ಮಂಗಳೂರು :ದ.ಕ. ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಆಶಯದಂತೆ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿಯಾಗಿ, ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಹಿರಿಮೆ, ವೈವಿಧ್ಯತೆ ಇವುಗಳ ಸವಿಯನ್ನು ಜನಮನಕ್ಕೆ ತಲುಪಿಸುವ ಸಲುವಾಗಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ‘ಬಾರಿಸು ಕನ್ನಡ ಡಿಂಡಿಮವ’ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಹಾಡುಗಳನ್ನು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ವಿದ್ಯಾರ್ಥಿಗಳು ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕನ್ನಡ ನಾಡಿನ ವೈಭವಕ್ಕೆ ಮೆರುಗನ್ನು ತಂದುಕೊಟ್ಟರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶ, ಕಾಲೇಜಿನ ಕನ್ನಡ ಸಂಘ ಹಾಗೂ ಕಾಲೇಜಿನ ಸಂಗೀತ ಸಂಘದ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಸಂಯೋಜಿಸಲಾಗಿತ್ತು.
ವಿದ್ಯಾರ್ಥಿ ಚಟುವಟಿಕೆ ಕೋಶದ ಡೀನ್ ಡಾ. ಈಶ್ವರ ಭಟ್ರವರು ತಮ್ಮ ಮಾತಿನ ಮೂಲಕ ಕನ್ನಡ ನಾಡಿನ ಪರಂಪರೆ ಹಾಗೂ ಶ್ರೇಷ್ಠತೆಯ ಬಗ್ಗೆ ಬೆಳಕು ಚೆಲ್ಲಿದರು. ಕೊನೆಯಲ್ಲಿ ಅವರು ಹನ್ನೊಂದು ಸಾಲಿನ ‘ಕನ್ನಡ ಸಂಕಲ್ಪವನ್ನು‘ ಎಲ್ಲರಿಗೂ ಪ್ರತಿಜ್ಞಾವಿಧಿಯಾಗಿ ಬೋಧಿಸಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ, ರೂಬನ್ ಜೇಸನ್ ಮಚಾದೊ ಮಕ್ಕಳ ಗಾಯನಕ್ಕೆ ಹಿನ್ನೆಲೆ ಸಂಗೀತವನ್ನು ಒದಗಿಸಿ ಸಹಕರಿಸಿದರು. ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷೆ, ಡಾ. ಸುಧಾ ಹಾಗೂ ಸಂಗೀತ ಸಂಘದ ಮಾರ್ಗದರ್ಶಿ ಉಪನ್ಯಾಸಕಿ ಅಮೃತ ಉಪಸ್ಥಿತರಿದ್ದರು.