ಕಾಸರಗೋಡು: ಮೊಬೈಲ್ ಗೀಳು ಅಂಟಿಸಿಕೊಂಡಿದ್ದ ಮಗನನ್ನು ಪ್ರಶ್ನೆ ಮಾಡಿದ ತಾಯಿಯನ್ನೇ ಮಗ ಹತ್ಯೆ ಮಾಡಿದ ಭೀಕರ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಣಿಚಿರ ನಿವಾಸಿ ರುಕ್ಮಿಣಿ ಅವರ ಪುತ್ರ ಸುಜಿತ್ ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ಈ ಬಗ್ಗೆ ತಾಯಿ ಆಕ್ಷೇಪ ವ್ಯಕ್ತಪಡಿಸಿ ಅತಿಯಾಗಿ ಮೊಬೈಲ್ ಬಳಸುವುದು ಒಳ್ಳೆಯದಲ್ಲ ಎಂದು ಬುದ್ಧಿಮಾತು ಹೇಳಿದ್ದರು. ಇದರಿಂದ ಕುಪಿತನಾದ ಪುತ್ರ ಸುಜಿತ್ ತಾಯಿಯ ತಲೆಯನ್ನು ಗೋಡೆಗೆ ಒತ್ತಿ ಹಿಡಿದು ಗಂಭೀರ ಹಲ್ಲೆ ನಡೆಸಿದ್ದ. ಗಾಯಗೊಂಡಿದ್ದ ತಾಯಿ ರುಕ್ಮಿಣಿ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಕರಣ ನಡೆದ ಬಳಿಕ ಸುಜಿತ್ ನನ್ನು ಪೊಲೀಸರು ಬಂಧಿಸಿದ್ದು ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಕೋಯಿಕ್ಕೋಡ್ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.