ಬೀದರ್: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಹಾಗೂ ಅತ್ತೆಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
ಲತಾ ಗುಣವಂತ ಸಾವಿಗೆ ಔರಾದ್ ತಾಲ್ಲೂಕಿನ ಕರಕ್ಯಾಳ ಗ್ರಾಮದ ಗುಣವಂತ ಕಾಶಿರಾಮ ಜಾಧವ, ಇವರ ತಾಯಿ ಭಾಗುಬಾಯಿ ಕಾಶಿರಾಮ ಜಾಧವ ಕಾರಣ ಎಂಬುದು ವಿಚಾರಣೆಯಿಂದ ಸಾಬೀತಾಗಿದೆ.
ಗುಣವಂತಗೆ 6 ವರ್ಷ ಸಾದಾ ಶಿಕ್ಷೆ, ಭಾಗುಬಾಯಿಗೆ 3 ವರ್ಷ ಸಾದಾ ಶಿಕ್ಷೆ. ಇಬ್ಬರಿಗೂ ತಲಾ ₹5 ಸಾವಿರ ದಂಡ ವಿಧಿಸಲಾಗಿದೆ. ದಂಡ ಭರಿಸದಿದ್ದಲ್ಲಿ 5 ತಿಂಗಳು ಹೆಚ್ಚಿನ ಸಾದಾ ಶಿಕ್ಷೆ ವಿಧಿಸತಕ್ಕದು ಎಂದು ನ್ಯಾಯಾಧೀಶ ಸಚಿನ್ ಕೌಶಿಕ್ ಆರ್.ಎನ್. ಅವರು ಬುಧವಾರ ತಮ್ಮ ತೀರ್ಪಿನಲ್ಲಿ ತಿಳಿಸಿದ್ಧಾರೆ.
‘ನೀನು ನೋಡಲು ಸರಿ ಇಲ್ಲ, ಚೆನ್ನಾಗಿ ಕೆಲಸ ಮಾಡುವುದಿಲ್ಲ. ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಹಣ ತೆಗೆದುಕೊಂಡು ಬಂದಿಲ್ಲ. ಹಣ ತೆಗೆದುಕೊಂಡು ಬರದಿದ್ದರೆ ಮಗನಿಗೆ ಇನ್ನೊಂದು ಮದುವೆ ಮಾಡುತ್ತೇವೆ’ ಎಂದು ಅತ್ತೆ ಭಾಗುಬಾಯಿ, ಲತಾಗೆ ಕಿರುಕುಳ ಕೊಟ್ಟಿದ್ದಾರೆ. ಲತಾ ತವರು ಮನೆಯವರಿಗೆ ಘಟನೆ ಕುರಿತು ವಿವರಿಸಿದ್ದಾಳೆ.
ಅವರು ₹50 ಸಾವಿರ ಕೊಟ್ಟು ಕಳಿಸಿದ್ದಾರೆ. ಇದಾದ ನಂತರವೂ ಮೊದಲಿನಂತೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಇದರಿಂದ ಬೇಸತ್ತ ಲತಾ 2016ರ ಸೆಪ್ಟೆಂಬರ್ 19ರಂದು ಕರಕ್ಯಾಳ ಗ್ರಾಮದ ನಾಗನಾಥ ಭಾಲೂರೆ ಅವರ ಹೊಲದ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ವಕೀಲ ಶರಣಗೌಡ ವಾದ ಮಂಡಿಸಿದ್ದರು.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821