ಬೇಲೂರು: ಅಳಿಯನೊಬ್ಬ ಕುಡಿದ ಮತ್ತಿನಲ್ಲಿ ಮಾವನೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ ಪರಿಣಾಮ ಸಾವನ್ನಪ್ಪಿದ ಘಟನೆ ತಾಲೂಕಿನ ಇಬ್ಬೀಡು ಗ್ರಾಮಪಂಚಾಯತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತಮ್ಮಯ್ಯ (58) ಕೊಲೆಯಾದ ದುರ್ದೈವಿ. ಅಳಿಯ ಬಲ್ಲೇನಹಳ್ಳಿ ಗ್ರಾಮದ ಜಗದೀಶ್ ಎಂಬಾತನೇ ಹಲ್ಲೆ ಮಾಡಿ ಹತ್ಯೆಗೈದ ಆರೋಪಿ. ತಮ್ಮಯ್ಯ ಅವರು ಮಗಳು ಲತಾಳನ್ನು ತಮ್ಮ ಪಕ್ಕದ ಗ್ರಾಮದ ಬಲ್ಲೇನಹಳ್ಳಿ ಗ್ರಾಮದ ಜಗದೀಶ್ ಎಂಬುವರಿಗೆ ಸುಮಾರು 25 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು.
ಕುಡಿತದ ದಾಸನಾಗಿದ್ದ ಜಗದೀಶ್ ಪ್ರತಿನಿತ್ಯ ಕುಡಿದು ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ ಹಿನ್ನಲೆಯಲ್ಲಿ ತನ್ನ ತವರು ಮನೆಯಲ್ಲಿಯೇ ಲತಾ ತನ್ನ ಮಕ್ಕಳನ್ನು ಓದಿಸಿಕೊಂಡು ಇಲ್ಲಿನ ಅಂಗನವಾಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪ್ರತಿನಿತ್ಯ ಊರಿಗೆ ಬಂದು ಜಗಳವಾಡುತ್ತಿದ್ದ ಇವನ ಮೇಲೆ ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗುರುವಾರ ಮಧ್ಯಾಹ್ನ ಎಂದಿನಂತೆ ತನ್ನ ದನ ಕುರಿಗಳನ್ನು ಮೇಯಲು ಬಿಟ್ಟು ಪಕ್ಕದ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ತಮ್ಮಯ್ಯನವರನ್ನು ಕಂಠಪೂರ್ತಿ ಕುಡಿದು ಬಂದ ಜಗದೀಶ್ ತಮ್ಮಯ್ಯನವರ ಜೊತೆ ಜಗಳವಾಡಿ ಹಲ್ಲೆ ಮಾಡಿ ಬಿಟ್ಟು ಓಡಿಹೋಗಿದ್ದಾನೆ. ಅಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಅವನು ಸಹ ಆಸ್ಪತ್ರೆ ಬಳಿ ಇದ್ದು ತನ್ನ ಮಾವನಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಜೊತೆ ಸುಳ್ಳಿನ ನಾಟಕವಾಡಿದ್ದಾನೆ. ನಂತರ ತಮ್ಮಯ್ಯನವರನ್ನು ವೈದ್ಯರು ಹಾಗೂ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ ಆಸ್ಪತ್ರೆಗೆ ಬರುವ ಮುಂಚೆಯೇ ತಮ್ಮಯ್ಯ ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಿದರು.
ವಿಷಯ ತಿಳಿದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಬಳಿ ಜಮಾಯಿಸಿದಾಗ ನಾಟಕವಾಡಿದ ಜಗದೀಶ್ ಮಾವನಿಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆತಂದು ಬಿಟ್ಟಿದ್ದೇನೆ ಎಂದು ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾಗ ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಅರೋಪಿಯನ್ನು ಬಂಧಿಸಿ ಪೊಲಿಸ್ ಠಾಣೆಗೆ ಒಪ್ಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಜಯರಾಂ ಹಾಗೂ ಪಿಎಸ್ ಐ ಪ್ರವೀಣ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.