ಬೆಂಗಳೂರು: ವಿದೇಶಿ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬಿಡಿಎ ಸೇತುವೆ ಬಳಿಯ ಖಾಸಗಿ ಸ್ಟಾರ್ ಹೋಟೆಲ್ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಉಜ್ಬೇಕಿಸ್ತಾನ ಮೂಲದ ಜರೀನಾ ಎಂದು ಗುರುತಿಸಲಾಗಿದೆ.
ಇದು ಮೇಲ್ನೋಟಕ್ಕೆ ಹಂತಕರು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಾಲ್ಕು ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಆಗಮಿಸಿದ್ದ ವಿದೇಶಿ ಮಹಿಳೆ ಖಾಸಗಿ ಸ್ಟಾರ್ ಹೋಟೆಲ್ನ ಸೆಕೆಂಡ್ ಪ್ಲೋರ್ನ ಕೊಠಡಿಯೊಂದರಲ್ಲಿ ತಂಗಿದ್ದರು.
ಸಂಜೆ ಹೋಟೆಲ್ ಸಿಬ್ಬಂದಿ ಎಷ್ಟೇ ಕೂಗಿದರು ಮಹಿಳೆ ಹೊರ ಬಂದಿರಲಿಲ್ಲ. ಹೀಗಾಗಿ ಮಧ್ಯರಾತ್ರಿ ಮಾಸ್ಟರ್ ಕೀ ಮೂಲಕ ಬಾಗಿಲು ತೆಗೆದಾಗ ಮಹಿಳೆ ಶವಪತ್ತೆಯಾಗಿದೆ.
ಕೊಲೆಯಾಗಿರುವ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಶೇಷಾದ್ರಿಪುರಂ ಪೊಲೀಸರು, ಎಫ್ಎಸ್ಎಲ್ ತಂಡ ಹಾಗೂ ಡಾಗ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಸಿಎಆರ್ಡಿಸಿಪಿ ಅರುಣಾಂಶು, ಕೇಂದ್ರ ವಿಭಾಗ ಡಿಸಿಪಿ ಶೇಖರ್ ಟೆಕ್ಕಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಹೋಟೆಲ್ ಮ್ಯಾನೇಜರ್ ಕೊಟ್ಟ ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ಇರುವುದರಿಂದ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.