ಬೀರೂರು: ಸರಳ ಯೋಗಗಳ ಆಚರಣೆಯ ಮೂಲಕ ಜೀವನವನ್ನು ಹೆಚ್ಚು ಚೈತನ್ಯದಾಯಕವಾಗಿಸುವ ಹಾಗೂ ಉತ್ತಮ ಚಿಂತನೆಗೆ ಮನಸ್ಸನ್ನು ಹದಗೊಳಿಸುವ ಶಕ್ತಿಹೊಂದಿರುವ ದೇಹ ಹಾಗೂ ಮನಸ್ಸನ್ನು ಸಧೃಡವಾಗಿಡುವ ಯೋಗಜೀವನವನ್ನು ಪ್ರತಿ ಯೊಬ್ಬರು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಇಂದು ಒದಗಿ ಬಂದಿದೆ ಎಂದು ಕನ್ನಡ ಸಂಘದ ಅಧ್ಯಕ್ಷ ಸಿ.ವಿಶ್ವನಾಥಗೌಡ ತಿಳಿಸಿದರು.
ಪಟ್ಟಣದ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಶಾಲೆ ಮತ್ತು ಕ್ರಮುಕ ಆಂಗ್ಲ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ೯ನೇ ಅಂತರಾಷ್ಟ್ರೀಯ ವಿಶ್ವಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗದ ಹಾದಿಯ ಜೀವನ ಶೈಲಿಯಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ, ಸನಾತನ ಋಷಿ ಪರಂಪರೆ ಹಾಕಿಕೊಟ್ಟಿರುವ ಬದುಕಿನ ಶೈಲಿಯನ್ನು ಬಿಟ್ಟಿರುವ ಪರಿಣಾಮ ಇಂದು ವ್ಯಸನಯುಕ್ತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತಿದೆ, ದೇಹ ಹಾಗೂ ಮನಸ್ಸನ್ನು ಸರಿಯಾಗಿ ಹಿಡಿದಿಟ್ಟುಕೊಂಡು ಆರೋಗ್ಯಯುತ ಬದುಕಿಗೆ ಯೋಗ ಪರಿಣಾಮಕಾರಿ ಸಾಧನವಾಗಿದೆ, ಇದನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಮನೆಯನ್ನೆ ಉಚಿತ ಆರೋಗ್ಯಕೇಂದ್ರವನ್ನಾಗಿ ರೂಪಿಸಿಕೊಂಡರೆ ನಮ್ಮ ಯೋಗಪರಂಪರೆಯ ಗೌರವವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಕಾರ್ಯಕ್ರಮ ಪ್ರಧಾನ ಕಾರ್ಯದರ್ಶಿ ಸಿ.ವಿ.ನಾಗೇಂದ್ರ ಶ್ರೇಷ್ಠಿ ಮಾತನಾಡಿ, ಆರೋಗ್ಯಪೂರ್ಣ ಜೀವನರೂಪಿಸಿಕೊಳ್ಳಲು ದಿನನಿತ್ಯ ಕೆಲ ಸಮಯವನ್ನಾದರೂ ಯೋಗಾಭ್ಯಾಸಕ್ಕೆ ಮೀಸಲಿಡಿ ಎಂದರು.
ನಮ್ಮ ಋಷಿಮುನಿಗಳು ತಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಆರೋಗ್ಯಪೂರ್ಣ ಬದುಕಿಗೆ ಬೇಕಾದ ಅಗತ್ಯವಾದ ಯೋಗವಿದ್ಯೆ ಕೊಡುಗೆಯನ್ನು ನೀಡಿದ್ದಾರೆ. ವಿಶ್ವದ ೧೮೦ಕ್ಕೂ ಹೆಚ್ಚಿನ ರಾಷ್ಟ್ರಗಳು ಇಂದು ಯೋಗದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯ ಸಂಸ್ಕೃತಿ-ಜೀವನ ಪದ್ದತಿಗೆ ನೀಡಿದ ಮಾನ್ಯತೆ ಎಂಬುದನ್ನು ನೆನಪಿಸಿದರು.
ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿಯನ್ನು ಅನುಸರಿಸುವತ್ತ ಹೆಜ್ಜೆಯಿಟ್ಟರೆ ನಾವೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ವಿಪರ್ಯಾಸ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಯೋಗ ಪಟು ಗಿನ್ನಿಸ್ ದಾಖಲೆ ಗಳಿಸಿದ ಬೀರೂರಿನ ರಾಜಾಜಿ ನಗರ ನಿವಾಸಿ ಕುಮಾರಿ ಸಿತಾರ ಅವರನ್ನು ಕನ್ನಡ ಸಂಘದ ವತಿಯಿಂದ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಕುಮಾರಿ ಸಿತಾರ ಮಾತನಾಡಿ, ಗುಣಪಡಿಸಲಾರದ ರೋಗಕ್ಕೆ ಪರಿಹಾರ ನೀಡುವ ಯೋಗವಿದ್ಯೆ ಇಂದು ವಿಶ್ವಮಾನ್ಯತೆ ಪಡೆದಿದೆ, ಇಡೀ ವಿಶ್ವದ ೧೭೭ ರಾಷ್ಟ್ರಗಳಲ್ಲಿ ಯೋಗವನ್ನು ಅಳವಡಿಸಿಕೊಂಡಿದ್ದಾರೆ, ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಹೆಮ್ಮೆ ನಮ್ಮ ದೇಶಕ್ಕೆ ಸಲ್ಲುತ್ತದೆ, ಕೋಟಿ ಹಣ ನೀಡಿದರೂ ಸಹ ಬಾರದ ಸಂತೋಷ ಮತ್ತು ಆರೋಗ್ಯ ಕೇವಲ ಯೋಗದಿಂದ ದೊರೆಯಲು ಸಾದ್ಯವಾಗಲಿದೆ. ಪ್ರಾಚೀನ ಕಾಲದ ಋಷಿಮುನಿಗಳು ಯೋಗಸಾಧನೆಯಿಂದ ನೂರಾರು ಕಾಲ ಬಾಳಿದಂತಹ ನಿದರ್ಶನಗಳಿವೆ. ನಾವು ನಿತ್ಯವೂ ಅಲ್ಪಕಾಲದ ಯೋಗದಿಂದ ದೀರ್ಘಕಾಲದ ವ್ಯಾದಿಗಳಿಗೂ ಸಹ ಸರಳ ಉಪಚಾರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು. ಮಕ್ಕಳು ಸಾರ್ವಜನಿಕರು ಇದರ ಪ್ರಯೋಜನ ಪಡೆದು ಆರೋಗ್ಯಯುತ ಬದುಕನ್ನು ರೂಪಿಸಿಕೊಳ್ಳಿ ಎಂದರು.