ಮಂಗಳೂರು: ಇಲ್ಲಿನ ಯೆನಪೋಯ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ `ಯೆನಪೋಯ ತಂತ್ರಜ್ಞಾನ ಪರಿಪೋಷಣಾ ಕೇಂದ್ರ’ (ಇನ್ಕ್ಯುಬೇಟರ್)ವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸಾಧನಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಗುರಿಯೊಂದಿಗೆ ಈ ಪರಿಪೋಷಣಾ ಕೇಂದ್ರವನ್ನು ಸ್ಥಾಪಿಸಿರುವುದರಿಂದ ಸ್ಥಳೀಯರಿಗೆ ಆರೋಗ್ಯ ಸೇವೆಗಳು ಅಗ್ಗವಾಗಿ ಸಿಗಲಿವೆ. ಜತೆಗೆ ಇದು ಆತ್ಮನಿರ್ಭರ ಭಾರತ ನಿರ್ಮಾಣದ ಕಡೆಗೆ ದಿಡ್ಡ ಹೆಜ್ಜೆಯಾಗಿದೆ’ ಎಂದರು.
ಈ ಪರಿಪೋಷಣಾ ಕೇಂದ್ರಕ್ಕೆ ಕೇಂದ್ರ ಸರಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಮನ್ನಣೆ ದೊರೆತಿದ್ದು, ಸಂಶೋಧನೆಗಳನ್ನು ಸಮಾಜಕ್ಕೆ ಕೊಂಡೊಯ್ಯುವ ದೇಶದ ಮುಂಚೂಣಿ ಕೇಂದ್ರಗಳಲ್ಲಿ ಇದೂ ಒಂದಾಗಿದೆ. ಇದು ಮುಂದಿನ ಕೆಲಸಗಳನ್ನು ರಾಷ್ಟ್ರೀಯ ಜೈವಿಕ ಔಷಧಗಳ ಮಿಷನ್ ಅಡಿಯಲ್ಲಿ ಮುಂದುವರಿಸಲಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ `ಸ್ಪರ್ಶ್’ ಯೋಜನೆಯಡಿಯೂ ಈ ಇನ್ಕ್ಯುಬೇಟರ್ ಕೇಂದ್ರಕ್ಕೆ ಮನ್ನಣೆ ಕೊಡಲಾಗಿದೆ. ಇದರಿಂದಾಗಿ ವಿಶೇಷವಾಗಿ ತಾಯಂದಿರು, ಮಕ್ಕಳ ಆರೋಗ್ಯ, ವೃದ್ಧಾಪ್ಯ ಮತ್ತು ಸಾಮಾನ್ಯ ಆರೋಗ್ಯ ಕ್ಷೇತ್ರಗಳಲ್ಲಿ ಜನರ ಕೈಗೆ ಎಟುಕುವಂತಹ ರೀತಿಯಲ್ಲಿ ವೈದ್ಯಕೀಯ ಸಾಧನ-ಸಲಕರಣೆಗಳು ಲಭ್ಯವಾಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಪರಿಪೋಷಣಾ ಕೇಂದ್ರದಲ್ಲಿ ಲಸಿಕೆಗಳು ಮತ್ತು ಔಷಧಿಗಳೂ ಸೇರಿದಂತೆ ವೈದ್ಯಕೀಯ ಸಾಧನಗಳ ಉತ್ಪಾದನೆಗೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳಿವೆ. ಇವುಗಳ ಪೈಕಿ ಮೆಟಲ್ಸ್, ಥರ್ಮೋಪ್ಲಾಸ್ಟಿಕ್ಸ್, ಪಾಲಿಮರ್ಸ್ ಮತ್ತು ಬಯೋಮೆಟೀರಿಯಲ್ಸ್ ಮುಂತಾದವುಗಳ ಉಪಯೋಗಕ್ಕೆ ಬೇಕಾದ 3ಡಿ ಪ್ರಿಂಟರ್ಸ್ ತರಹದ ಅನುಕೂಲಗಳಿವೆ. ಇದರಿಂದ ಸ್ಥಳೀಯ ಸಂಶೋಧಕರು ಮತ್ತು ನವೋದ್ಯಮಗಳಿಗೆ ಭಾರೀ ಪ್ರಯೋಜನವಾಗಲಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಯ ಕುಲಾಧಿಪತಿ ಯೆನಪೋಯ ಅಬ್ದುಲ್ಲಾ ಕುನ್ಹಿ, ಮಹಮದ್ ಫರ್ಹಾದ್ ಯೆನಪೋಯ, ಮೊಹಿದೀನ್ ಖುರ್ಷೀದ್, ಡಾ.ವಿಜಯಕುಮಾರ್ ಮತ್ತು ಅಸೀಂ ಸೈಯದ್ ಸಿರಾಜ್ ಉಪಸ್ಥಿತರಿದ್ದರು.