ಕೇವಲ ಅನ್ನ ಸೇರಿದಂತೆ ಆಹಾರ ಸೇವಿಸುವುದರಿಂದ ಆರೋಗ್ಯವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಆರೋಗ್ಯವಾಗಿರಲು ಹಣ್ಣುಹಂಪಲುಗಳ ಸೇವನೆಯೂ ಅಗತ್ಯವಾಗಿದೆ.ಕೆಲವು ಹಣ್ಣುಗಳು ಸರ್ವ ಋತುಗಳಾಗಿದ್ದು ಯಾವಾಗ ಬೇಕಾದರು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮತ್ತೆ ಕೆಲವು ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ದೊರೆಯುತ್ತವೆ. ಹಲಸು, ಮಾವು ಮೊದಲಾದವು ವರ್ಷಕ್ಕೊಮ್ಮೆ ಮಾತ್ರ ಸೇವಿಸಲು ಸಾಧ್ಯ. ಆದರೆ ಹಣ್ಣುಗಳ ಪೈಕಿ ಸಪೋಟ ಎಲ್ಲ ಕಾಲಗಳಲ್ಲಿಯೂ ನಮಗೆ ಸಿಗುತ್ತದೆ. ಅಷ್ಟೇ ಅಲ್ಲ ಈ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಪೋಷಕ ಶಕ್ತಿಯೂ ದೊರೆಯುತ್ತದೆ. ಊಟವಾದ ಬಳಿಕ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಸಪೋಟ ಸೇವಿಸಿದರೆ ಪೋಷಕಾಂಶ, ವಿಟಮಿನ್, ನಾರಿನಂಶ ಎಲ್ಲವೂ ದೊರೆಯುತ್ತದೆ. ನಮಗೆ ತಿಳಿಯದ ಹಲವು ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗುತ್ತದೆ.
ಕೆಲವು ಹಣ್ಣುಗಳು ಬಾಯಿಗೆ ರುಚಿಯಾಗಿದ್ದರೂ ದೇಹಕ್ಕೆ ಹಿಡಿಸುವುದಿಲ್ಲ. ಆದರೆ ಸಪೋಟ ಹಾಗಲ್ಲ ಇದು ಬಾಯಿಗೆ ರುಚಿಯಾಗಿ ಆರೋಗ್ಯಕ್ಕೆ ಪೋಷಕವಾಗಿಯೂ ಕೆಲಸ ಮಾಡುತ್ತದೆ. ಹಣ್ಣುಗಳು ನಮ್ಮಲ್ಲಿ ರೋಗ ಬಾರದಂತೆ ತಡೆಯುತ್ತವೆ. ಆದರೆ ನಾವು ಯಾವತ್ತೋ ಒಮ್ಮೆ ಸೇವಿಸಿ ಸುಮ್ಮನಾಗುತ್ತೇವೆ ಊಟದ ಬಳಿಕ ಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಸಾಮಾನ್ಯವಾಗಿ ಹಣ್ಣುಗಳಲ್ಲಿ ಆರೋಗ್ಯಕಾರಿ ವಿಟಮಿನ್ ಹಾಗೂ ಪೋಷಕಾಂಶಗಳು ಇರುತ್ತವೆ. ಕೆಲವು ಹಣ್ಣುಗಳಲ್ಲಿ ಕೆಲವು ಅಂಶಗಳು ಯಥೇಚ್ಛವಾಗಿರುತ್ತವೆ. ಮಾವು, ಹಲಸು ಹಾಗೂ ಬಾಳೆಯಲ್ಲಿರುವಂತಹ ಪೋಷಕಾಂಶಗಳೆಲ್ಲ ಸಪೋಟ ಹಣ್ಣಿನಲ್ಲಿದೆ. ನೈಸರ್ಗಿಕ ಪ್ರಕ್ಟೋಸ್ ಸಕ್ಕರೆ ಹೊಂದಿದ್ದು ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿ ನ್ಯೂಟ್ರಿನ್ ಹಾಗೂ ಮಿನರಲ್ ಹೊಂದಿದೆ. ಕಬ್ಬಿಣ. ತಾಮ್ರ, ಫೈಬರ್ ಇದರಲ್ಲಿದೆ. ವಿಟಮಿನ್ ಎ ಅನ್ನಾಂಗ ಹೆಚ್ಚಾಗಿದ್ದು, ಶ್ವಾಸಕೋಶ ಬಾಯಿ ಕ್ಯಾನ್ಸರ್ ನಿಂದ ಕಾಪಾಡುತ್ತದೆ.
ಸೂಕ್ಷ್ಮಕ್ರಿಮಿಗಳು, ಆಂಟಿವೈರಸ್ ಪರಾವಲಂಬಿಯಾಗಿದ್ದು ಉರಿಯೂತವನ್ನು ನಿವಾರಿಸುವ ಶಕ್ತಿ ಹೊಂದಿದೆ. ವಿಟಮಿನ್ ಎ ವಿಫುಲವಾಗಿರುವುದರಿಂದ ಕಣ್ಣಿಗೆ ಒಳ್ಳೆಯದು. ದೀರ್ಘಕಾಲ ಕಣ್ಣಿನ ದೃಷ್ಟಿ ಚೆನ್ನಾಗಿರಬೇಕೆಂದರೆ ಸಪೋಟ ತಿನ್ನಬೇಕು. ಗ್ಲೂಕೋಸ್ ಇರುವುದರಿಂದ ತಕ್ಷಣ ಶಕ್ತಿ ದೊರೆಯುತ್ತದೆ. ಅನ್ನನಾಳ, ಕರುಳು, ಜಠರದ ಉರಿಯೂತಗಳನ್ನು ತಡೆಗಟ್ಟಿ ಜೀರ್ಣಾಂಗ ಪರಿಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಊತ, ನೋವುಗಳನ್ನು ಕಡಿಮೆ ಮಾಡುವ ಶಕ್ತಿ ಇದರಲ್ಲಿದೆ. ಸಪೋಟದ ಎ ಮತ್ತು ಬಿ ವಿಟಮಿನ್ ದೇಹದೊಳಗಿನ ಲೋಳೆಯ ಒಳಪದರ ಹಾಗೂ ಚರ್ಮದ ಆರೋಗ್ಯ ಕಾಪಾಡುತ್ತದೆ, ಸಪೋಟದ ನಾರು ಹಾಗೂ ಪೋಷಕಾಂಶಗಳು ಕ್ಯಾನ್ಸರ್ ವಿರುದ್ದ ರಕ್ಷಣೆ ಒದಗಿಸುತ್ತದೆ.
ಸಪೋಟದಲ್ಲಿ ಅಧಿಕ ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಅಂಶಗಳಿದ್ದು ಮೂಳೆಗಳ ಸಾಮರ್ಥ್ಯ ಹೆಚ್ಚಿಸುತ್ತದೆ. ಅಧಿಕ ನಾರಿನಂಶ ಇರುವುದರಿಂದ ಮಲಬದ್ದತೆಯನ್ನು ನಿವಾರಿಸುತ್ತದೆ. ಪೊಟ್ಯಾಸಿಯಂ, ಕಬ್ಬಿಣ, ಫೋಲೇಟ್, ನಿಯಾಸಿನ್, ಪ್ಯಾಂಟೋಧೆನಿಕ್ ಆಮ್ಲಗಳು ಜೀರ್ಣಾಂಗ ವ್ಯವಸ್ಥೆಯ ಕಾರ್ಯವನ್ನು ಸುಗಮಗೊಳಿಸುತ್ತದೆ, ಇದರಲ್ಲಿರುವ ಪ್ರಬಲ ನಿದ್ರಾಜನಕ(ಸೆಡೆಟಿವ್) ಅಂಶವು ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ರಾಹೀನತೆ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರು ಹೆಚ್ಚು ಸಪೋಟ ತಿಂದರೆ ಒಳ್ಳೆಯದು, ಶೀತ ಕೆಮ್ಮು ನಿವಾರಣೆಗೂ ಸಪೋಟ ಪರಿಣಾಮಕಾರಿ. ಸಪೋಟದಲ್ಲಿರುವ ವಿಟಮಿನ್ ಇ ಚರ್ಮ ಪೋಷಣೆಗೆ ನೆರವಾಗುತ್ತದೆ.