ನವಲಗುಂದ: ವೈಯಕ್ತಿಕ ಕಾರಣಗಳಿಂದ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬಾಗಲಕೋಟಿಯವರ ಗಣೇಶ ಕಾಂಪ್ಲೆಕ್ಸ್ನ ಬಾಡಿಗೆ ಮನೆಯಲ್ಲಿ ಸಂಭವಿಸಿದೆ.
ನರಗುಂದ ತಾಲೂಕು ಹಡ್ಲಿ ಗ್ರಾಮದ 45 ವಯಸ್ಸಿನ ಮಹೇಶ ಈಶ್ವರಪ್ಪ ಮಂತ್ರಿ ಎಂಬಾತನೇ ಆತ್ಮಹತ್ಯೆಗೆ ಶರಣಾದ ಗ್ರಾಮ ಲೆಕ್ಕಾಧಿಕಾರಿ. ಮಹೇಶ ಅವರು ಶಿರೂರು, ಗುಮ್ಮಗೊಳ, ಬ್ಯಾಲ್ಯಾಳ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ಬಾಗಿಲಿನ ಚಿಲಕ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.