ಬೆಂಗಳೂರು: ಬಿಎಂಟಿಸಿಯ ಕಮರ್ಷಿಯಲ್ ವಿಭಾಗದಲ್ಲಿ ಕೋಟಿ ಕೋಟಿ ಹಣ ಅಕ್ರಮ ನಡೆಸಿದ ಆರೋಪದ ಮೇಲೆ ಬಿಎಂಟಿಸಿಯ 7ಹಿರಿಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಅಸಿಸ್ಟೆಂಟ್ ಸೆಕ್ಯುರಿಟಿ ಅಂಡ್ ವಿಜಿಲೆನ್ಸ್ ಅಧಿಕಾರಿ ಸಿ.ಕೆ ರಮ್ಯ ನೀಡಿದ ದೂರಿನ ಅನ್ವಯ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಯಲ್ಲಿ ಏಳು ಜನ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಎ1 ಆರೋಪಿ ಶ್ರೀರಾಮ್ ಮುಲ್ಕಾವನ್ ಎನ್ನುವರನ್ನು ಪೊಲೀಸರು ಬಂಧಿಸಿದ್ದು, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಹಿಂದೆ ಬಿಎಂಟಿಸಿಯಲ್ಲಿ ಎಂಡಿಗಳಾಗಿದ್ದ ಶಿಖಾ, ರೇಜು ಮತ್ತು ಭದ್ರತಾ ಮತ್ತು ಜಾಗೃತದಳದ ನಿರ್ದೇಶಕ ಅರುಣ್. ಕೆ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಒಂದು ಕಡತದಲ್ಲಿ 10 ಕೋಟಿ 50 ಲಕ್ಷ ಹಾಗೂ ಮತ್ತೊಂದು ಕಡತದಲ್ಲಿ 6 ಕೋಟಿ 91 ಲಕ್ಷ ಹಾಗೂ 21 ಲಕ್ಷದ 64 ಸಾವಿರ, 1 ಲಕ್ಷದ 5 ಸಾವಿರ ಹೀಗೆ ಒಟ್ಟು ಸುಮಾರು 17 ಕೋಟಿ 64 ಲಕ್ಷ ರುಪಾಯಿ ಸಂಸ್ಥೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.