ಮೈಸೂರು: ಮೈಸೂರು ಭಾಗದವರು ಹಿಮೋಫಿಲಿಯಾ ಚಿಕಿತ್ಸೆಗೆ ಬೆಂಗಳೂರನ್ನು ಅವಲಂಬಿಸಿರುವುದರಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ ಶೀಘ್ರವೇ ಹಿಮೋಫಿಲಿಯಾ ಪರೀಕ್ಷೆ ಮತ್ತು ಚಿಕಿತ್ಸಾ ಕೋಶ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ.
ಮೈಸೂರು ಹಿಮೋಫಿಲಿಯಾ ಸೊಸೈಟಿಯಿಂದ ಇಲ್ಲಿನ ಜೆ.ಕೆ ಮೈದಾನದ ಮೈಸೂರು ವೈದ್ಯಕೀಯ ಕಾಲೇಜು ರಜತ ಮಹೋತ್ಸವ ಸಭಾಂಗಣದಲ್ಲಿ ನಡೆದ ಹಿಮೋಫಿಲಿಯಾ ಪುನರ್ವಸತಿ ಕುರಿತು ಕುಸುಮಾ ಆರೈಕೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಹಿಮೋಫಿಲಿಯಾ ಪರೀಕ್ಷೆ ಮತ್ತು ಚಿಕಿತ್ಸಾ ಕೋಶ ಪ್ರಾರಂಭಿಸಲು ಮೂಲಧನವಾಗಿ 25 ಲಕ್ಷವನ್ನು ಡಿಎಂಎಫ್ ಮೂಲಕ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಮಾತನಾಡುವುದಾಗಿ ಹೇಳಿದರು.
ಕೋಶದಲ್ಲಿ ಕೇವಲ ಹಿಮೋಫಿಲಿಯಾ ಮಾತ್ರವಲ್ಲದೇ ಇತರೆ ರಕ್ತ ಸಂಬಂಧಿತ ರೋಗಗಳ ನಿರ್ವಹಣಾ ವ್ಯವಸ್ಥೆ ಮಾಡಲಾಗುವುದು. ಮೈಸೂರು ಭಾಗದಲ್ಲಿ ಈ ಚಿಕಿತ್ಸೆಯ ಅಗತ್ಯವಿದ್ದು, ಬೆಂಗಳೂರನ್ನು ಅವಲಂಬಿಸುತ್ತಿರುವ ರೋಗಿಗಳಿಗೆ ಸಹಕಾರವಾಗಲಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹಿಮೋಫಿಲಿಯಾ ಚಿಕಿತ್ಸಾ ಕ್ರಮದಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಬಗೆಯ ಔಷಧಿಗಳು ಲಭ್ಯವಿವೆ. ಸಾರ್ವಜನಿಕರು ಇದರ ಕುರಿತು ಹೆಚ್ಚು ಆತಂಕಕ್ಕೆ ಒಳಗಾಗಬಾರದು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆಗ ಯಾವ ಸಮಸ್ಯೆಯೂ ಆಗುವುದಿಲ್ಲ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಪುಷ್ಪಲತಾ ಮಾತನಾಡಿ, ಈ ವರ್ಷ 15 ಕಡೆ ಕಾರ್ಯಾಗಾರ ನಡೆಸಲು ಯೋಜಿಸಿದ್ದೇವೆ. ಹಿಮೋಫಿಲಿಯಾ ವಿಷಯದಲ್ಲಿ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ನಿರ್ವಹಣೆ ನಮ್ಮ ಗುರಿ. ಪುನರ್ವಸತಿ ಮತ್ತು ಜಾಗೃತಿ ಪ್ರಕ್ರಿಯೆ ನಿರಂತರವಾಗಿರುವುದೂ ಬಹಳ ಮುಖ್ಯ ಎಂದು ತಿಳಿಸಿದರು.
ಇದೇ ವೇಳೆ ನಡೆದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ವೈದ್ಯರಾದ ಸೆಸಿಲ್ ರಾಜ್, ಸುರೇಶ್ ಹಂಗವಾಡಿ, ಕೆ.ಶರತ್ ರಾವ್, ಅರುಣ್ ಭಾರದ್ವಾಜ್, ದೀಪಾ ಭಟ್ ತರಂಗಿಣಿ ನಾರಾಯಣ ಭಾಗವಹಿಸಿ ಕಾಯಿಲೆ, ನೂತನ ತಂತ್ರಜ್ಞಾನ, ಪುನರ್ವಸತಿ ಬಗ್ಗೆ ವೈದ್ಯರು ಹಾಗೂ ರೋಗಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ರಕ್ತ ಕಣ ಅಧಿಕಾರಿ ಡಾ.ಶಕೀಲಾ, ಸೊಸೈಟಿ ಅಧ್ಯಕ್ಷ ಡಾ.ಎಸ್.ಕೆ.ಮಿತ್ತಲ್, ಡಾ.ಎಂ.ಎಸ್.ಶೋಭಾ, ಡಾ.ನಯಾಜ್ ಪಾಷಾ, ಕೆ.ಆರ್.ಆಸ್ಪತ್ರೆ ರಕ್ತ ನಿಧಿ ವಿಭಾಗದ ಮುಖ್ಯಸ್ಥೆ ಡಾ.ಕುಸುಮಾ ಉಪಸ್ಥಿತರಿದ್ದರು.