ಅಹಮದಾಬಾದ್: ಸಂಬಳ ಕೇಳಿದ್ದಕ್ಕೆ ವ್ಯಕ್ತಿಯ ಬಾಯಿಗೆ ಚಪ್ಪಲಿ ಹಾಕಿ ಕ್ಷಮೆ ಕೇಳುವಂತೆ ಮಾಡಿದ ಅಮಾನವೀಯ ಘಟನೆ ಗುಜರಾತ್ನಲ್ಲಿ ನಡೆದಿದೆ. ರಾಣಿಬಾ ಇಂಡಸ್ಟ್ರೀಸ್ ಮಾಲೀಕಳಾದ ವಿಭೂತಿ ಪಟೇಲ್ ಅಲಿಯಾಸ್ ರಾಣಿಬಾ ವಿರುದ್ಧ ಈ ದೌರ್ಜನ್ಯ ಎಸಗಿರೋ ಗಂಭೀರ ಆರೋಪ ಕೇಳಿ ಬಂದಿದೆ.
21 ವರ್ಷದ ನೀಲೇಶ್ ಎಂಬ ಯುವಕ ರಾಣಿಬಾ ಇಂಡಸ್ಟ್ರೀಸ್ನಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ 12 ಸಾವಿರ ರೂಪಾಯಿ ಸಂಬಳಕ್ಕೆ ನೀಲೇಶ್ ನೇಮಕ ಮಾಡಿಕೊಳ್ಳಲಾಗಿತ್ತು. ನೀಲೇಶ್ ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಕ್ಕೆ ರಾಣಿಬಾ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಆರೋಪಿ ವಿಭೂತಿ ಪಟೇಲ್ ಹಾಗೂ ಇತರರು ನೀಲೇಶ್ಗೆ ಹೊಡೆದು ಟೇರೆಸ್ಗೆ ಎಳೆದೊಯ್ದಿದ್ದಾರೆ. ಈ ವೇಳೆ ನೀಲೇಶ್ ಬಾಯಿಗೆ ಚಪ್ಪಲಿ ಇಟ್ಟು ಕ್ಷಮೆ ಕೇಳುವಂತೆ ಆರೋಪಿಗಳು ಹಿಂಸಿಸಿದ್ದಾರೆ.
ಗುಜರಾತ್ ರಾಜ್ಯದ ಮೊರ್ಬಿ ಪಟ್ಟಣದಲ್ಲಿರುವ ರಾಣಿಬಾ ಇಂಡಸ್ಟ್ರೀಸ್ನಲ್ಲಿ ಈ ಘಟನೆ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ನೀಲೇಶ್ ದೂರಿನ ಆಧಾರದ ಮೇಲೆ ಉದ್ಯಮಿ ವಿಭೂತಿ ಪಟೇಲ್ ಅಲಿಯಾಸ್ ರಾಣಿಬಾ ವಿರುದ್ದ ದೂರು ದಾಖಲಾಗಿದೆ. ಈ ದೌರ್ಜನ್ಯಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.