ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹ ಹೆಚ್ಚಿನ ನೀರನ್ನು ಕಳೆದುಕೊಳ್ಳುವ ಕಾರಣ ದೇಹದೊಳಗೆ ವಿಷಕಾರಿ ವಸ್ತುಗಳ ಸಾಂದ್ರತೆ ಹೆಚ್ಚುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ನೀರು ಮತ್ತು ಇತರ ತಣ್ಣನೆಯ ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಲು ತಜ್ಞರು ಸಲಹೆ ಮಾಡುತ್ತಾರೆ. ಆದರೆ ಹಣ್ಣುಗಳ ರಸದಲ್ಲಿಯೂ ಹೆಚ್ಚಿನ ವಿಟಮಿನ್ ಮತ್ತು ವಿಶೇಷವಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವ ಕಾರಣ ನೀರಿನ ಕೊರತೆ ಪೂರ್ಣಗೊಂಡರೂ ಕ್ಯಾಲೋರಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿ ಕೊಬ್ಬು ಹೆಚ್ಚುತ್ತದೆ ಮತ್ತು ಪರಿಣಾಮವಾಗಿ ತೂಕವೂ ಹೆಚ್ಚುತ್ತದೆ. ಆದ್ದರಿಂದ ತೂಕ ಇಳಿಸುವ ನಿಟ್ಟಿನಲ್ಲಿ ಮತ್ತು ಬೇಸಿಗೆಯಲ್ಲಿ ಸಾಂದ್ರಗೊಂಡಿದ್ದ ಕಲ್ಮಶ ನಿವಾರಿಸುವ ಗುಣಗಳನ್ನು ಹೊಂದಿರುವ ಜ್ಯೂಸ್ ಬೇಸಿಗೆಯಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ.
ಬಿಸಿಲಿನ ಝಳ ಹೆಚ್ಚಿದ್ದ ಸಮಯದಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಹಣ್ಣುಗಳ ಆಯ್ಕೆ ಜಾಣತನದ ಕ್ರಮವಾಗಿದೆ. ಇದರಲ್ಲಿ ಕ್ರ್ಯಾನ್ಬೆರಿ, ಕಲ್ಲಂಗಡಿ ಹಣ್ಣು, ಅನಾನಾಸು, ಕಿವಿ ಹಣ್ಣು, ತರಬೂಜ ಅಥವಾ ಕರಬೂಜದ ಹಣ್ಣುಗಳು ಇತ್ಯಾದಿಗಳು ಉತ್ತಮ ಆಯ್ಕೆಯಾಗಿವೆ. ಇವುಗಳ ರುಚಿಯಲ್ಲಿ ಯಾವುದೇ ಕಡಿತ ಮಾಡದೇ ಪೋಷಕಾಂಶದ ಪ್ರಮಾಣವನ್ನು ಹೆಚ್ಚಿಸಲು ಒಂದು ಲೋಟಕ್ಕೆ ಒಂದು ಚಿಕ್ಕಚಮದಷ್ಟು ಕಾಮಕಸ್ತೂರಿ ಬೀಜಗಳನ್ನು ಸೇರಿಸಿದರೆ ಈ ಪೇಯದ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಮತ್ತು ಇತರ ಪೋಷಕಾಶಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಬೇಸಿಗೆಗೆ ಅತ್ಯುತ್ತಮ ಆಹಾರವಾಗಿದೆ. ಆಹಾರ ತಜ್ಞರು ಇತ್ತೀಚೆಗೆ ನೀಡಿರುವ ಮಾಹಿತಿಯ ಪ್ರಕಾರ ದಿನಕ್ಕೆ ಎರಡು ಲೋಟಗಳಾದರೂ ಕಲ್ಲಂಗಡಿ ಜ್ಯೂಸ್ ಕುಡಿಯುವುದರಿಂದ ಬೇಸಿಗೆಯ ಬಳಲಿಕೆ ಪೂರ್ಣವಾಗಿ ಮಾಯವಾಗುತ್ತದೆ.
ಕಲ್ಲಂಗಡಿಯಲ್ಲಿರುವ ಪೋಷಕಾಂಶಗಳು ದೇಹದ ನೀರಿನ ಅಗತ್ಯತೆಯನ್ನು ಪೂರ್ಣಗೊಳಿಸುವ ಜೊತೆಗೇ ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಿ ಆರೋಗ್ಯಕರವಾಗಿರಿಸಲು ನೆರವಾಗುತ್ತವೆ. ಅದರಲ್ಲೂ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ರಸ ಮತ್ತು ಕೊಂಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವ ಮೂಲಕ ಬೇಸಿಗೆಯಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತವೆ ಹಾಗೂ ಮೂತ್ರದ ಮೂಲಕ ದೇಹದ ಅನವಶ್ಯಕ ವಸ್ತುಗಳು ಸಹಾ ಹೊರಹೋಗುತ್ತವೆ. ಇದರಿಂದ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟ್ಯಾಶಿಯಂ, ತಾಮ್ರ ಮತ್ತು ಕಬ್ಬಿಣದಂತಹ ಖನಿಜಗಳೂ ವಿಟಮಿನ್ ಸಿ, B5, B1, B2, B3 ಮತ್ತು B6 ನಂತಹ ಪೋಷಕಾಂಶಗಳೂ ಇವೆ.