ಮುಳಬಾಗಿಲು: ಸಾಲ ಮರಳಿ ಕೇಳಿದ ಪರಿಶಿಷ್ಟ ಜಾತಿಯ ಯುವಕ ಮತ್ತು ಸಂಬಂಧಿ ಮಹಿಳೆಯ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಗುಡಿಸಲಿಗೆ ಬೆಂಕಿ ಹಚ್ಚಿದೆ ಘಟನೆ ಆದಿತ್ಯವಾರ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಗಾಯಗೊಂಡವರನ್ನು ಹನುಮಂತ (28) ಮತ್ತು ಆತನ ಅತ್ತಿಗೆ ಸುಧಮ್ಮ ಗುರುತಿಸಲಾಗಿದ್ದು. ಇವರನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹನುಮಂತ ಅವರ ಅಣ್ಣನ ಗುಡಿಸಲಿಗೆ ಆರೋಪಿಗಳು ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ.
ಆರೋಪಿಗಳೆಲ್ಲರೂ ಸಂಬಂಧಿಕರಾಗಿದ್ದು, ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ಹತ್ತು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೋಮವಾರ ಐವರನ್ನು ಬಂಧಿಸಲಾಗಿದ್ದು, ಉಳಿದ ಐವರು ತಲೆ ಮರೆಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಕೂಲಿ ಕೆಲಸ ಮಾಡುವ ಹನುಮಂತ ಮೂರು ವರ್ಷದ ಹಿಂದೆ ಸಂಬಂಧಿಯೊಬ್ಬರಿಂದ ತಮ್ಮದೇ ಗ್ರಾಮದ ಸಂತೋಷ್ ಎಂಬುವರಿಗೆ ₹50 ಸಾವಿರ ಸಾಲ ಕೊಡಿಸಿದ್ದರು. ಆದರೆ, ಸಾಲ ಹಿಂದಿರುಗಿಸದೆ ಸತಾಯಿಸುತ್ತಿದ್ದ ಸಂತೋಷ್ ವರ್ತನೆಯಿಂದ ರೋಸಿ ಹೋಗಿದ್ದ ಹನುಮಂತ ಭಾನುವಾರ ಸಂಜೆ ಆತನ ಮನೆಗೆ ತೆರಳಿ ಸಾಲ ಮರಳಿಸುವಂತೆ ಕೇಳಿದ. ಇದರಿಂದ ಇಬ್ಬರ ಮಧ್ಯೆ ಜಗಳವಾಗಿತ್ತು. ‘ಸ್ವಲ್ಪ ಸಮಯದ ಬಳಿಕ ಸಂಬಂಧಿಕರನ್ನು ಕರೆದುಕೊಂಡು ಮನೆ ಬಳಿ ಬಂದ ಸಂತೋಷ, ನನ್ನ ಮತ್ತು ನನ್ನ ಅತ್ತಿಗೆ ಸುಧಮ್ಮನನ್ನು ಜಾತಿ ಹೆಸರಿನಿಂದ ಅವಾಚ್ಯವಾಗಿ ನಿಂದಿಸಿ, ಕಲ್ಲು, ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನನ್ನ ಅಣ್ಣ ರೆಡ್ಡೆಪ್ಪ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಹನುಮಂತ ದೂರಿನಲ್ಲಿ ಹೇಳಿದ್ದಾರೆ.
ಈ ಘಟನೆ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ. ಭಾಸ್ಕರ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ನರಸಿಂಹಪ್ಪ ಸ್ಥಳಕ್ಕೆ ಗ್ರಾಮಕ್ಕೆ ನೀಡಿ ಪರಿಶೀಲಿಸಿದರು.