ಬೇಸಿಗೆ ಈಗಾಗಲೇ ಪ್ರಾರಂಭವಾಗಿದ್ದು, ಜನರು ತಮ್ಮ ದೇಹ ಹಾಗೂ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದಾರೆ. ಇಂಥಹ ಸಮಯದಲ್ಲಿ ನಮ್ಮ ದೇಹಕ್ಕೆ ಯಾವ ರೀತಿಯ ಆಹಾರಗಳು ಉತ್ತಮ ಹಾಗೂ ಆ ಆಹಾರಗಳನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದು ಬಹಳ ಮುಖ್ಯವಾಗಿರುತ್ತದೆ ಎಂದು ಡಾ. ಅನುರಾಧಾ ಹೇಳಿದರು.
ಬೇಸಿಗೆ ಕಾಲದಲ್ಲಿ ನಮ್ಮ ಶರೀರವು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ಹೊರ ಹೋದಷ್ಟು ಪ್ರಮಾಣದ ನೀರನ್ನು ಮತ್ತೆ ನಮ್ಮ ಶರೀರಕ್ಕೆ ಸೇರಿಸಿಕೊಳ್ಳಲು ಕೆಲವು ರೀತಿಯ ಆಹಾರ ಕ್ರಮಗಳನ್ನು ಬಳಸಿಕೊಳ್ಳಬೇಕು.
ಈ ಸಮಯದಲ್ಲಿ ನಮ್ಮ ಶರೀರದ ಜೀರ್ಣಾಂಗ ವ್ಯವಸ್ಥೆಯು ಬಹಳ ದುರ್ಬಲವಾಗಿರುತ್ತದೆ. ಇದರಿಂದ ಆಹಾರದ ಪಚನ ಕ್ರಿಯೆಗೆ ಅಡ್ಡಿಯಾಗುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರ ಮಿತವಾಗಿದ್ದು, ನೀರಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು ಉತ್ತಮ.
ಬೇಸಿಗೆಯಲ್ಲಿ ಬರಿ ನೀರು ಕುಡಿಯುವ ಬದಲು ಆ ನೀರಿಗೆ ಲಾವಂಚದ ಬೇರು, ಜೀರಿಗೆ ಅಥವಾ ಕೊತ್ತಂಬರಿ ಬೀಜಗಳನ್ನು ಸೇರಿಸಿ ಕುದಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ದೇಹಕ್ಕೆ ತಂಪು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಾಯಾರಿಕೆಯಾಗುವುದನ್ನು ತಡೆಗಟ್ಟಬಹುದು. ಇದು ಎಲ್ಲರಿಗೂ ಸರಿ ಹೊಂದುವಂಥಹುದಲ್ಲ. ಬಹಳಷ್ಟು ಬಾರಿ ದೇಹದ ವಿಧಗಳನ್ನು ನೋಡಿಕೊಂಡು ಶರೀರಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಾಗೂ ಆಹಾರವನ್ನು ಒದಗಿಸುವುದು ಒಳ್ಳೆಯದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ ಹೇಳಿದರು.
ಆಹಾರ ಪದಾರ್ಥಗಳಲ್ಲಿ ಉಪ್ಪು, ಹುಳಿ ಖಾರದ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದನ್ನು ಬಹಳಷ್ಟು ಕಡಿಮೆ ಮಾಡಬೇಕು. ಹುಳಿಯಾಗಿರುವ ಮಜ್ಜಿಗೆಗೆ ಶುಂಠಿ ಮೆಣಸು ಸೇರಿಸಿ ಕುಡಿಯುವ ಬದಲು ಸ್ವಲ್ಪ ಸಿಹಿಯಾದ ಮಜ್ಜಿಗೆಯನ್ನು ಬಳಸಬಹುದು.
ಬೇಸಿಗೆಯ ಆಹಾರ ಪಥ್ಯದಲ್ಲಿ ಮಧುರಯುಕ್ತ ಆಹಾರಗಳು ಹಣ್ಣಿನ ರಸಗಳು, ಹೆಚ್ಚು ನೀರಿರುವ ಹಾಗೂ ಸ್ವಲ್ಪ ಸಿಹಿಯಾಗಿರುವ ಆಹಾರ ಸೇವಿಸುವುದು ದೇಹದ ಆರೋಗ್ಯಕ್ಕೆ ಬಹಳ ಉತ್ತಮ.
ಮನುಷ್ಯನೂ ಸಹ ಪ್ರಕೃತಿಯ ಒಂದು ಭಾಗ. ಪ್ರಕೃತಿಯಲ್ಲಿ ಯಾವರೀತಿಯ ಬದಲಾವಣೆಗಳು ನಡೆಯುತ್ತವೆಯೋ ಮನುಷ್ಯನಲ್ಲೂ ಸಹ ಹವಾಮಾನಕ್ಕೆ ತಕ್ಕಂತೆ ಬದಲಾವಣೆಯಾಗುತ್ತೆ. ಬೇಸಿಗೆಯಲ್ಲಿ ಪ್ರಕೃತಿಗೂ ನೀರುಣಿಸುವಂತೆ ಮನುಷ್ಯನ ದೇಹಕ್ಕೂ ಸಹ ಹೆಚ್ಚು ನೀರಿರುವ ಆಹಾರವನ್ನು ಬಳಸಬೇಕು.
ದೇಹದ ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವಾಗಿರುತ್ತದೆಯೋ ಅದೇ ರೀತಿ ವ್ಯಾಯಾಮ ಕೂಡ ಬಹಳ ಮುಖ್ಯ. ಬೇಸಿಗೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ದೇಹವನ್ನು ದಂಡಿಸುವುದು ಒಳ್ಳೆಯದು. ಇಲ್ಲವಾದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ಸುಸ್ತು ಉಂಟಾಗುತ್ತದೆ. ಬಿಸಿಲಿನ ಝಳಕ್ಕೆ ಶರೀರದಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಹೊರ ಹೋಗುವುದರಿಂದ ಹೆಚ್ಚಿನ ವ್ಯಾಯಾಮವೂ ಸಹ ದೇಹದಲ್ಲಿನ ಶಕ್ತಿಯನ್ನ ಕಡಿಮೆ ಮಾಡುವುದರಿಂದ ದಿನಕ್ಕೆ 5ರಿಂದ 10ನಿಮಿಷಗಳ ನಡಿಗೆ ಉತ್ತಮವಾಗಿರುತ್ತದೆ.
ಬೇಸಿಗೆ ಕಾಲದಲ್ಲಿ ಹಣ್ಣಿನ ರಸಗಳು ದೇಹಕ್ಕೆ ಉತ್ತಮ ನೀರಿನ ಅಂಶಗಳನ್ನು ಒದಗಿಸುತ್ತದೆ. ದಾಳಿಂಬೆ ಹಣ್ಣಿನ ಸಾದಾ ಜ್ಯೂಸ್, ಅಥವಾ ಒಣ ದ್ರಾಕ್ಷಿ ಹಾಗೂ ಖರ್ಜೂರವನ್ನು ನೀರಿನಲ್ಲಿ ನೆನೆಸಿ, ಕೈಯಲ್ಲಿ ಹಿಸುಕಿ ಅದಿಕ್ಕೆ ಬೆಲ್ಲ ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ ಕುಡಿಯುವುದರಿಂದ ಸುಸ್ತು ಹಾಗೂ ಹೆಚ್ಚಿನ ಬಾಯಾರಿಕೆಯನ್ನು ತಡೆಯಬಹುದು. ಒಣ ಹಣ್ಣುಗಳಾದ ದ್ರಾಕ್ಷಿ, ಖರ್ಜೂರ ಬಾದಾಮಿಗಳನ್ನು ದೇಹಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು.
ಮನೆಯಿಂದ ಹೊರಹೋಗುವಂತಹ ಸಂದರ್ಭದಲ್ಲಿ ಸೂರ್ಯನಿಗೆ ನಮ್ಮ ದೇಹ ಹೆಚ್ಚು ಕಾಣದಂತೆ ದೇಹವನ್ನು ಕೊಡೆ ಅಥವಾ ವಸ್ತ್ರದಿಂದ ಮುಚ್ಚಿಕೊಳ್ಳುವುದರ ಜೊತೆಗೆ ಸನ್ಸ್ಕ್ರೀನನ್ನು ಬಳಸಿಕೊಳ್ಳುವುದು ಉತ್ತಮ.
ಬೇಸಿಗೆಯಲ್ಲಿ ನಮ್ಮ ಶರೀರವು ಸಾಮನ್ಯವಾಗಿರುವುದಕ್ಕಿಂತಲೂ ಸ್ವಲ್ಪ ಪ್ರಮಾಣದಲ್ಲಿ ಕ್ಷೀಣವಾಗಿರುತ್ತದೆ. ಹೀಗಾಗಿ ಹೆಚ್ಚು ನೀರುಯುಕ್ತ ಆಹಾರಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ.