ಬಂಟ್ವಾಳ: ಪರಿಚಿತವಾದ ಹಾಗೂ ಮನೆಯಲ್ಲಿ ಬೆಳೆಯುವಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ದೇಹದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದ್ದಾರೆ.
ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆದ ವಿವಿಧ ಹಣ್ಣುಗಳ ಪರಿಚಯ ಹಾಗೂ ಪೌಷ್ಠಿಕಾಂಶಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಹಕ್ಕೆ ಬೇಕಾದಂತಹ ಹೆಚ್ಚಿನ ಪ್ರೋಟೀನ್ ಮತ್ತು ವಿಟಮಿನ್ಗಳು ಹಣ್ಣಿನಲ್ಲಿ ಅಡಕವಾಗಿರುತ್ತದೆ ಎಂದ ಅವರು ವಿವಿಧ ಹಣ್ಣುಗಳನ್ನು ಹಾಗೂ ಬಾಳೆಹಣ್ಣಿನ ವಿಧಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಹಣ್ಣುಗಳನ್ನು ಮಕ್ಕಳಿಗೆ ಸವಿಯಲು ನೀಡಲಾಯಿತು. ನಂತರ ಎಲ್ಲಾ ಹಣ್ಣುಗಳನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆ ನಡೆಯಿತು. ಹಾಗೆಯೇ ೨ನೇ ತರಗತಿಯ ಮಕ್ಕಳು ಮಾಡಿದ ವಿವಿಧ ಮನೆಯ ಮಾದರಿಗಳ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ರಾಷ್ಟ್ರಸೇವಿಕಾ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ|| ಕಮಲಾ ಪ್ರಭಾಕರ್ ಭಟ್ ಮತ್ತು ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ೨ನೇ ತರಗತಿಯ ವಿದ್ಯಾರ್ಥಿಯಾದ ಹಾರ್ಧಿಕ್ ಮೋಹನ್ ಸ್ವಾಗತಿಸಿ, ಅಧ್ಯಾಪಕರಾದ ರೂಪಕಲಾ ಎಂ ವಂದಿಸಿದರು.