ಬೆಂಗಳೂರು: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ ಕಡೆಗಣನೆ ವಿರುದ್ಧ ಸಿಡಿದೆದ್ದ ಕರವೇ ಸಂಘಟನೆ ಇಂಗ್ಲಿಷ್ ಬೋರ್ಡ್ ಹರಿದು ಆಕ್ರೋಶ ಹೊರಹಾಕಿತ್ತು ಹೀಗಾಗಿ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಇಂದು ನಸುಕಿನ ಜಾವ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನಾರಾಯಣಗೌಡರು ಸೇರಿದಂತೆ 29 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ನೂರು ಬಾರಿ ಜೈಲಿಗೆ ಕಳುಹಿಸಿದರೂ ನಾವು ಹೆದರಲ್ಲ,ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾನು ಪ್ರವಾಸ ಮಾಡುತ್ತೇ. ನೆ. ಕನ್ನಡ ಇಲ್ಲದ ನಾಮಫಲಕ ಕಿತ್ತೊಗೆಯುತ್ತೇವೆ. ನಮ್ಮ ನಾಡಿನ ಇತಿಹಾಸಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಎಂದು ಬೆಂಗಳೂರಿನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸರ ಮೇಲೆ ನಾವು ಹಲ್ಲೆ ಮಾಡಿದ್ದೇವೆ ಅನ್ನೋದು ಸುಳ್ಳು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದನ್ನು ತೋರಿಸಿ. ನಮ್ಮ ಪೊಲೀಸರ ಮೇಲೆ ನಮಗೆ ಗೌರವ ಹಾಗೂ ಕಳಕಳಿ ಇದೆ. ಸಿದ್ದರಾಮಯ್ಯ ಕನ್ನಡಪ್ರೇಮಿ ಎಂದು ಅವರಿಗೆ ಬೆಂಬಲ ನೀಡಿದ್ದೆವು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಪೊಲೀಸರು ಬಲವಂತವಾಗಿ ನನ್ನ ಮೊಬೈಲ್ ಕಿತ್ತುಕೊಂಡಿದ್ದಾರೆ. ಪೊಲೀಸರು ದೌರ್ಜನ್ಯ, ದಬ್ಬಾಳಿಕೆ ಮಾಡಿದ್ದಾರೆ. ನನಗೆ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲ, ಔಷಧ ಕೂಡ ತೆಗೆದುಕೊಂಡಿಲ್ಲ. ರಾಜ್ಯಾದ್ಯಂತ ಕನ್ನಡಿಗರು ಬೀದಿ ಬೀದಿಗಿಳಿದು ಹೋರಾಟ ನಡೆಸಬೇಕು. ಗುಂಡಿಟ್ಟು ಕೊಂದ್ರೂ ಚಿಂತೆ ಇಲ್ಲ, ನಾವು ಹೆದರಲ್ಲ. ಇಂದು ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ಬೀದಿಗಿಳಿಯಬೇಕು ಎಂದು ಜಡ್ಜ್ ಮನೆಗೆ ಕರೆದೊಯ್ಯುವ ವೇಳೆ ಕರವೇ ನಾರಾಯಣಗೌಡ ಪೊಲೀಸರ ವಿರುದ್ಧ ಕಿಡಿಕಾರಿದ್ದರು.