ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ ಸಮಾವೇಶ ಕೇಂದ್ರವೊಂದರಲ್ಲಿ ಭಾನುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ಕಲಮಶ್ಯೇರಿಯಲ್ಲಿ ನಡೆದಿರುವುದು ಐಇಡಿ ಬ್ಲಾಸ್ಟ್ ಎಂದು ಪೊಲೀಸರು ದೃಢಪಡಿಸಿದ್ದಾರೆ. ಸದ್ಯ ಈ ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡ ಇದೆಯಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಘಟನೆಯ ಬಳಿಕ ತನಿಖೆಯ ನೇತೃತ್ವ ವಹಿಸಲು ಒಟ್ಟು 8 ವಿಶೇಷ ತಂಡಗಳನ್ನು ನೇಮಿಸಲಾಗಿದೆ. ಸ್ಫೋಟದಲ್ಲಿ ಭಯೋತ್ಪಾದಕರ ಕೈವಾಡ ಇರುವ ಶಂಕೆ ದಟ್ಟವಾಗಿದೆ. ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಲು ಕಲಮಶ್ಶೇರಿಗೆ ತೆರಳಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತದೆ ಎಂದು ಎಡಿಜಿಪಿ ತಿಳಿಸಿದ್ದಾರೆ.