಾರಿ ಎಂದು ಅರಿತುಕೊಳ್ಳುವುದು ಮುಖ್ಯ ಎಂದು ಟಿವಿ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಸೋಮವಾರ ಆಯೋಜಿಸಿದ್ದ ‘ಆಧುನಿಕ ಮಾಧ್ಯಮರಂಗದ ಉದ್ಯೋಗಾವಕಾಶಗಳು’ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
ಒಂದೇ ಪದವಿ ಹತ್ತಾರು ಉದ್ಯೋಗಗಳನ್ನು ಸೃಷ್ಟಿಮಾಡುವ ಸಾಮರ್ಥ್ಯ ಹೊಂದಿದೆ ಎಂದರೆ ಅದು ಪತ್ರಿಕೋದ್ಯಮದಲ್ಲಿ ಮಾತ್ರ. ಪತ್ರಕರ್ತರಾದವರು ತಾವು ಕಾರ್ಯನಿರ್ವಹಿಸುವ ನೆಲದ ವಾತಾವರಣವನ್ನು ಅರ್ಥಮಾಡಿಕೊಳ್ಳಬೇಕು. ಅವರು ತಮ್ಮ ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಿದಾಗ ಜನಸಾಮಾನ್ಯರ ಧ್ವನಿಯಾಗಲು ಸಾಧ್ಯ ಎಂದರು.
ಪತ್ರಿಕೋದ್ಯಮ ಕೇವಲ ಭಾಷಣವನ್ನು ಮಾಡುವುದಲ್ಲ, ವೃತ್ತಿಪರತೆಯನ್ನು ಮೆರೆಯಬೇಕಿದೆ. ಪತ್ರಕರ್ತನು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಾಗ ಒತ್ತಡಗಳನ್ನು ನಿಭಾಯಿಸುವ ಕೌಶಲವನ್ನು ಮೈಗೂಡಿಸಿಕೊಳ್ಳಬೇಕಿದೆ. ಸಮಾಜದಲ್ಲಿ ತನ್ನನ್ನು ಗುರುತಿಸಿಕೊಳ್ಳುವ ಧನಾತ್ಮಕ ಅಂಶಗಳನ್ನು ರೂಢಿಸಿಕೊಂಡು, ಜನರ ನಾಡಿಮಿಡಿತವನ್ನು ತಿಳಿದುಕೊಂಡು ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕಿದೆ ಎಂದರು.
ಭಾಷಾಶುದ್ಧತೆ, ಕ್ಷೇತ್ರ ಅಧ್ಯಯನ, ಸಮಯ ಪ್ರಜ್ಞೆ, ಸಮಾಜ ಪ್ರಜ್ಞೆ ಪತ್ರಕರ್ತರಿಗೆ ಅತ್ಯಗತ್ಯ. ಬ್ರೇಕಿಂಗ್ ಪತ್ರಕರ್ತರಾಗುವುದಕ್ಕಿಂತ ಮೇಕಿಂಗ್ ಪತ್ರಕರ್ತರಾಗಬೇಕಾಗಿದೆ. ಕೂಗಾಟ, ಚೀರಾಟಗಳಿಗಿಂತ ಸಂಯಮದ ಸುದ್ದಿನಿರೂಪಕರಾಗಿಯೂ ಸಮಾಜ ಗುರುತಿಸುವಂತಹ ಕೆಲಸ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ.) ವೈ ಎಸ್ ಸಿದ್ದೇಗೌಡ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ಹಾಗಾಗಿ ಗುರಿಯ ಕಡೆ ಲಕ್ಷö್ಯ ಇರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಳಿದವರಿಗಿಂತ ಭಿನ್ನವಾಗಿರಬೇಕು. ಅದು ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯ ಎಂದರು.
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಸಮಾಜದಲ್ಲಿ ಮಾಧ್ಯಮ ಅನ್ಯಾಯದ ವಿರುದ್ದ ಸಿಡಿದೇಳುವಂತದ್ದಾಗಿದೆ. ಮಾಧ್ಯಮಕ್ಕೆ ಸಮಾಜವನ್ನು ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಇದೆ ಎಂದರು.
ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಮಾತನಾಡಿ, ಮಾಧ್ಯಮ ರಂಗ ಇಂದು ಡಿಜಿಟಲ್ ಯುಗದಲ್ಲಿದ್ದು ನೂರಾರು ಉದ್ಯೋಗಾವಕಾಶಗಳಿವೆ. ಆದರೆ ಅದನ್ನು ಪ್ರವೇಶಿಸಬಯಸುವವರಿಗೆ ಕಂಪ್ಯೂಟರ್ ಜ್ಞಾನ, ಸಂದರ್ಶನ ಕಲೆ, ಸಮಯ ಪ್ರಜ್ಞೆ, ಉತ್ತಮ ಸಂವಹನ ಕಲೆ, ದೀರ್ಘ ಪ್ರಯಾಣದ ಸಾಮರ್ಥ್ಯ, ಜವಾಬ್ದಾರಿಯನ್ನು ನಿಭಾಯಿಸುವ ಕೌಶಲ ಇರಬೇಕಾಗುತ್ತದೆ ಎಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ, ಉಪನ್ಯಾಸಕರಾದ ಡಾ. ಪೃಥ್ವೀರಾಜ ಟಿ., ಕೋಕಿಲ ಎಂ. ಎಸ್., ಅನನ್ಯ ಎಂ. ಉಪಸ್ಥಿತರಿದ್ದರು. ಪ್ರವೀಣ್ ಕುಮಾರ್, ಅಭಿಷೇಕ್ ಎಂ. ವಿ. ನಿರೂಪಿಸಿದರು. ಸಹನಾ ಪ್ರಾರ್ಥಿಸಿದರು. ರವಿತೇಜ ಸಿ. ಎಸ್. ಸ್ವಾಗತಿಸಿ, ಚನ್ನಬಸವ ಎಂ. ವಂದಿಸಿದರು.