ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಂಡರೆ ಮಾತ್ರ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ನಮ್ಮ ನಡೆ ನುಡಿ, ಕೆಲಸ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಂಡರೆ ಯಶಸ್ಸಿನ ಬದುಕು ಸಾಧ್ಯವಾಗುತ್ತದೆ.
ಹೇಗೇಗೋ ಬದುಕುವುದರಿಂದ ಏನು ಪ್ರಯೋಜನವಿಲ್ಲ. ಅಷ್ಟೇ ಅಲ್ಲ ಇತರರ ಮುಂದೆ ಅಪಹಾಸ್ಯಕ್ಕೂ ತುತ್ತಾಗಬಹುದು. ನಾವು ನಮ್ಮ ಕೆಲಸ, ವಯಸ್ಸು, ಹೀಗೆ ಎಲ್ಲದಕ್ಕೆ ಹೊಂದಿಕೆಯಾಗುವಂತಹ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಶಿಸ್ತು ನಮ್ಮ ಬದುಕಿಗೆ ಮುಖ್ಯವಾಗಿದೆ ನಾವು ಶಿಸ್ತನ್ನು ರೂಢಿಸಿಕೊಳ್ಳದೆ ಹೋದರೆ ನಮಗೂ ಪ್ರಾಣಿಗಳಿಗೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಜೊತೆಗೆ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮೇಲ್ನೋಟಕ್ಕೆ ಕಾಣುವ ನಮ್ಮ ನಿತ್ಯದ ಬದುಕಿನಲ್ಲಿ ದೇಹಕ್ಕೆ ಹೇಗೆ ಶಿಸ್ತನ್ನು ಅಳವಡಿಸಿಕೊಳ್ಳುತ್ತೇವೆಯೋ ಹಾಗೆಯೇ ಮನಸ್ಸಿಗೂ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಾನಸಿಕ ನೆಮ್ಮದಿ ಮತ್ತು ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ. ನಮ್ಮ ಮನಸ್ಸು ಎಲ್ಲೆಂದರಲ್ಲಿ ಓಡುವ ಹುಚ್ಚು ಕುದುರೆ ಅದಕ್ಕೊಂದು ಶಿಸ್ತುಬದ್ಧ ಅಂಕುಶ ಹಾಕದಿದ್ದರೆ ಪರಿಣಾಮ ಆರೋಗ್ಯದ ಮೇಲೆ ಬೀರುತ್ತದೆ.
ಹಾಗಾದರೆ ಮನಸ್ಸಿಗೆ ಶಿಸ್ತು ಅಳವಡಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳಿಗೆ ಎರಡು ರೀತಿಯ ಆಂತರಿಕ ಶಿಸ್ತುಗಳನ್ನು ರೂಢಿಸಿಕೊಳ್ಳಬಹುದು ಎಂಬುದು ಅಧ್ಯಾತ್ಮಿಕ ಚಿಂತಕರ ಅಭಿಪ್ರಾಯ. ಮೊದಲನೆಯದಾಗಿ ಸ್ಥಾಯಿಯಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು. ಎರಡನೆಯದಾಗಿ ಅತ್ಯಂತ ಪ್ರಬಲವಾದ ನಿರೋಧಕಗಳನ್ನು ಅಣಿಗೊಳಿಸುವುದು.
ಈ ಎರಡು ಪ್ರಕಾರದ ಶಿಸ್ತುಗಳಲ್ಲಿ ಮೊದಲನೆಯದು ಮನಸ್ಸಿಗೆ ಆರೋಗ್ಯ ಪೂರ್ಣವಾದ ನಿರ್ದೇಶನವನ್ನು ಒದಗಿಸಿದರೆ, ಎರಡನೆಯದು ತುರ್ತು ಪರಿಸ್ಥಿತಿಗಳಲ್ಲಿ ಮನಸ್ಸನ್ನು ದಿಕ್ಕೆಡದಂತೆ ಕಾಪಾಡುತ್ತದೆ. ಈ ಎರಡು ಅತ್ಯುತ್ತಮವಾಗಿದ್ದು, ಮೊದಲನೆಯ ಪ್ರಕಾರದ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ, ಎರಡನೆಯದನ್ನು ರೂಢಿಸಿಕೊಳ್ಳಲು ಸಾಧ್ಯವಾಗದು. ಮೊದಲನೆಯದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದಿದ್ದರೆ ಎರಡನೆಯದಕ್ಕೆ ಅಗತ್ಯವಾದ ಶಕ್ತಿ ಸಾಮಥ್ರ್ಯ ದೊರೆಯಲಾರದು.
ಮನಸಿಗೆ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಮನಸ್ಸನ್ನು ಹತೋಟಿಗೆ ತರಬೇಕಾದರೆ ಸ್ಥಾಯಿಯಾದ ಮತ್ತು ಮೂಲಭೂತವಾದ ಕೆಲವು ವಿಧಾನಗಳನ್ನು ರೂಪಿಸಿಕೊಳ್ಳುವಲ್ಲಿ ನಮ್ಮ ಬದುಕನ್ನು ಒಂದು ರಚನಾತ್ಮಕ ಚಿಂತನೆಯ ಚೌಕಟ್ಟಿನೊಳಕ್ಕೆ ತಂದುಕೊಳ್ಳಬೇಕು. ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪೂರ್ವಾಪರ ವಿವೇಚನೆಯಿಂದ ಕೂಡಿದ ಒಂದು ವ್ಯವಸ್ಥೆಯಿರುವಂತೆ ನೋಡಿಕೊಳ್ಳಬೇಕು.
ಮನಸ್ಸಿನ ನಿಯಂತ್ರಣ ಇಲ್ಲದೆ ಹೋದರೆ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಳ್ಳಬಹುದು. ಆದ್ದರಿಂದ ನಾವು ಶಿಸ್ತುಬದ್ಧ ಜೀವನ ನಡೆಸಬೇಕಾದರೆ ಮನಸ್ಸಿನ ಚಂಚಲತೆಯನ್ನು ತಡೆದು ಬದುಕಿಗೊಂದು ಚೌಕಟ್ಟು ನಿರ್ಮಿಸಿಕೊಂಡು ಉತ್ತಮ ಜೀವನ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಾವು ಲವಲವಿಕೆಯಿಂದ ಕಾರ್ಯ ನಿರ್ವಹಿಸಬೇಕಾದರೆ ಕೇವಲ ದೇಹದ ಆರೋಗ್ಯ ಮಾತ್ರ ಸಾಲದು ಮಾನಸಿಕ ಆರೋಗ್ಯವೂ ಬೇಕು. ಆ ಆರೋಗ್ಯವನ್ನು ವೈದ್ಯರ ಚಿಕಿತ್ಸೆಯಿಂದ ಪಡೆಯಲು ಸಾಧ್ಯವಿಲ್ಲ. ಅದನ್ನು ನಾವೇ ನಮ್ಮಿಂದ ಪಡೆದುಕೊಳ್ಳಬೇಕು ಎಂಬುದನ್ನು ಮರೆಯಬಾರದು