ಬೀದರ್: ರಾಜ್ಯದ 8 ಕಡೆ ಹಾಗೂ ನೆರೆರಾಜ್ಯದ 4 ಕಡೆ ಎಟಿಎಮ್ ದೋಚಿ ಪರಾರಿಯಾಗಿದ್ದ ಖತರ್ನಾಕ್ ಖದೀಮರ ಗ್ಯಾಂಗ್ ಅನ್ನು ಬೀದರ್ ಪೊಲೀಸರು ಹೆಡೆಮುರಿ ಕಟ್ಟಿದ್ದು, ಹರಿಯಾಣ ಮೂಲದ ಮೂವರನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕರ್ನಾಟಕದ ಬೀದರ್ ಜಿಲ್ಲೆಯ ಹಳ್ಳಿಖೆಡ್(ಬಿ), ಬಸವಕಲ್ಯಾಣ, ಚಿಟಗುಪ್ಪ, ವಿಜಯಪುರ ಜಿಲ್ಲೆಯ 2 ಕಡೆ ಮತ್ತು ಬೆಳಗಾವಿಯ ಯಮಕನಮರಡಿ, ಅಂಕಲಿ ಚಿಕ್ಕೋಡಿ ಸೇರಿದಂತೆ ಒಟ್ಟು 8 ಕಡೆ ಮತ್ತು ನೆರೆಯ ತೆಲಂಗಾಣದ ಸದಾಶಿವಪೇಟ ಹಾಗೂ ಮಹಾರಾಷ್ಟ್ರದ ಉಮ್ಮರ್ಗಾ ಮತ್ತು ಮುರುಮ ಸೇರಿದಂತೆ 4 ಕಡೆ ಕಳ್ಳತನ ಕೃತ್ಯ ಎಸಗಿ ಪರಾರಿಯಾಗಿದ್ದರು. ಒಟ್ಟು 12 ಎಟಿಎಮ್ಗಳನ್ನ ಲೂಟಿ ಮಾಡಿ 1,58, 26,700 ಹಣ ಲೂಟಿ ಮಾಡಿ ಪರಾರಿಯಾಗಿದ್ದರು.
ಪ್ರಕರಣ ಬೆನ್ನತ್ತಿದ ಪೊಲೀಸರು, ಹುಮನಾಬಾದ್ ಆರ್ಟಿಓ ಬಳಿ ಖದೀಮರರನ್ನ ಬಂಧಿಸಿ ವಿಚಾರಣೆ ನಡೆಸಿದಾಗ 12 ಎಟಿಎಮ್ ಕಳ್ಳತನ ಬಯಲಿಗೆ ಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ 7 ಆರೋಪಿಗಳ ಪೈಕಿ ಹರಿಯಾಣ ರಾಜ್ಯದ ಶಾಹಿದ್ ಕಮಲ್ ಖಾನ್ , ರಿಹನ್ ಅಕ್ಬರ್ ಖಾನ್,ಇಲಿಯಾಸ್ ಅಬ್ದುಲ್ ರೆಹಮಾನ್ರನ್ನು ಬಂಧಿಸಲಾಗಿದೆ.
ಬಂಧಿತರಿಂದ 9,50,000 ರೂಪಾಯಿ ನಗದು, ಬಿಳಿ ಬಣ್ಣದ ಕ್ರಿಟಾ ಕಾರ್ ಜಪ್ತಿ ಮಾಡಲಾಗಿದೆ. ಆರೋಪಿತರು ಗೂಗಲ್ ಮ್ಯಾಪ್ ಸಹಾಯದೊಂದಿಗೆ ಟೋಲ್ ಗೇಟ್ ಇಲ್ಲದ ರಸ್ತೆಯಲ್ಲಿ ನಕಲಿ ನಂಬರ್ ಪ್ಲೇಟ್ಗಳನ್ನ ಬಳಸಿ ಗ್ಯಾಸ್ ವೆಲ್ಡಿಂಗ್ ಮೂಲಕ ATM ದರೋಡೆ ನಡೆಸುತ್ತಿದ್ರು ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಹೇಳಿದ್ದಾರೆ.