ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ₹2 ಲಕ್ಷ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂಗಡಿ ನಡೆಸದಂತೆ ಮಾಡುತ್ತೇನೆ’ ಎಂದು ಬೆದರಿಸಿದ ಆರೋಪದ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ಜಿಲ್ಲಾ ಅಧ್ಯಕ್ಷ ಮಂಜುನಾಥ ಲೂತಿಮಠ ಸೇರಿದಂತೆ, ಏಂಟು ಮಂದಿ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕರವೇ ಅಧ್ಯಕ್ಷ ಮಂಜುನಾಥ ಲೂತಿಮಠಗೆ ಪಾಲಿಕೆ ಕನ್ನಡ ರಾಜ್ಯೋತ್ಸವ ನೀಡಿ ಗೌರವಿಸಲಾಗಿದ್ದು, ಇಂತಹವರಿಗೆ ಏಕೆ ಪ್ರಶಸ್ತಿ ನೀಡುತ್ತೀರಿ ಎಂದು ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಂಟಿಕೇರಿ ಅಳಗುಂಡಗಿ ಓಣಿಯ ಉದ್ಯಮಿ ವಿಜಯ ಅಳಗುಂಡಗಿ ಅವರು ಕರವೇ ಪ್ರವೀಣ ಶೆಟ್ಟಿ ಬಣದ ಮಂಜುನಾಥ ಲೂತಿಮಠ, ರಾಹುಲ್, ಅಮಿತ್, ಪ್ರವೀಣ, ಬಸವರಾಜ, ಬಾಲು, ಪ್ರಕಾಶ ಮತ್ತು ವಿಜಯ ವಿರುದ್ಧ ದೂರು ನೀಡಿದ್ದಾರೆ.
ದೂರಿನಲ್ಲಿ ಇಂತಿದೆ: ಕರ್ನಾಟಕ ರಕ್ಷಣಾ ವೇದಿಕೆಯ ಸ್ಥಳೀಯ ಅಧ್ಯಕ್ಷ ಎಂದು ಮಂಜುನಾಥ ಲೂತಿಮಠ ಅವರು, ಎರಡು–ಮೂರು ವರ್ಷಗಳಿಂದ ಸಹಚರರ ಜೊತೆ ಬಂದು ಬಟರ್ ಮಾರ್ಕೆಟ್, ಜವಳಿ ಸಾಲ, ಉಳ್ಳಾಗಡ್ಡಿ ಓಣಿ ವ್ಯಾಪರಸ್ಥರಿಗೆ ಹೆದರಿಸಿ ₹2 ಲಕ್ಷದಿಂದ ₹3 ಲಕ್ಷ ಹಣ ವಸೂಲಿ ಮಾಡಿದ್ದಾರೆ. ಅಕ್ಟೋಬರ್ 26ರಂದು ಉಳ್ಳಾಗಡ್ಡಿಮಠದ ಬಳಿಯ ನಿಖಿತಾ ಪ್ಲಾಸ್ಟಿಕ್ ಅಂಗಡಿ ಬಳಿ, ವಿಜಯ ಅವರನ್ನು ಕರೆಸಿಕೊಂಡು ರಾಜ್ಯೋತ್ಸವಕ್ಕೆ 2 ಲಕ್ಷ ಕೊಡಬೇಕು. ಪ್ರತಿ ಮೂರು ತಿಂಗಳಿಗೆ ನೀಡಬೇಕಾದ 1.70 ಲಕ್ಷ ಕಡ್ಡಾಯವಾಗಿ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಅಂಗಡಿ ನಡೆಸದಂತೆ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾರೆಂದು ಆರೋಪದಡಿ ಪ್ರಕರಣ ದಾಖಲಾಗಿದೆ.